ಬೆಂಗಳೂರು: ರಾಜ್ಯದಲ್ಲಿ ಜಾತ್ಯಾತೀತ ಜನತಾದಳದೊಡನೆ ಮೈತ್ರಿ ಮಾಡಿಕೊಂಡದ್ದೇ ಕಾಂಗ್ರೆಸ್ ಸೋಲಿಗೆ ಕಾರಣ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
"ರಾಜ್ಯದಲ್ಲಿ ಕಾಂಗ್ರೆಸ್ ಮೈತ್ರಿ ಇಲ್ಲದೆ ಏಕಾಂಗಿಯಾಗಿ ಲೋಕಸಭೆ ಚುನಾವಣೆ ಎದುರಿಸಿದ್ದರೆ ಕನಿಷ್ಟ ಹತ್ತು ಸ್ಥಾನಗಳನ್ನು ಗಳಿಸುತ್ತಿತ್ತು ಎಂದು ಸುಮಲತಾ ಅಭಿಪ್ರಾಯಪಟ್ಟರು.
"ಜನರು ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ಒಪ್ಪಿಕೊಂಡಿಲ್ಲ, ಆ ಕುರಿತಂತೆ ನಾನು ಕಾಂಗ್ರೆಸ್ ನಾಯಕರಿಗೆ ಮನವರಿಕೆ ಮಾಡಿಸಲು ಪ್ರಯತ್ನಿಸಿದ್ದೆ, ಆದರೆ ಅವರು ನನ್ನ ಮಾತಿನ ಕುರಿತು ಕಾಳಜಿ ತೋರಲಿಲ್ಲ.ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ತಾನು ಗೆಲ್ಲಬಹುದಾಗಿದ್ದ ಸ್ಥಾನವನ್ನೂ ಬಿಟ್ಟುಕೊಟ್ಟಿತು. ಇದುವೇ ಬಿಜೆಪಿ ಗೆಲ್ಲಲು ಸುಲಭ ದಾರಿಯಾಗಿತ್ತು" ಅವರು ವಿವರಿಸಿದರು,
"ಕಾಂಗ್ರೆಸ್ ನಲ್ಲಿ ಉತ್ತಮ ಅಭ್ಯರ್ಥಿಗಳಿದ್ದರೂ ಸಹ ಮೈತ್ರಿಯ ಕಾರಣ ಅವರು ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಹಾಗ್ಗಿ ಕಾಂಗ್ರೆಸ್ ಸೋಲೊಪ್ಪಬೇಕಾಯಿತು " ಸುಮಲತಾ ಹೇಳಿದ್ದಾರೆ.
ಕಳೆದ ತಿಂಗಳು ನಡೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಸಿಎಂ ಎಚ್.ಡಿ. ಕುಮಾರಸ್ವಾಮಿ ಪುತ್ರ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ವಿರುದ್ಧ ಲಕ್ಷಕ್ಕೆ ಹೆಚ್ಚು ಮತಗಳ ಅಂತರದಲ್ಲಿ ವಿಜಯ ಸಾಧಿಸಿದ್ದರು.