ರಾಜಕೀಯ

ಆಡಳಿತದಲ್ಲಿ ನಮ್ಮ ಸಂವಿಧಾನವೇ ಭಗವದ್ಗೀತೆಯಾಗಿರಲಿ: ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಕಿವಿಮಾತು

Srinivasamurthy VN
ಬೆಂಗಳೂರು: ಸತತ 2ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಶುಭ ಕೋರಿದ್ದು, ಅದರ ಬೆನ್ನಲ್ಲೇ ಪರೋಕ್ಷವಾಗಿ ಮೋದಿ ಅವರಿಗೆ ಕಿಮಿಮಾತು ಕೂಡ ಹೇಳಿದ್ದಾರೆ.
ನಿನ್ನೆ ರಾಷ್ಟ್ರಪತಿ ಭವನದಲ್ಲಿ ತಮ್ಮ 57 ಸಚಿವರೊಂದಿಗೆ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ಇದರ ಬೆನ್ನಲ್ಲೇ ಕರ್ನಾಟಕದ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಂಡಕ್ಕೆ ಶುಭ ಕೋರಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, 'ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ಆಡಳಿತ ಮತ್ತು ನೀತಿ ತಯಾರಿಕೆಗೆ ನಮ್ಮ ಸಂವಿಧಾನ ಭಗವದ್ಗೀತೆಯಾಗಿರಲಿ ಎಂದು ಅವರು ನೆನಪಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ‌ ಪ್ರಾತಿನಿಧ್ಯ ಪಡೆದಿರುವ ರಾಜ್ಯದ ಸಂಸದರಾದ ಡಿ ವಿ ಸದಾನಂದ ಗೌಡ, ಪ್ರಹ್ಲಾದ್ ಜೋಷಿ, ಸುರೇಶ್ ಅಂಗಡಿ ಅವರಿಗೆ ಅಭಿನಂದನೆಗಳು ಮತ್ತು ಶುಭ ಕಾಮನೆಗಳು, ನಿಮ್ಮ ದನಿ ಸಮಸ್ತ ಕನ್ನಡಿಗರ‌ ಪರವಾಗಿರಲಿ, ರಾಜ್ಯದ ಹಿತಾಸಕ್ತಿಯ ರಕ್ಷಣೆಗೆ ನಿಮ್ಮ ಅಧಿಕಾರ ಮುಡಿಪಾಗಿರಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ.
ಅಂತೆಯೇ ಅನ್ನಭಾಗ್ಯ, ಕೃಷಿಹೊಂಡ, ಕ್ಷೀರಭಾಗ್ಯ, ಕ್ಷೀರಧಾರೆ, ಪಶುಭಾಗ್ಯ ಹೀಗೆ ಹಿಂದಿನ ಸರ್ಕಾರದ ಎಲ್ಲಾ ಜನಪರ ಯೋಜನೆಗಳು ಈಗಲೂ ಮುಂದುವರೆಯುತ್ತಿವೆ. ಬಿಜೆಪಿ ಆಡಳಿತವಿರುವ ಬೇರೆ ರಾಜ್ಯಗಳಲ್ಲಿ ಈ ಯೋಜನೆಗಳೇಕೆ ಜಾರಿಯಾಗಿಲ್ಲ ? ಇಲ್ಲಿ ಅಧಿಕಾರಕ್ಕೆ ಬಂದರೆ ಬಿಜೆಪಿಯವರು ಏನು ಮಾಡುತ್ತಾರೆ ಎಂದು ಹಿಂದೆಯೂ ನೋಡಿದ್ದೇವೆ, ಮತ್ತೆ ಅದನ್ನೇ ಮಾಡುತ್ತಾರಷ್ಟೆ ಎಂದೂ ಅವರು ಇದೇ ವೇಳೆ ಟಾಂಗ್ ನೀಡಿದ್ದಾರೆ.
SCROLL FOR NEXT