ರಾಜಕೀಯ

ಜಾರಿ ನಿರ್ದೇಶನಾಲಯ ಜೊತೆ ಡಿ.ಕೆ.ಶಿವಕುಮಾರ್ ರಾಜಿ ಮಾಡಿಕೊಂಡಿಲ್ಲ: ಪ್ರಿಯಾಂಕ್ ಖರ್ಗೆ ಟಾಂಗ್

Shilpa D

ಕಲಬುರಗಿ: ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ಬೇಕಾದಂತೆ ಉತ್ತರ ಕೊಡುತ್ತಿಲ್ಲ,ರಾಜೀ ಮಾಡಿಕೊಳ್ಳಲಿಲ್ಲ ಎಂಬ ಕಾರಣಕ್ಕಾಗಿ ಪಕ್ಷದ ಮುಖಂಡ ಡಿ ಕೆ ಶಿವಕುಮಾರ್ ಅವರ ಬಂಧಿಸಲಾಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಎಲ್ಲರಿಗೂ ಒಂದೇ ಇರಬೇಕು. ಆದರೆ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಕಾನೂನಿನಡಿ ಎಲ್ಲರಿಗೂ ಸಮಾನ ನ್ಯಾಯ ಸಿಗುತ್ತಿಲ್ಲದಿರುವುದು ದುರ್ದೈವ. ಡಿ.ಕೆ.ಶಿವಕುಮಾರ್ ನಾಲ್ಕು ದಿನಗಳ ಕಾಲ ಜಾರಿ ನಿರ್ದೇಶಾನಲಯದ ವಿಚಾರಣೆಗೆ ಸತತವಾಗಿ ಹಾಜರಾಗಿದ್ದಾರೆ. ಆದರೂ ಅವರು ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿಲ್ಲ ಎಂದು ಕಾರಣ ನೀಡಿ ಬಂಧಿಸಿರುವುದರ ಅರ್ಥವೇನು? ಎಂದು ಅವರು ಪ್ರಶ್ನಿಸಿದರು.

ದಾಳಿ ಮಾಡಿದ್ದು ಆದಾಯ ತೆರಿಗೆ, ಬಂಧನ ಮಾಡಿರುವುದು ಜಾರಿ ನಿರ್ದೇಶಾನಲಯ.ಈ ಎರಡಕ್ಕೂ ಒಂದಕ್ಕೊಂದು ಸಂಬಂಧವಿಲ್ಲ. ಸರ್ಕಾರಿ ಸ್ವಾಯತ್ತ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ತನ್ನ ರಾಜಕೀಯ ದುರುದ್ದೇಶಕ್ಕೆ, ವಿಪಕ್ಷಗಳನ್ನು ಹಣಿಯಲು ದುರ್ಬಳಕೆ ಮಾಡಿಕೊಳ್ಳುತ್ತಿದೆ. ದೇಶದ ಸಂವಿಧಾನಕ್ಕೆ ತಲೆ ಬಾಗಿ ಡಿ.ಕೆ.ಶಿವಕುಮಾರ್ ಕಾನೂನು ರೀತ್ಯಾ ಹೋರಾಟ ಮಾಡುತ್ತಿದ್ದಾರೆ. ಕೇಂದ್ರ ಬಿಜೆಪಿ ನಾಯಕರ ತುಘಲಕ್ ದರ್ಬಾರ್ ವಿರುದ್ಧ ಹೋರಾಟ ಮಾಡಿ, ಕೇಂದ್ರದ ನಡವಳಿಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಪಕ್ಷ ಮಾಡಲಿದೆ ಎಂದರು.

SCROLL FOR NEXT