ರಾಜ್ಯ ಸಚಿವ ಸಂಪುಟ ಪುನರ್ರಚನೆ ಇಲ್ಲ, ವಿಸ್ತರಣೆ ಮಾತ್ರ; ಅತೃಪ್ತರು, ಪಕ್ಷೇತರರಿಗೆ ಅವಕಾಶ
ಬೆಂಗಳೂರು: ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್-ಜೆಡಿಎಸ್ ನಾಯಕರು ಕೊನೆಗೂ ಸಚಿವ ಸಂಪುಟ ಪುನರ್ರಚನೆಯನ್ನು ಕೈಬಿಟ್ಟು ಕೇವಲ ಸಂಪುಟ ವಿಸ್ತರಿಸಲು ನಿರ್ಧರಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಂಪುಟದಲ್ಲಿ ಖಾಲಿ ಇರುವ ಮೂರು ಸ್ಥಾನಗಳನ್ನು ತುಂಬಲು ನಿರ್ಧರಿಸಲಾಗಿದೆ. ಇಬ್ಬರು ಪಕ್ಷೇತರ ಅಭ್ಯರ್ಥಿಗಳನ್ನು ಸಂಪುಟಕ್ಕೆ ಸೇರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ.
ಎರಡು ದಿನಗಳ ಕಾಲ ಉಭಯ ಪಕ್ಷಗಳ ನಾಯಕರು ಸಮಾಲೋಚನೆ ನಡೆಸಿದ ಬಳಿಕ ಈ ನಿರ್ಧಾರಕ್ಕೆ ಬಂದಿದ್ದಾರೆ. ಈಗ ಇರುವ ಸಚಿವ ಸಂಪುಟಕ್ಕೆ ಯಾವುದೇ ಅಡಚಣೆ ಮಾಡದೆ ಅದನ್ನೇ ಮುಂದುವರಿಸುವುದು ಮತ್ತು ಸಂಪುಟದ ಖಾಲಿ ಹುದ್ದೆಗಳನ್ನು ಇಬ್ಬರು ಪಕ್ಷೇತರ ಅಭ್ಯರ್ಥಿಗಳ ಮೂಲಕ ಭರ್ತಿ ಮಾಡುವುದು ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಎರಡು ಅಥವಾ ಮೂರು ದಿನಗಳ ಒಳಗೆ ಪಕ್ಷೇತರ ಶಾಸಕರನ್ನು ಸಚಿವ ಸಂಪುಟಕ್ಕೆ ಸೇರಿಸುವ ಮೂಲಕ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ ಉಭಯ ಪಕ್ಷಗಳು ತಲಾ ಒಂದೊಂದು ಕ್ಷೇತ್ರಗಳನ್ನಷ್ಟೇ ಗೆದ್ದು ಮುಖಭಂಗ ಅನುಭವಿಸಿದ್ದ ಮಿತ್ರ ಪಕ್ಷಗಳು, ಒಂದು ವರ್ಷ ಪ್ರಾಯದ ಸಮ್ಮಿಶ್ರ ಸರ್ಕಾರವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲು ನಿರಂತರ ಸಭೆಗಳನ್ನು ನಡೆಸಿ ಸಮಾಲೋಚನೆ, ಕಾರ್ಯತಂತ್ರ ರೂಪಿಸಿದ್ದವು, ಇದರ ಫಲಿತಾಂಶ ಎಂಬಂತೆ, ಅಂತಿಮವಾಗಿ ಸಂಪುಟ ವಿಸ್ತರಣೆಗೆ ನಿರ್ಧರಿಸಲಾಗಿದೆ.
ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಉಭಯ ಪಕ್ಷಗಳು ತಮ್ಮ ಶಾಸಕಾಂಗ ಪಕ್ಷದ ಸಭೆ ನಡೆಸಿ ಎಲ್ಲಾ ಶಾಸಕರ ಅಹವಾಲು ಆಲಿಸಿದ್ದವು. ಮಾತ್ರವಲ್ಲ ಬಿಜೆಪಿಯ ಆಮಿಷಕ್ಕೆ ಒಳಗಾಗದಂತೆ ಸೂಚಿಸಿದ್ದವು.
ಹಾಲಿ ಇರುವ ಯಾವುದೇ ಸಚಿವರನ್ನು ಸಂಪುಟದಿಂದ ಕೈಬಿಡದಿರಲು ಅಂತಿಮವಾಗಿ ನಿರ್ಧರಿಸಲಾಗಿದೆ. ಮಾತ್ರವಲ್ಲ ಅತೃಪ್ತ ಶಾಸಕರನ್ನು ಸಂಪುಟಕ್ಕೆ ಸೇರಿಸಿ ಸರ್ಕಾರವನ್ನು ಭದ್ರಗೊಳಿಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಚಿವ ಸ್ಥಾನ ತ್ಯಜಿಸಲು ಹೆಚ್ಚಿನವರು ಆಸಕ್ತಿ ತೋರದ ಕಾರಣ ಯಾರನ್ನೂ ಸಂಪುಟದಿಂದ ಕೈಬಿಡದೆ ಇರುವ ಖಾಲಿ ಸ್ಥಾನವನ್ನು ಅತೃಪ್ತರು ಮತ್ತು ಪಕ್ಷೇತರ ಅಭ್ಯರ್ಥಿಗಳ ಮೂಲಕ ತುಂಬಿ ಸರ್ಕಾರವನ್ನು ಉಳಿಸಿಕೊಳ್ಳಲು ಕಾರ್ಯತಂತ್ರ ರೂಪಿಸಲಾಗಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos