ಮೈಸೂರು: ಚನ್ನಪಟ್ಟಣ ಗಂಡನಿಗೆ,ರಾಮನಗರ ಹೆಂಡತಿಗೆ, ಮಂಡ್ಯ ಮಗನಿಗೆ, ಹಾಸನ ಜಿಲ್ಲೆ ಅಣ್ಣಮ ಮಗನಿಗೆ, ಕರ್ನಾಟಕ ಏನು ದೇವೇಗೌಡರ ಅಪ್ಪನ ಮನೆ ಆಸ್ತಿನಾ? ಕರ್ನಾಟಕದ ಒಕ್ಕಲಿಗರು ದೇವೇಗೌಡರ ಕುಟುಂಬಕ್ಕೆ ಜಿಪಿಎ ಮಾಡಿಕೊಟ್ಟಿಲ್ಲ ಎಂದು ಬಿಜೆಪಿ ಶಾಸಕ ಪ್ರೀತಂ ಗೌಡ ಕಿಡಿಕಾರಿದ್ದಾರೆ.
ಮೈಸೂರಲ್ಲಿ ನಡೆದ ಸಮಾವೇಶ ಮಾತನಾಡಿದ ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡ, ದೇವೇಗೌಡರ ಕುಟುಂಬದ್ದು ಪ್ರೈವೇಟ್ ಲಿಮಿಟೆಡ್ ಕಂಪನಿ ಇದ್ದಂತೆ. ವೇದಿಕೆ ಮೇಲಿರುವ ಸಂಸದ ಪ್ರತಾಪ ಸಿಂಹ, ಶಾಸಕ ನಾಗೇಂದ್ರ, ನಾನೂ ಗೌಡರೇ. ನಾವೇನು ಪಾಕಿಸ್ತಾನ, ಆಘಾನಿಸ್ತಾನದಿಂದ ಬಂದಿದ್ದೇವೆಯೇ? ದೇವೇಗೌಡರು ತಮ್ಮ ಕುಟುಂಬಕ್ಕೆ ಕ್ಷೇತ್ರವನ್ನು ಹಂಚಿಕೊಡುತ್ತಿದ್ದಾರೆ. ಕರ್ನಾಟಕವೇನು ದೇವೇಗೌಡರ ಅಪ್ಪನ ಮನೆ ಆಸ್ತೀನಾ? ಒಕ್ಕಲಿಗರಾರು ದೇವೇಗೌಡರಿಗೆ ಜಿಪಿಎ ಬರೆದುಕೊಟ್ಟಿಲ್ಲ ಎಂದು ಹರಿಹಾಯ್ದಿದ್ದಾರೆ.
ಇನ್ನೂ ಇದಕ್ಕೂ ಮೊದಲು ಸಮಾವೇಶ ಉದ್ಘಾಟಿಸಿ ಮಾತನಾಡಿದ ಕೇಂದ್ರದ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು, ಮಂಡ್ಯ ಜಿಲ್ಲೆಯಲ್ಲಿ ರೈತರು ಸಂಕಷ್ಟ ಪರಿಸ್ಥಿತಿಯಲ್ಲಿದ್ದಾರೆ. ಕಾವೇರಿ ಜಲವಿವಾದದಂತಹ ಸೂಕ್ಷ್ಮ ವಿಚಾರಗಳಿವೆ. ಇಂತಹ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ಗೆ ಒಬ್ಬ ಸಮರ್ಥ ಅಭ್ಯರ್ಥಿ ಸಿಗಲಿಲ್ವಾ? ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರೇ ಅಭ್ಯರ್ಥಿ ಆಗಬೇಕಿತ್ತಾ? ಹಾಸನಕ್ಕೆ ಒಬ್ಬ ಮೊಮ್ಮಗ, ಮಂಡ್ಯದಲ್ಲಿ ಮತ್ತೊಬ್ಬ ಮೊಮ್ಮಗನಿಗೆ ಟಿಕೆಟ್ ಕೊಡ್ತಾರಂತೆ. ಏನ್ರೀ ಇದೆಲ್ಲಾ...? ಎಂದು ಶ್ರೀನಿವಾಸಪ್ರಸಾದ್ ಆಕ್ರೋಶದಿಂದ ವ್ಯಕ್ತ ಪಡಿಸಿದರು.
ದೇವೇಗೌಡರಿಗೆ ಈಗ 86 ವರ್ಷ. ಮತ್ತೆ ಸಂಸದರಾದರೆ 91 ವರ್ಷದವರೆಗೂ ಸಂಸದರಾಗಿರುತ್ತಾರೆ. ದೇವೇಗೌಡರನ್ನು ಲೋಕಸಭೆಗೆ ಕೈಹಿಡಿದು ಕರೆತರಲು ಈ ಹಿಂದೆ ಸಿ.ಎಸ್.ಪುಟ್ಟರಾಜು, ಚೆಲುವರಾಯಸ್ವಾಮಿ ಇದ್ದರು. ಈಗ ದೇವೇಗೌಡರ ಇಬ್ಬರು ಮೊಮ್ಮಕ್ಕಳಾದ ಪ್ರಜ್ವಲ್ ಹಾಗೂ ನಿಖಿಲ್ ಈ ಕೆಲಸ ಮಾಡಲಿ ಎಂದು ಅವರಿಗೆ ಟಿಕೆಟ್ ಕೊಡಲು ಹೊರಟಿದ್ದಾರೆ. ದೇವೇಗೌಡರ ಬಗ್ಗೆ ಎಲ್ಲರಿಗೂ ಗೌರವ ಇದೆ. ಆದರೆ, ನಂಬಿಕೆ ಇಲ್ಲ ಎಂದು ಶ್ರೀನಿವಾಸ ಪ್ರಸಾದ್ ಕುಟುಕಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos