ಬೆಂಗಳೂರು: ಮುಂಬೈನಲ್ಲಿರುವ ಅತೃಪ್ತ ಶಾಸಕರೆಲ್ಲಾ ರಾಜ್ಯಕ್ಕೆ ವಾಪಸ್ ಬಂದ ಮೇಲೆ ಒಂದು ಸಿನಿಮಾ ಮಾಡಬಹುದು ಎಂದು ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಅವರು ಶನಿವಾರ ಹೇಳಿದ್ದಾರೆ.
ಇಂದು ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಸೋಮವಾರ ವಿಶ್ವಾಸಮತವನ್ನು ಸಾಬೀತು ಮಾಡುತ್ತೇವೆ. ಎಲ್ಲಿ, ಏನು ತಪ್ಪಾಗಿದೆ ಎಂದು ಚರ್ಚೆ ಮಾಡುತ್ತೇವೆ. ಜನಕ್ಕೆ ತಿಳಿಸುತ್ತೇವೆ. ನಮಗೆ ವಿಶ್ವಾಸ ಇದೆ. ಪ್ರತಿಪಕ್ಷದಲ್ಲಿರುವ ಶಾಸಕರೂ ನಮಗೆ ಬೆಂಬಲ ನೀಡುತ್ತಾರೆ ಎಂದು ಹೇಳಿದರು.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ನಾಯಕರು ಅವರ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರ ರಾಜಕಾರಣ ಅವರಿಗೆ, ನಮ್ಮ ರಾಜಕಾರಣ ನಮಗೆ, ಅತೃಪ್ತ ಶಾಸಕರು ವಾಪಸ್ ಬರಲು ಸಿದ್ಧರಿದ್ದಾರೆ. ಆದರೆ ಮುಂಬೈನಲ್ಲಿರುವ ಶಾಸಕರು ಇಂದಿಗೂ ಗನ್ ಪಾಯಿಂಟ್ ನಲ್ಲಿದ್ದಾರೆ. ಯಾರಿಗೂ ಮುಕ್ತವಾಗಿ ದೂರವಾಣಿಯಲ್ಲಿ ಮಾತನಾಡುವುದಕ್ಕೆ ಬಿಡುತ್ತಿಲ್ಲ, ಮೊಬೈಲ್ ಫೋನ್ ಅನ್ನು ಕಿತ್ತುಕೊಂಡಿದ್ದಾರೆ. ಆರು ಜನ ಶಾಸಕರನ್ನು ಲೋನಾವಾಲಾದಲ್ಲಿ, ಇನ್ನು ಉಳಿದ ಶಾಸಕರನ್ನು ಬೇರೆ ಕಡೆ ಸ್ಥಳಾಂತರ ಮಾಡಿದ್ದಾರೆ. ಎಲ್ಲಾ ಕಡೆಗಳಲ್ಲಿ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಿದ್ದಾರೆ ಎನ್ನುವ ಮೂಲಕ ಶಾಸಕರನ್ನು ಬಂಧನದಲ್ಲಿಟ್ಟಿದ್ದಾರೆಂದು ಹೇಳಿದರು.
ರಾಜ್ಯ ರಾಜಕಾರಣದ ಪ್ರಶ್ನೆಗೆ ಉತ್ತರಿಸಿದ ಅವರು, ಏನು ಮಾಡುವುದು ನಮ್ಮ ಸಂಸ್ಕೃತಿ ಈ ಮಟ್ಟಕ್ಕೆ ಬಂದಿದೆ. ಶಾಸಕರೆಲ್ಲಾ ವಾಪಸ್ ರಾಜ್ಯಕ್ಕೆ ಬಂದ ಮೇಲೆ ಒಂದು ಸಿನಿಮಾ ತೆಗೆಯಬಹುದು ಅಷ್ಟು ರೋಚಕವಾಗಿರಲಿದೆ ಎಂದರು.
ಲೋಕಸಭೆಯಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಅವರು ವಿಶ್ವಾಸಮತ ಮಂಡಿಸಿದಾಗ, ನಿರ್ಣಯದ ಮೇಲೆ ಚರ್ಚೆ ನಡೆಸಿ ಮತಕ್ಕೆ ಹಾಕಲು ಹತ್ತು ದಿನ ತೆಗೆದುಕೊ೦ಡಿದ್ದರು ಎಂದು ವಿಶ್ವಾಸಮತ ವಿಳಂಬವಾಗುವುದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಅಲ್ಲದೆ ಇನ್ನಷ್ಟು ವಿಳಂಬವಾಗುವ ಸೂಚನೆಯನ್ನು ಪರೋಕ್ಷವಾಗಿ ನೀಡಿದರು.
ಶಾಸಕ ಶ್ರೀಮಂತ್ ಪಾಟೀಲ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಮಹಾರಾಷ್ಟ್ರ ಕಾಂಗ್ರೆಸ್ ಶಾಸಕರು ಆಸ್ಪತ್ರಗೆ ಭೇಟಿ ನೀಡಿದಾಗ ಪೊಲೀಸರು ಶ್ರೀಮಂತ್ ಪಾಟೀಲ್ ಅವರ ಭೇಟಿಗೆ ಅವಕಾಶ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos