ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ಸಂಖ್ಯಾಬಲವಿಲ್ಲದೇ ಪತನವಾಗಿದೆ. ದೋಸ್ತಿ ಸರ್ಕಾರದ ಉಳಿವಿಗಾಗಿ ಅಂತಿಮ ಕ್ಷಣದವರೆಗೂ ಕಸರತ್ತು ಮಾಡಿದ್ದ ಹಂಗಾಮಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸರ್ಕಾರ ಪತನವಾದರೂ ತಾವು ಸಂತಸದಿಂದ ಇದ್ದೇನೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.
14 ತಿಂಗಳ ಕಾಲ ಕರ್ನಾಟಕ ಸರ್ಕಾರದ ಉಸ್ತುವಾರಿ ವಹಿಸಿಕೊಂಡಿದ್ದ ಎಚ್ ಡಿ ಕುಮಾರಸ್ವಾಮಿ ಸರ್ಕಾರ ಪತನದ ಬಳಿಕ ತಮಗೆ ಇಷ್ಟು ದಿನ ಸಹಕರಿಸಿದ ಅಧಿಕಾರಿಗಳಿಗೆ ಧನ್ಯವಾದ ಹೇಳಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, 'ರಾಜ್ಯದ ಜನರಿಗೆ ಕೊಟ್ಟ ಭರವಸೆಯಂತೆ ಪೂರ್ಣ ಸಾಲಮನ್ನಾ ಭರವಸೆ ಕೊನೆಗೂ ಈಡೇರಿದೆ. ಬಡವರು, ಕೃಷಿ ಕಾರ್ಮಿಕರು ಹಾಗೂ ಭೂರಹಿತ ಕೃಷಿಕರಿಗೆ ಋಣಪರಿಹಾರ ಕಾಯ್ದೆ ವರದಾನವಾಗಲಿದೆ ಎಂದು ಹೇಳಿದರು.
ಅಂತೆಯೇ 'ಜು 16ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಋಣಪರಿಹಾರ ವಿಧೇಯಕಕ್ಕೆ ಅನುಮೋದನೆ ನೀಡಿದ್ದು, ಮಂಗಳವಾರ ಅಂದರೆ ಜುಲೈ 23ರಿಂದಲೇ ಕಾಯ್ದೆ ಜಾರಿಗೆ ಬಂದಿದೆ. ಕಳೆದ ವರ್ಷ ರೈತರ ಸಾಲಮನ್ನಾ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಋಣಪರಿಹಾರ ಕಾಯ್ದೆ ಜಾರಿಗೆ ತರಲಾಗಿದೆ. ಡಿ.ದೇವರಾಜ್ ಅರಸು ಕಾಲದಲ್ಲಿ ಇಂತಹ ಮಹತ್ವದ ಕಾಯ್ದೆ ತರುವ ಮೂಲಕ ಬಡವರು, ಕೂಲಿ ಕಾರ್ಮಿಕರು, ಸಣ್ಣ ಹಿಡುವಳಿದಾರರ ಹಿತ ಕಾಯಲಾಗಿತ್ತು. ಅಂತಹುದೇ ಕಾರ್ಯವನ್ನು ಮಾಡಲು ಅನುಕೂಲವಾಗಿರುವ ಕಾಯ್ದೆ ಅಧಿಕಾರದಿಂದ ನಿರ್ಗಮಿಸುವ ವೇಳೆ ಜಾರಿಗೆ ಬರುತ್ತಿರುವುದು ಅತೀವ ಸಂತಸ ತಂದಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಹೆಚ್ಚಿನ ಬಡ್ಡಿ ವಸೂಲಾತಿ , ಕೈ ಸಾಲ ನೀಡುವುದು, ದಿನ, ವಾರದ ಬಡ್ಡಿಗಳು ಜಮೀನು, ಮನೆ , ವಾಹನ, ಚೆಕ್ ಅಡಮಾನದಂತಹ ಕೃತ್ಯಗಳಿಗೆ ಕಡಿವಾಣ ಬೀಳಲಿದೆ. ಕಾಯ್ದೆ ಜಾರಿಯಾದ ಒಂದು ವರ್ಷದ ಅವಧಿಗೆ ಮಾತ್ರ ಅನ್ವಯವಾಗಲಿದ್ದು, ವಿಭಾಗಾಧಿಕಾರಿ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಅವರಿಗೆ 90 ದಿನಗಳ ಒಳಗಾಗಿ ದಾಖಲೆ ಸಮೇತ ಅರ್ಜಿ ಸಲ್ಲಿಸಿದ್ದಲ್ಲಿ ಅದನ್ನು ಅವರು ಪರಿಶೀಲಿಸಿ ಅಡಮಾನ, ಭೋಗ್ಯ, ಕರಾರುಗಳ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಹಂಗಾಮಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಅಧಿಕಾರದಿಂದ ತಾವು ನಿರ್ಗಮಿಸುತ್ತಿದ್ದು, ಈ ವೇಳೆ ಮೈತ್ರಿ ಸರ್ಕಾರದ ಅಸ್ಥಿರತೆ ಗೊಂದಲಗಳಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಎಲ್ಲಾ ಹಿರಿಯ ಅಧಿಕಾರಿಗಳು ಉತ್ತಮವಾದ ಸಲಹೆ, ಸಹಕಾರ ನೀಡಿದ್ದಾರೆ. ರಾಜ್ಯದಲ್ಲಿ 14 ತಿಂಗಳಲ್ಲಿ ಹಲವು ವಿನೂತನ ಕಾರ್ಯಕ್ರಮ ನೀಡಿದ್ದೇವೆ. ರೈತರ ಸಾಲ ಮನ್ನಾ ಯೋಜನೆ, ರೈತರ ಆರ್ಥಿಕ ದೃಷ್ಟಿಯಿಂದ ಹಲವು ಯೋಜನೆ ತಂದಿದ್ದೇವೆ. ವಿವಿಧ ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್ ಆರಂಭಿಸಲಾಗಿದೆ. ಆರ್ಥಿಕ ಪ್ರಗತಿ ಹಾಗೂ ಆರ್ಥಿಕ ಶಿಸ್ತನ್ನು ಸಮರ್ಪಕವಾಗಿ ನಿರ್ವಹಿಸಲಾಗಿದೆ. ಈ ಕಾರ್ಯದಲ್ಲಿ ಶ್ರಮಿಸಿದ ಅಧಿಕಾರಿ ವರ್ಗಕ್ಕೆ ಅಭಿನಂದನೆಯ ಹೇಳುತ್ತಿದ್ದೇನೆ ಎಂದು ಹಂಗಾಮಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದರು.
ರಾಜ್ಯದಲ್ಲಿ ಮುಂದಿನ ದಿನಗಳಲ್ಲಿಯೂ ರಾಜಕೀಯ ಅಸ್ಥಿರತೆ ಮುಂದುವರಿಯಲಿದೆ ಎಂಬುದು ಇತ್ತೀಚಿನ ಘಟನಾವಳಿಗಳನ್ನು ನೋಡಿದಾಗ ಅಭಿಪ್ರಾಯ ಬರುಬಹುದಾಗಿ ಎಂದು ಅವರು ಸ್ಥಿರ ಸರ್ಕಾರ ನೀಡುವುದು ಬಿಜೆಪಿಯಿಂದ ಅಸಾಧ್ಯವೆಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಈ ಋಣಮುಕ್ತ ಕಾಯ್ದೆ ಜಾರಿಯಿಂದ ಬಡವರು, ಕೂಲಿ ಕಾರ್ಮಿಕರು, ಭೂ ರಹಿತರು ಹಾಗೂ ಕೃಷಿಕರಿಗೆ ಅನುಕೂಲವಾಗಲಿದೆ. 1.20 ಲಕ್ಷಕ್ಕಿಂತ ಕಡಿಮೆ ಆದಾಯವಿರುವವರು ಹಾಗೂ 5ಎಕರೆಗಿಂತ ಕಡಿಮೆ ಹಿಡುವಳಿ ಹೊಂದಿರುವ ರೈತರ ಖಾಸಗಿ ಸಾಲಗಳು, ಭೋಗ್ಯ, ಗುತ್ತಿಗೆ ಸಾಲಗಳು, ಅಡಮಾನ ಸಾಲಗಳು ಮನ್ನಾ ಆಗಲಿವೆ. ಅಂತೆಯೇ ಚಿನ್ನ ಅಡಮಾನ ವಿಟ್ಟುಕೊಂಡು ಸಾಲಪಡೆದಿರುವ ಪಾನ್ ಬ್ರೋಕರ್ಸ್ ಗಳು ಈ ವ್ಯಾಪ್ತಿಗೆ ಬರಲಿದ್ದಾರೆ. ಆರ್ ಬಿಐ ವ್ಯಾಪ್ತಿಯ ನಿಯಾಮವಳಿ ಹೊರತುಪಡಿಸು ನಡೆಸುವ ಗಿರವಿ ಅಂಗಡಿಗಳಿಗೂ ಋಣಪರಿಹಾರ ಕಾಯ್ದೆ ವ್ಯಾಪ್ತಿಗೆ ಬರಲಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos