ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ಕೈ ಕೊಟ್ಟು ರಾಜಿನಾಮೆ ನೀಡಿ ಮುಂಬೈಗೆ ಪಲಾಯನ ಮಾಡಿರುವ ಅತೃಪ್ತ ಶಾಸಕರಿಗೆ ಮಾಸ್ಟರ್ ಸ್ಟ್ರೋಕ್ ಕೊಡಲು ಕಾಂಗ್ರೆಸ್ ರಣತಂತ್ರವೊಂದನ್ನು ಹೆಣೆಯುತ್ತಿದೆ.
ಕಾಂಗ್ರೆಸ್ ಚಿಹ್ನೆಯಿಂದ ಗೆದ್ದು ರಾಜಿನಾಮೆ ನೀಡಿರುವ ಅತೃಪ್ತ ಕೈ ಶಾಸಕರಿಗೆ ಪಾಠ ಕಲಿಸಲು ಕಾಂಗ್ರೆಸ್ ಮುಂದಾಗಿದೆ. ಹೀಗಾಗಿ ಈಗಿನಿಂದಲೇ ಉಪಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅತೃಪ್ತ ಶಾಸಕರಿಗೆ ಸೆಡ್ಡು ಹೊಡೆಯಲು ಉಪಚುನಾವಣೆಯಲ್ಲಿ ಯಾವ ಅಭ್ಯರ್ಥಿಗಳನ್ನು ನಿಲ್ಲಿಸಬೇಕು ಎಂದು ಕಾಂಗ್ರೆಸ್ ವಲಯದಲ್ಲಿ ಚರ್ಚೆ ಶುರುವಾಗಿದೆ.
* ಅತೃಪ್ತ ಶಾಸಕರಾದ ಮುನಿರತ್ನ ಅವರು ಸ್ಪರ್ಧಿಸಿದ್ದ ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಕೈ ಅಭ್ಯರ್ಥಿಯಾಗಿ ಪ್ರಿಯಾಕೃಷ್ಣರ ಹೆಸರು ಮುಂಚೂಣಿಯಲ್ಲಿದೆ.
* ಹೊಸಕೋಟೆ ಕ್ಷೇತ್ರದಿಂದ ಎಂಟಿಬಿ ನಾಗರಾಜ್ ವಿರುದ್ಧ ಮಾಜಿ ಶಾಸಕ ಮಂಜುನಾಥ್ ಗೌಡ ಕಣಕ್ಕೆ ಸಾಧ್ಯತೆ
* ಶಿವಾಜಿನಗರದಿಂದ ರೋಷನ್ ಬೇಗ್ ಗೆ ವಿರುದ್ಧವಾಗಿ ರಿಜ್ವಾನ್ ಅರ್ಷದ್ ರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪ್ಲಾನ್ ಮಾಡುತ್ತಿದೆ.
* ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕೆ. ಸುಧಾಕರ್ ವಿರುದ್ಧವಾಗಿ ಚಿಂತಾಮಣಿ ಮಾಜಿ ಶಾಸಕ ಎಂಸಿ ಸುಧಾಕರ್ ಅಥವಾ ಆಂಜನಪ್ಪ.
* ಕೆಆರ್ ಪುರಂ ಕ್ಷೇತ್ರದಿಂದ ಭೈರತಿ ಬಸವರಾಜುಗೆ ವಿರುದ್ಧವಾಗಿ ಎಂಎಲ್ಸಿ ನಾರಾಯಣಸ್ವಾಮಿ ಅಥವಾ ಬಿಬಿಎಂಪಿ ಸದಸ್ಯ ಉದಯ್ ಕುಮಾರ್ ಅವರ ಹೆಸರು ಕೇಳಿಬರುತ್ತಿದೆ.
* ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧವಾಗಿ ಸಹೋದರ ಲಖನ್ ಜಾರಕಿಹೊಳಿಯನ್ನೇ ಕಣಕ್ಕಿಳಿಸಲು ಕಾಂಗ್ರೆಸ್ ಯೋಜಿಸಿದೆ ಅನ್ನಲಾಗಿದೆ.
* ಕೆಆರ್ ಪೇಟೆಯಿಂದ ಚಲುವರಾಯಸ್ವಾಮಿ. ಮಹಾಲಕ್ಷ್ಮೀ ಲೇಔಟ್ ನಿಂದ ಮಾಗಡಿ ಬಾಲಕೃಷ್ಣ.