ರಾಜಕೀಯ

ಬಿಎಸ್ ವೈ ಕೆಳಗಿಳಿಸಲು ಇಬ್ಬರು ಕೇಂದ್ರ ಸಚಿವರಿಂದ ಪಿತೂರಿ: ಬಿಜೆಪಿ ಶಾಸಕ ಯತ್ನಾಳ್​ ಹೊಸ ಬಾಂಬ್

Lingaraj Badiger

ವಿಜಯಪುರ: ಇತ್ತೀಚಿಗಷ್ಟೇ ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಅವರು ಬುಧವಾರ ಹೊಸ ಬಾಂಬ್ ಸಿಡಿಸಿದ್ದು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ರಾಜ್ಯದ ಇಬ್ಬರು ಕೇಂದ್ರ ಸಚಿವರು ಪಿತೂರಿ ನಡೆಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಮತಾ ಬ್ಯಾನರ್ಜಿ ಭೇಟಿಗೆ ಅವಕಾಶ ಸಿಗುತ್ತದೆ. ಆದರೆ, ಯಡಿಯೂರಪ್ಪ ಅವರ ಭೇಟಿಗೆ ಅವಕಾಶ ನಿರಾಕರಿಸಲಾಗುತ್ತದೆ. ಇದಕ್ಕೆ ರಾಜ್ಯದ ಇಬ್ಬರು ಕೇಂದ್ರ ಸಚಿವರ ಕುತಂತ್ರವೇ ಕಾರಣ ಎಂದು ಪರೋಕ್ಷವಾಗಿ ಡಿವಿ ಸದಾನಂದಗೌಡ ಹಾಗೂ ಪ್ರಹ್ಲಾದ್ ಜೋಶಿ ಅವರ ವಿರುದ್ಧ ಗುಡುಗಿದ್ದಾರೆ.

ಒಂದು ವೇಳೆ ನಾನು ನೆರೆ ಸಂತ್ರಸ್ತರ ಬಗ್ಗೆ ಧ್ವನಿ ಎತ್ತದೇ ಹೋಗಿದ್ದರೆ ಇಷ್ಟೊತ್ತಿಗಾಗಲೇ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ರಾಜೀನಾಮೆ ನೀಡಬೇಕಾಗುತ್ತಿತ್ತು ಎಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂತಹ ಚಾಡಿಕೋರರಿಂದಲೇ ನನಗೆ ನೋಟಿಸ್ ಬಂದಿದೆ. ನನಗೆ ದೆಹಲಿಯಿಂದ ಮಾಹಿತಿ ಬಂದಿದೆ. ರಾಜ್ಯದ ಕೇಂದ್ರ ಸಚಿವರು ದೆಹಲಿಗೆ ಪರಿಹಾರ ತರಲು ಹೋಗಿಲ್ಲ. ಬದಲಾಗಿ ನನಗೆ ನೋಟಿಸ್ ಕೊಡಿಸಲು ಹೋಗಿದ್ದಾರೆ. ಇಂತವರಿಂದಲೇ ಪಕ್ಷ ಹಾಳಾಗುತ್ತಿದೆ. ಶಿಸ್ತು ಉಲ್ಲಂಘಿಸದ ನಾನು ಶೋಕಾಸ್ ನೋಟಿಸ್‌ಗೆ ಉತ್ತರ ನೀಡುವುದಿಲ್ಲ. ಆದ್ದರಿಂದ ನಾನು ನನ್ನ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ, ಅಮಿತ ಶಾ ಹಾಗೂ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದಿದ್ದೇನೆ. ಪ್ರಧಾನಿ ಬಳಿ ರಾಜ್ಯದ ಜನರ ಭಾವನೆ ಹೇಳಿಕೊಳ್ಳಲು ನಾನೇನೂ ಹೆದರಲ್ಲ ಎಂದರು.

ಪಕ್ಷ ಉಳಿಸುವ ಬಯಕೆ ಇದ್ದರೆ ಯಡಿಯೂರಪ್ಪ ಮತ್ತು ಅವರ ವಿರೋಧಿಗಳನ್ನು ಒಟ್ಟಿಗೆ ಕೂಡಿಸಿ ಸಮಸ್ಯೆ ಬಗೆಹರಿಸಿ. ಅದನ್ನು ಮಾಡದ ನಿಮ್ಮನ್ನು ನಾಯಕರೆಂದು ಹೇಗೆ ಕರೆಯಬೇಕು? ನಾನು ಕರ್ನಾಟಕದಿಂದ ಬಿಜೆಪಿಯಿಂದ ಕೇಂದ್ರ ಸಚಿವನಾದ ನಾಲ್ಕನೇ ವ್ಯಕ್ತಿ. ನನ್ನನ್ನು ಹೊರ ಹಾಕಿದರೆ ನನಗೇನೂ ಹಾನಿಯಿಲ್ಲ. ನನ್ನ ಶಕ್ತಿಯನ್ನು ವಿಧಾನ ಪರಿಷತ್‌ನಲ್ಲಿ ತೋರಿಸಿದ್ದೇನೆ. ಪಕ್ಷೇತರನಾಗಿ ಗೆದ್ದಿದ್ದೇನೆ. ನಾನು ಬಿಜೆಪಿ ಸೇರುವಾಗ ಇವರೇನೂ ಸ್ವಾಗತಿಸಿಲ್ಲ. ಅಮಿತ್​ ಶಾ, ಪ್ರಕಾಶ ಜಾವಡೇಕರ್​ ನನ್ನ ಶಕ್ತಿಯನ್ನು ನೋಡಿ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಸೇರಿಸಿಕೊಂಡಿದ್ದಾರೆಂದು ಯತ್ನಾಳ್​ ಪಕ್ಷದ ಪ್ರತಿಬಣದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

SCROLL FOR NEXT