ಮಂಗಳೂರು: ಪಾಕಿಸ್ತಾನದ ಬಾಲಕೋಟ್ ನಲ್ಲಿ ಭಾರತೀಯ ವಾಯುಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಹತರಾದ ಉಗ್ರರ ಸಂಖ್ಯೆಯನ್ನು ಪ್ರಶ್ನಿಸುತ್ತಿರುವ ಕಾಂಗ್ರೆಸ್ ಹಾಗೂ ಇತರೆ ಮಹಾಘಟಬಂಧನ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ಹತರಾದ ಉಗ್ರರ ಸಂಖ್ಯೆ ಕೇಳುವ ರೀತಿ ನಮ್ಮ ಸೈನಿಕರ ಶೌರ್ಯ ಪ್ರಶ್ನಿಸುವಂತಿದೆ ಎಂದು ಹೇಳಿದ್ದಾರೆ.
ಇಂದು ನೆಹರೂ ಮೈದಾನದಲ್ಲಿ ಬಿಜೆಪಿ ಶಕ್ತಿ ಕೇಂದ್ರಗಳ ಪ್ರಮುಖರ ಸಮಾವೇಶ ಉದ್ಘಾಟಿಸಿ ಮಾತನಾಡಿದ ರಾಜನಾಥ್ ಸಿಂಗ್, ಭಾರತ ವೈಮಾನಿಕ ದಾಳಿ ನಡೆಸುವ ಮೂಲಕ ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸಿದೆ. ಆದರೆ ಕೆಲ ಪಕ್ಷಗಳು ಈ ದಾಳಿಯನ್ನು ಅನುಮಾನದಿಂದ ನೋಡುತ್ತಿದ್ದು, ಹತರಾದ ಉಗ್ರ ಸಂಖ್ಯೆಯ ಬಗ್ಗೆ ಸಾಕ್ಷ್ಯ ಕೇಳುತ್ತಿವೆ. ಅವರಿಗೆ ಹತ್ಯೆಯಾದ ಉಗ್ರರ ಸಂಖ್ಯೆ ಬೇಕು. ಆದರೆ ಶೌರ್ಯವಂತರು ಮೃತ ದೇಹಗಳನ್ನು ಲೆಕ್ಕ ಹಾಕುವುದಿಲ್ಲ ಎಂದರು.
ಕಳೆದ ಐದು ವರ್ಷಗಳು ಮೂರು ಬಾರಿ ವೈಮಾನಿಕ ದಾಳಿ ನಡೆಸಿದ್ದೇವೆ. ಉರಿ ಮತ್ತು ಪುಲ್ವಾಮ ಉಗ್ರ ದಾಳಿ ನಂತರ ನಡೆದ ವೈಮಾನಿಕ ದಾಳಿಯ ಬಗ್ಗೆ ನಿಮಗೆಲ್ಲ ಗೊತ್ತಿದೆ. ಆದರೆ ಮೂರನೇ ದಾಳಿಯ ಬಗ್ಗೆ ನಾನು ಹೇಳುವುದಿಲ್ಲ ಎಂದರು.
ಇಂದು ಭಾರತ ಸದೃಢವಾಗಿದ್ದು, ಎಲ್ಲ ವಿರೋಧಿಗಳಿಗೆ ತಕ್ಕ ಉತ್ತರವನ್ನು ನೀಡುತ್ತಿದೆ. ನಾವು ಯಾರ ತಂಟೆಗೂ ಹೋಗಲ್ಲ. ಒಂದು ವೇಳೆ ನಮ್ಮ ತಂಟೆಗೆ ಯಾರದ್ರೂ ಬಂದ್ರೆ ಸುಮ್ಮನೆ ಬಿಡಲ್ಲ ಎಂಬ ನಿಯಮ ನಮ್ಮಲ್ಲಿದೆ. ಈಗಾಗಲೇ ಅಂತವರಿಗೆ ತಕ್ಕ ಪ್ರತ್ಯುತ್ತರವನ್ನು ನೀಡಿದ್ದೇವೆ ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos