ಬೆಂಗಳೂರು: ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿಯಾಗುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಈ ಅಪವಿತ್ರ ಕಾರ್ಯಕ್ರಮದಲ್ಲಿ ತಾವು ಪಾಲ್ಗೊಳ್ಳುತ್ತಿಲ್ಲ, ತಮ್ಮ ಪಕ್ಷದ ಯಾವುದೇ ಮುಖಂಡರು ಪಾಲ್ಗೊಳ್ಳದಂತೆ ನಿರ್ದೇಶನ ನೀಡಿದ್ದಾಗಿ ಅವರು ಟ್ವೀಟ್ ಮಾಡಿದ್ದಾರೆ.
ಅನೈತಿಕ, ಅಸಂವಿಧಾನಿಕ ರೀತಿಯಲ್ಲಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಭ್ರಷ್ಟಾಚಾರ, ಕುದುರೆ ವ್ಯಾಪಾರದ ಮೂಲಕ ಅಧಿಕಾರ ಹಿಡಿಯುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ತರುವ ರೀತಿಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಅವರು ಆರೋಪಿಸಿದ್ದಾರೆ.
ಯಡಿಯೂರಪ್ಪ ಪದಗ್ರಹಣ ಸಮಾರಂಭಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರನ್ನು ಆಹ್ವಾನಿಸಲಾಗಿತ್ತು, ಆದರೆ, ಯಡಿಯೂರಪ್ಪ ಅನೈತಿಕವಾಗಿ ಮುಖ್ಯಮಂತ್ರಿಯಾಗಿರುವುದರಿಂದ ಅವರ ಪದಗ್ರಹಣ ಕಾರ್ಯಕ್ರಮವನ್ನು ಪಕ್ಷದ ಮುಖಂಡರು ಬಹಿಷ್ಕರಿಸಿದ್ದರು ಎಂದು ಕಾಂಗ್ರೆಸ್ ವಕ್ತಾರ ರವಿಗೌಡ ತಿಳಿಸಿದರು.
ಜೆಡಿಎಸ್ ನಾಯಕರು ಕೂಡಾ ಯಡಿಯೂರಪ್ಪ ಪದಗ್ರಹಣ ಸಮಾರಂಭದಿಂದ ದೂರ ಉಳಿದಿದ್ದರು. ಬೇರೆ ಬೇರೆ ಕಾರಣಗಳಿಂದ ಪದಗ್ರಹಣ ಕಾರ್ಯಕ್ರಮದಿಂದ ದೂರ ಉಳಿದಿದ್ದಾಗಿ ಜೆಡಿಎಸ್ ವಕ್ತಾರ ರಮೇಶ್ ಬಾಬು ಹೇಳಿದರು
ಈ ಮಧ್ಯೆ ಯಡಿಯೂರಪ್ಪ ಸರ್ಕಾರ ಹೆಚ್ಚಿನ ದಿನ ಉಳಿಯಲಾರದು ಎಂದು ಜೆಡಿಎಸ್ ಹಿರಿಯ ಶಾಸಕ ಬಸವರಾಜ್ ಹೊರಟ್ಟಿ ಭವಿಷ್ಯ ನುಡಿದಿದ್ದಾರೆ.