ಬೆಂಗಳೂರು: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ನಿನ್ನೆ ಬೆಳಗ್ಗೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಅನಿವಾರ್ಯ ಎಂದಿದ್ದರು. ದೇವೇಗೌಡರು ನಿನ್ನೆ ಯೋಗ ದಿನಾಚರಣೆ ದಿನ ಹಾಗೆ ಹೇಳಿದ್ದೇ ತಡ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತು.
ನಂತರ ತಮ್ಮ ಮಾತನ್ನು ಅಷ್ಟೇ ವೇಗವಾಗಿ ದೇವೇಗೌಡರು ಹಿಂತೆಗೆದುಕೊಂಡರು, ನಾನು ಹಾಗೆ ಹೇಳಲೇ ಇಲ್ಲ, ಮಾಧ್ಯಮದವರು ಹೇಳಿಕೆಯನ್ನು ತಿರುಚಿದ್ದಾರೆ ಎಂದರು. ಆದರೆ ದೇವೇಗೌಡರ ಈ ಹೇಳಿಕೆಯನ್ನು ಅಷ್ಟು ಸುಲಭವಾಗಿ ತಳ್ಳಿಹಾಕುವಂತಿಲ್ಲ.
ಒಂದು ವರ್ಷದ ಹಿಂದೆ ಅಧಿಕಾರಕ್ಕೆ ಬಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿಸರ್ಕಾರದ ಸ್ಥಿತಿಗತಿ ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಬದಲಾಗಿದೆ. ಮೈತ್ರಿಕೂಟದ ಸಂಕೀರ್ಣ ಸ್ಥಿತಿಗತಿಯ ಚದುರಂಗದಾಟದಲ್ಲಿ ದೇವೇಗೌಡರ ಈ ಹೇಳಿಕೆ ಜೆಡಿಎಸ್ ನ್ನು ಕಾಪಾಡಲು ರಕ್ಷಣಾತ್ಮಕ ಆಟವಾಡುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕಾಂಗ್ರೆಸ್ ನಲ್ಲಿ ಅತೃಪ್ತ ಶಾಸಕರು ಮತ್ತು ನಾಯಕರು ಆಗಾಗ ತಮ್ಮ ಅಸಮಾಧಾನ ಹೊರಹಾಕುತ್ತಲೇ ಇರುತ್ತಾರೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ಕಾಂಗ್ರೆಸ್ ಗೆ ದೊಡ್ಡ ಮಟ್ಟದಲ್ಲಿ ಹಾನಿಯಾಗಿದ್ದು ಅದು ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಗೊತ್ತಾಗಿದೆ ಎಂದು ಹೇಳಲಾಗುತ್ತಿದೆ. ಇದು ಮುಂದುವರಿಯಬಾರದು ಎಂದು ಕಾಂಗ್ರೆಸ್ ಮೈತ್ರಿ ಮುರಿದುಕೊಳ್ಳಲು ತಯಾರಿದ್ದು ಈ ಹೊತ್ತಿನಲ್ಲಿ ಅದಕ್ಕೆ ತಾವೇ ನಾಂದಿ ಹಾಡಲು ಗೌಡರು ಮುಂದಾಗಿದ್ದಾರೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕ ಪ್ರೊ ನರೇಂದ್ರ ಪಾಣಿ.
ಸರ್ಕಾರದಲ್ಲಿರುವವರು ಮೈತ್ರಿಯಲ್ಲಿ ಮುಂದುವರಿಯಬೇಕು ಎಂದು ಬಯಸುತ್ತಿದ್ದರೆ ಸರ್ಕಾರದಿಂದ ಹೊರಗೆ ಇರುವವರು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನಂತವರು ಮೈತ್ರಿ ಮುರಿಯಲು ಒಲವು ಹೊಂದಿದ್ದಾರೆ. ಎರಡೂ ಪಕ್ಷಗಳಿಗೆ ಈ ಮೈತ್ರಿಯಿಂದ ಸಹಾಯವಾಗುವುದಿಲ್ಲ ಎಂಬ ಅಭಿಪ್ರಾಯ ಅವರಲ್ಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos