ಮಂಡ್ಯ: ಜೆಡಿಎಸ್ ನಾಯಕರು ತಮ್ಮ ಮಾತುಕತೆ ಹಾಗೂ ನಡವಳಿಕೆಯನ್ನು ತಿದ್ದಿಕೊಂಡರೆ ಮೈತ್ರಿ ಸರ್ಕಾರ ಮುಂದುವರಿಸುವ ಅವಕಾಶವಿದೆ. ಮೈತ್ರಿ ಸರ್ಕಾರದಿಂದ ಕಾಂಗ್ರೆಸ್ ಪಕ್ಷಕ್ಕಿಂತ ಜೆಡಿಎಸ್ ಗೆ ಭರ್ಜರಿ ಲಾಭ ಆಗಿದೆ. ಜನರ ಸಮಸ್ಯೆಗೆ ಸ್ಪಂದಿಸಿದರೆ ಸರ್ಕಾರ ಉಳಿಯುತ್ತದೆ. ಇಲ್ಲದಿದ್ದಲ್ಲಿ ಸರ್ಕಾರ ನಡೆಸುವುದು ಕಷ್ಟಸಾಧ್ಯ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ಅವರು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಕ್ಷಣಕ್ಕೆ ಯಾರಿಗೂ ಚುನಾವಣೆ ಅವಶ್ಯಕತೆ ಇಲ್ಲ. ಆದರೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಹೇಳಿದ್ದಾರೆಂದರೇ ಸತ್ಯ ಇದೆ ಅನ್ನಿಸುತ್ತದೆ. ಚುನಾವಣೆಗೆ ಹೋಗುವ ವಾತಾವರಣ ನಮಗೆ ಕಂಡು ಬರುತ್ತಿಲ್ಲ, ಆದರೂ ದೇವೇಗೌಡರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಎಲ್ಲಾ ಪಕ್ಷಗಳು ಈಗ ಅಭಿವೃದ್ಧಿ ಬಿಟ್ಟು ರಾಜಕೀಯ ವಿಚಾರದಲ್ಲಿ ತೊಡಗಿಕೊಂಡಿವೆ ಎಂದರು.
ಇಂತಹ ಗೊಂದಲದ ಪರಿಸ್ಥಿತಿಯನ್ನು ಇದೆಲ್ಲವನ್ನೂ ನೋಡಿ ಮತದಾರರು ಒಂದು ಪಕ್ಷಕ್ಕೆ ಬಹುಮತ ನೀಡಲು ತೀರ್ಮಾನಿಸಿದ್ದಾರೆ ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರದಲ್ಲಿ ಭಾರಿ ಬಹುಮತದಿಂದ ಆಯ್ಕೆಯಾದ ಬಿಜೆಪಿ ಸರ್ಕಾರದ ಬಗ್ಗೆ ಅವರು ಪ್ರಸ್ತಾಪಿಸಿದರು.
ರಾಜ್ಯದ ರಾಜಕಾರಣ ಕವಲು ದಾರಿಯಲ್ಲಿ ಸಾಗುತ್ತಿದೆ, ಕಳೆದ ಒಂದು ವರ್ಷದಿಂದ ಎರಡೂ ಪಕ್ಷಗಳ ನಡುವೆ ಸಮನ್ವಯ ಕಾಯ್ದುಕೊಂಡಿದ್ದರೆ ಈ ಭಿನ್ನಾಭಿಪ್ರಾಯ ಬರುತ್ತಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ. ತಮ್ಮ ಮಾತು ಹಾಗೂ ನಡವಳಿಕೆ ತಿದ್ದಿಕೊಂಡರೆ ಜೆಡಿಎಸ್ ಗೆ ಸರ್ಕಾರ ಮುಂದುವರಿಸುವ ಅವಕಾಶವಿದೆ. ಜನರ ಸಮಸ್ಯೆಗಳಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸಿದರೆ ಸರ್ಕಾರ ಉಳಿಯುತ್ತದೆ ಎಂದರು.
ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶ ಕಾಂಗ್ರೆಸ್-ಜೆಡಿಎಸ್ ಪಕ್ಷದ್ದು, ಹೀಗಾಗಿಯೇ 37 ಸೀಟು ಗೆದ್ದವರಿಗೆ ಕಾಂಗ್ರೆಸ್ ಅಧಿಕಾರ ಬಿಟ್ಟುಕೊಟ್ಟಿದೆ. ಲೋಕಸಭಾ ಚುನಾವಣಾ ಫಲಿತಾಂಶವನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ಪಕ್ಷದ ನಾಯಕರು ಸಮನ್ವಯತೆಯಿಂದ ಸರ್ಕಾರ ನಡೆಸಬೇಕು ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ತಿರುಗೇಟು ನೀಡಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos