ರಾಜಕೀಯ

'ಶ್ರೀರಾಮುಲು ವೆರಿ ವೆರಿ ಪಾಪ್ಯುಲರ್ ಲೀಡರ್, ಯಾರ ಮೇಲಾದರೂ ತೊಡೆ ತಟ್ಟುತ್ತಾರೆ'

Shilpa D

ಮೈಸೂರು: ರಾಜ್ಯದ ಉಪಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್ ಇಂದಿನಿಂದ ಅಧಿಕೃತ ಪ್ರಚಾರ ಆರಂಭಿಸಿದ್ದು, ಹದಿನೈದು ಕ್ಷೇತ್ರಗಳ ಪೈಕಿ ಹನ್ನೆರಡು ಕ್ಷೇತ್ರಗಳನ್ನು ಮತ್ತೆ ತೆಕ್ಕೆಗೆ ತೆಗೆದುಕೊಳ್ಳುವ ಅನಿವಾರ್ಯತೆ ಕಾಂಗ್ರೆಸ್ ಗಿದ್ದು, ಇಂದಿನಿಂದ ಅಧಿಕೃತ ಚುನಾವಣಾ ಪ್ರಚಾರ ಆರಂಭಿಸಿದೆ.

ಹುಣಸೂರಿನಲ್ಲಿ ಪ್ರಚಾರ ಆರಂಭಿಸುವ ಮುನ್ನ ಇಲ್ಲಿನ ಸುದ್ದಿಗಾರರೊಂದಿಗೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಮಹಾರಾಷ್ಟ್ರ, ಹರಿಯಾಣಗಳಲ್ಲಿ ನಡೆದ ಚುನಾವಣೆಯಲ್ಲಿ ಮತದಾರರು ಪಕ್ಷಾಂತರಿಗಳಿಗೆ ತಕ್ಕಪಾಠ ಕಲಿಸಿದ್ದಾರೆ. 

ರಾಜ್ಯದಲ್ಲಿ ಆಯಾರಾಮ್ ಗಯಾರಾಮ್ ಸಂಸ್ಕೃತಿ ನಿಲ್ಲಬೇಕು. ಸರ್ವೋಚ್ಛ ನ್ಯಾಯಾಲಯವೇ ಇವರನ್ನು ಅನರ್ಹರು ಎಂದು ಹೇಳುವ ಮೂಲಕ ಸ್ಪೀಕರ್ ಆದೇಶವನ್ನು ಎತ್ತಿಹಿಡಿದಿದೆ. 

ನ್ಯಾಯಾಲಯವೇ ಇವರನ್ನು ಅನರ್ಹರು ಎಂದ ಮೇಲೆ ತಮ್ಮನ್ನು ಅನರ್ಹರು ಎನ್ನಬೇಡಿ ಎಂದು ಪಕ್ಷಾಂತರಿಗಳು ಹೇಳುತ್ತಿರುವುದು ಸರಿಯೇ? ಎಂದು ತಿರುಗೇಟು ನೀಡಿದ ಅವರು, ಪಕ್ಷಕ್ಕೆ ದ್ರೋಹವೆಸಗಿ ಬಿಜೆಪಿಗೆ ಹೋಗಿರುವ ಪಕ್ಷಾಂತರಿಗಳಿಗೆ ಜನರು ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದು, ಹದಿನೈದೂ ಕ್ಷೇತ್ರಗಳಲ್ಲಿಯೂ ಪಕ್ಷ ಗೆಲುವು ಸಾಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿ ತೋರಿಸುತ್ತೇನೆ ಎಂದು ಸವಾಲು ಹಾಕಿರುವ ಸಚಿವ ಶ್ರೀರಾಮುಲುಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಅವರು ಬಹಳ ಜನಪ್ರಿಯ ನಾಯಕರು. ಅವರಿಗಿರುವಂತಹ ಜನಪ್ರಿಯತೆ ನಮಗೆ ಇಲ್ಲ. ಅವರಂತೆ ತೊಡೆತಟ್ಟಲೂ ನಮ್ಮಿಂದ ಸಾಧ್ಯವಿಲ್ಲ ಎಂದು ಲೇವಡಿ ಮಾಡಿದರು.

ಎಲ್ಲರಿಗೂ ನಾನು ಅಂದ್ರೆ ಭಯ ಇರಬೇಕು. ಅದಕ್ಕಾಗಿ ಎಲ್ಲರೂ ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ನಾನು ಕಾಂಗ್ರೆಸ್ಸಿನಲ್ಲಿ ಏಕಾಂಗಿಯಲ್ಲ. ಕಾಂಗ್ರೆಸ್ ಪಕ್ಷ ಯಾವತ್ತೂ ಯಾರನ್ನೂ ಏಕಾಂಗಿ ಮಾಡಲ್ಲ. ಯಡಿಯೂರಪ್ಪರಿಗೆ ನಾನು ಏಕಾಂಗಿ ಆಗಬೇಕು ಅನಿಸಿರಬಹುದು. ಆದರೆ ಅವರ ಆಸೆ ಈಡೇರುವುದಿಲ್ಲ ಎಂದು ತಿಳಿಸಿದರು.

SCROLL FOR NEXT