ರಾಜಕೀಯ

ಬಿಎಸ್ ವೈ- ಆರ್.ಶಂಕರ್‌ ಸಂಧಾನ ಯಶಸ್ವಿ: ರಾಣಿಬೆನ್ನೂರು ಬಿಜೆಪಿ ಅಭ್ಯರ್ಥಿಯಾಗಿ ಅರುಣ್‌ಕುಮಾರ್‌

Raghavendra Adiga

ಬೆಂಗಳೂರು: ರಾಜ್ಯ ವಿಧಾನಸಭೆ ಉಪಚುನಾವಣೆ ನಡೆಯುವ ರಾಣಿಬೆನ್ನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಅರುಣ್‍ಕುಮಾರ್ ಪೂಜಾರ್ ಆಯ್ಕೆಯಾಗಿದ್ದಾರೆ. ಅರುಣ್‍ಕುಮಾರ್ ಅವರಿಗೆ ಬಿಜೆಪಿ ಟಿಕೆಟ್ ಲಭಿಸಿದ್ದು ಅನರ್ಹ ಶಾಸಕ ಆರ್.ಶಂಕರ್ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಡುವಿನ ಸಂಧಾನ ಮಾತುಕತೆ ಫಲಪ್ರದವಾಗಿದೆ.

ಗುರುವಾರ 13 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿದ್ದ ಬಿಜೆಪಿ ರಾಣಿಬೆನ್ನೂರು ಕ್ಷೇತ್ರದ ಅಭ್ಯರ್ಥಿ ಘೋಷಣೆ ಬಾಕಿ ಉಳಿಸಿಕೊಂಡಿತ್ತು. ಕ್ಷೇತ್ರದಿಂದ ಸ್ಪರ್ಧಿಸಲು ಆಕಾಂಕ್ಷಿಗಳ ದ್ಂಅಡೇ ಸಿದ್ದವಾಗಿದ್ದು  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪನವರ ಪುತ್ರ ಕೆ.ಇ.ಕಾಂತೇಶ್, ಬಿಜೆಪಿಗೆ ಸೇರ್ಪಡೆಗೊಂಡಿದ್ದ ಮಾಜಿ ಸಚಿವ ಆರ್.ಶಂಕರ್, ಮಾಜಿ ಶಾಸಕರಾದ ಹಾವೇರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ್ ಸಜ್ಜನ್,ರಾಜ್ಯ ಬಿಜೆಪಿ ಕಾರ್ಯದರ್ಶಿ ಭಾರತಿ ಜಂಬಗಿ ಅವರುಗಳ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು.

ಕ್ಷೇತ್ರದ ಅಭ್ಯರ್ಥಿ ಆಯ್ಕೆ ದೊಡ್ದ ಸಮಸ್ಯೆಯಾಗಿ ಪರಿಣಮಿಸಿದ್ದ ಕಾರಣ ರಾಜ್ಯ ಬಿಜೆಪಿ ಘಟಕ ಸಚಿವರುಗಳಾದ ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ, ಮಾಜಿ ಸಚಿವ ಸಿ.ಎಂ.ಉದಾಸೀ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಈ ಸಮಿತಿ ನೀಡಿದ ವರದಿಯ ಅನುಸಾರ ಅರುಣ್‍ಕುಮಾರ್ ಪೂಜಾರ ಅವರಿಗೆ ಟಿಕೆಟ್ ಲಭ್ಯವಾಗಿದೆ.

ಯಡಿಯೂರಪ್ಪ-ಆರ್. ಶಂಕರ್ ಸಮ್ಧಾನ ಯಶಸ್ವಿ

ಇನ್ನು ಅನರ್ಹ ಶಾಸಕ ಆರ್. ಶಂಕರ್ ಬಿಜೆಪಿಗೆ ಸೇರಿದರೂ ಅವರಿಗೆ ರಾಣಿಬೆನ್ನೂರು ಕ್ಷೇತ್ರದ ಟಿಕೆಟ್ ನಿಡಿಲ್ಲ,. ಬದಲಿಗೆ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿಸಲಾಗುವುದು ಎಂದು ಸಿಎಂ ಯಡಿಯೂರಪ್ಪ ಭರವಸೆ ಕೊಟ್ಟಿದ್ದಾರೆ. 

ಶನಿವಾರ ಬೆಳಿಗ್ಗೆ ಮುಖ್ಯಮಂತ್ರಿಗಳ ನಿವಾಸದಲ್ಲಿ ನಡೆದ ಭೇಟಿಯ ವೇಳೆ ಯಡಿಯೂರಪ್ಪ ಆರ್. ಶಂಕರ್ ಅವರನ್ನು ಮೇಲ್ಮನೆ ಸದಸ್ಯರನ್ನಾಗಿಸಿ ಬಳಿಕ ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳುವ ಭರವಸೆ ಇತ್ತಿದ್ದಾರೆ. ಇದರಿಂದ ಸಂತುಷ್ಟರಾಗಿರುವ ಶಂಕರ್ ತಾವು ವಿಧಾನಸಭೆ ಚುನಾವಣೆ ಕಣದಿಂದ ದೂರವಿರಲು, ರಾಣೀಬೆನ್ನೂರು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಲು ಒಪ್ಪಿದ್ದಾರೆ.

ಈ ನಡುವೆ ಆರ್. ಶಂಕರ್ ವಿರುದ್ಧ ಬೆಂಬಲಿಗರು ತಿರುಗಿ ಬಿದ್ದಿದ್ದಾರೆ. ಯಡಿಯೂರಪ್ಪ ಅವರ ಮಾತಿಗೆ ಬೆಲೆಕೊಟ್ಟು ಕಣದಿಂದ ಹಿಂದೆ ಸರಿದ ಶಂಕರ್ ತೀರ್ಮಾನ ಸರಿಯಲ್ಲ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

SCROLL FOR NEXT