ಎಸ್ ಆರ್ ಪಾಟೀಲ್ 
ರಾಜಕೀಯ

ಹಳಿ ತಪ್ಪಿದೆ ಆರ್ಥಿಕ ಶಿಸ್ತು; ನಿಗಮ, ಮಂಡಳಿ ರಚನೆ ಮೂಲಕ ದುಂದು ವೆಚ್ಚ: ಎಸ್.ಆರ್. ಪಾಟೀಲ್

ರಾಜ್ಯದಲ್ಲಿ ಆರ್ಥಿಕ ಶಿಸ್ತು ಹಳಿ ತಪ್ಪಿದ್ದು, ಒಂದೆಡೆ ದುಂದು ವೆಚ್ಚ, ಮತ್ತೊಂದೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪರ್ಸಂಟೇಜ್ ಲೆಕ್ಕದಲ್ಲಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಮೇಲ್ಮನೆಯಲ್ಲಿಂದು ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಆರ್ಥಿಕ ಶಿಸ್ತು ಹಳಿ ತಪ್ಪಿದ್ದು, ಒಂದೆಡೆ ದುಂದು ವೆಚ್ಚ, ಮತ್ತೊಂದೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪರ್ಸಂಟೇಜ್ ಲೆಕ್ಕದಲ್ಲಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಮೇಲ್ಮನೆಯಲ್ಲಿಂದು ಗಂಭೀರ ಆರೋಪ ಮಾಡಿದ್ದಾರೆ.

ಧನವಿನಿಯೋಗ ವಿಧೇಯಕದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. 52,900 ಕೋಟಿ ರೂ. ಸಾಲ ಪಡೆದಿದ್ದಾರೆ. ಶೇ.5ರಷ್ಟು ವಿತ್ತೀಯ ಕೊರತೆ ಹೆಚ್ಚಿಸಿಕೊಂಡು 30 ಸಾವಿರ ಕೋಟಿ ಸಾಲವನ್ನು ಹೆಚ್ಚುವರಿ ಪಡೆಯಲಾಗಿದೆ. ಶಕ್ತಿ ಮೀರಿ ಸಾಲ ಪಡೆಯಲು ಸರ್ಕಾರ ಹೋಗುತ್ತಿದೆ ಎಂದು ಟೀಕಿಸಿದರು.

ಅಧಿಕ ಮೌಲ್ಯದ ನೋಟು ನಿಷೇಧದಿಂದಾಗಿ ಜಿಡಿಪಿ‌ ಕುಸಿಯುತ್ತಾ ಬಂದಿದೆ. ಜಿಎಸ್​ಟಿಯಿಂದಲೂ ಆರ್ಥಿಕ ಹೊಡೆತ ಬಿದ್ದಿದೆ. ನಂತರ ನೆರೆ, ಕೊರೊನಾದಿಂದ ರಾಜ್ಯದ ಆರ್ಥಿಕ‌ ಸ್ಥಿತಿ ಕೆಟ್ಟಿದೆ. ಉತ್ತರ ಕರ್ನಾಟಕದಲ್ಲಿ ಶತಮಾನದಲ್ಲಿ ಆಗದ ಪ್ರವಾಹ ಸಂಭವಿಸಿ, ಉತ್ತರ ಕರ್ನಾಟಕ ಕೊಚ್ಚಿ ಹೋಯಿತು. 2019ರಲ್ಲೂ ಅತಿವೃಷ್ಟಿಯಿಂದ 35 ಸಾವಿರ ಕೋಟಿ ಹಾನಿಯಾಗಿದ್ದು, ಈ ಬಾರಿಯೂ 25 ಸಾವಿರ ಕೋಟಿ ಹಾನಿ ಸಂಭವಿಸಿದೆ. ಒಟ್ಟಾರೆ ರಾಜ್ಯದ ಆರ್ಥಿಕ ಸ್ಥಿತಿಗತಿ‌ ಸರಿಯಿಲ್ಲ ಎಂದರು.

ಬೊಕ್ಕಸ ಬರಿದಾಗಿದ್ದರೂ ಕೂಡ ಸರ್ಕಾರ ದುಂದುವೆಚ್ಚಕ್ಕೆ ಕಡಿವಾಣ ಹಾಕಿಲ್ಲ. ಮನಸೋ ಇಚ್ಚೆ ಖರ್ಚು ಮಾಡುತ್ತಿದೆ. ಈಗ ಯಾಕೆ ನಿಗಮ ಮಂಡಳಿಗಳಿಗೆ ಹೊಸದಾಗಿ ನೇಮಿಸಬೇಕಿತ್ತು. ಹೊಸ ನಿಗಮ ಮಂಡಳಿಗಳ ರಚನೆ ಅಗತ್ಯವಿತ್ತೆ?. ಈಗ ಇವರಿಗೆಲ್ಲ ವೇತನ, ಖರ್ಚು, ಭತ್ಯೆ ಇತ್ಯಾದಿ ಕೊಡಬೇಕು. ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿ ಹಣ ಮೂರು ವರ್ಷದಿಂದ ಬಿಡುಗಡೆ ಆಗುತ್ತಿಲ್ಲ. ಅದಕ್ಕೆಲ್ಲ ಕೊರೊನಾ, ನೆರೆ ಅಂತಾ ಕಾರಣ ಹೇಳುತ್ತಾರೆ. ಆದರೆ, ದುಂದು ವೆಚ್ಚ ಮಾಡುತ್ತಾರೆ ಎಂದು ಕಿಡಿಕಾರಿದರು.

ಹಣ ಖರ್ಚು ಮಾಡುವಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಬಡವರ ಕಾರ್ಯಕ್ರಮಕ್ಕೆ ಹಣವೇ ಇಲ್ಲ, ಒಬಿಸಿ, ಅಲ್ಪಸಂಖ್ಯಾತ, ಎಸ್ಸಿ, ಎಸ್ಟಿ ಜನಾಂಗದ ಕಾರ್ಯಕ್ರಮಕ್ಕೆ ಹಣ ಕೊಡಲು ಆಗುತ್ತಿಲ್ಲ. ಕಲ್ಯಾಣ ಕರ್ನಾಟಕದ ಪರಿಸ್ಥಿತಿ ಏನಾಗಿದೆ, ಜನರ ಕಲ್ಯಾಣ ಆಗಬೇಕಲ್ಲ. 1500 ಕೋಟಿ ಘೋಷಿಸಿ 150 ಕೋಟಿ ಕ್ರಿಯಾ ಯೋಜನೆ ಮಾಡಲಾಗಿದೆ,. ಆರ್ಥಿಕ ವರ್ಷ ಮುಗಿಯುತ್ತಾ ಬಂದಿದೆ. ಒಂದು ರೂಪಾಯಿಯೂ ಹಣ ಖರ್ಚು ಮಾಡಿಲ್ಲ ಎಂದು ಸರ್ಕಾರದ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು.

ಹೊಟ್ಟೆಗೆ ಹಿಟ್ಟು ಇಲ್ಲದಾಗ ಜುಟ್ಟಿಗೆ ಮಲ್ಲಿಗೆ ಹೂವು ಎನ್ನುವಂತೆ, ನಿಗಮ ಮಂಡಳಿ ರಚಿಸಲಾಗಿದೆ. ಇವು ಒಂತರಾ ರಾಜಕಾರಣಿಗಳ ಪುನರ್ವಸತಿ ಸಂಸ್ಥೆಗಳಂತಾಗಿವೆ. ಇದಕ್ಕೆಲ್ಲ ಕೊಡುತ್ತಿರುವುದು ಬಡವರ ಹಣ, ಯಡಿಯೂರಪ್ಪಂದೂ ಅಲ್ಲ, ನಮ್ಮದೂ ಅಲ್ಲ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು‌ ಶಬ್ದಗಳೇ ಇಲ್ಲ, ಮಾತನಾಡಿದರೆ ನನ್ನ ನಾಲಿಗೆಯೇ ಹೊಲಸಾಗಲಿದೆ ಆ ರೀತಿ ಆಗಿದೆ. ಸಾಲ ಮಾಡಿ ತುಪ್ಪ ತಿನ್ನುವಂತೆ ಸರ್ಕಾರ ಮಾಡುತ್ತಿದೆ. ಸರ್ಕಾರ ನಡೆಸಲಿಕ್ಕೇ ಶೇ.92ರಷ್ಟು ಹಣ ವ್ಯಯವಾಗುತ್ತಿದೆ. ಹಾಗಾದರೆ ಅಭಿವೃದ್ಧಿ ಯೋಜನೆಗಳಿಗೆ ನೀಡಲು ಹಣ ಎಲ್ಲಿದೆ ಎಂದು ಪ್ರಶ್ನಿಸಿದರು.

ವಿದ್ಯುತ್, ನೀರು, ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಆಸ್ತಿ ತೆರಿಗೆ‌ ಹೆಚ್ಚಳ ಮಾಡಲಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಶೇ.25, ಇತರ ಕಡೆ ಶೇ.17.5ರಷ್ಟು ಬಿಲ್ ಹೆಚ್ಚಳ ಮಾಡಿದ್ದಾರೆ. ಶೇ.12ರಷ್ಟು ನೀರಿನ ಬಿಲ್ ಹೆಚ್ಚಳಕ್ಕೆ ಸಿದ್ಧತೆ ಮಾಡಿದ್ದಾರೆ. ಬಿಬಿಎಂಪಿ ಚುನಾವಣೆ ನಂತರ ಇದರ ಬರೆ ಎಳೆಯಲಿದ್ದಾರೆ. ಸದ್ಯ ಚುನಾವಣೆ ಇದೆ ಎಂದು ಸುಮ್ಮನಿದ್ದಾರೆ. ಸಲಾಕೆ ಕಾದಿದೆ, ಚುನಾವಣೆ ಮುಗಿಯುತ್ತಿದ್ದಂತೆ ಬರೆ ಎಳೆಯುತ್ತಾರೆ ಎಂದರು.

ಸಾಲದ ಪರಿ ನೋಡಿದರೆ ವಿತ್ತೀಯ ಕೊರತೆ ಮಿತಿ ಮೀರಿ‌ಹೋಗಲಿದ್ದಾರೆ ಎನಿಸುತ್ತಿದೆ. ರಾಜ್ಯದ ಆರ್ಥಿಕ ಸ್ಥಿತಿ ಸರಿಯಿಲ್ಲ. ಚೇತರಿಸಿಕೊಳ್ಳುವುದು ಕಷ್ಟ ಈ ಸ್ಥಿತಿಯಲ್ಲಿ ಆರ್ಥಿಕ ಶಿಸ್ತು ಸರಿಯಿಲ್ಲ. ಧನವಿನಿಯೋಗ ಎರಡನೇ ಕಂತು ಅನಿವಾರ್ಯವಿದೆ. ಮೂರನೇ ಕಂತು ನಿರೀಕ್ಷೆಗೂ ಮೀರಿ ಬರುವ ಸಾಧ್ಯತೆ ಇದೆ. ದುಂದುವೆಚ್ಚ ಕಡಿಮೆ ಮಾಡಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ಕಾಮಗಾರಿಗಳು, ಯೋಜನೆಗಳಲ್ಲಿ ಶೇ.60ರಷ್ಟು ಹಣ ವ್ಯರ್ಥ ಆಗಲಿದೆ. ಎಲ್ಲಾ ಶೇಕಡಾವಾರು ಲೆಕ್ಕಾಚಾರದಲ್ಲಿ ಹಣ ಬಳಕೆಯಾಗುತ್ತದೆ. ಕೆಳಗಿನಿಂದ ಮೇಲಿನವರೆಗೂ ಕಮೀಷನ್ ಹಂಚಿಕೆಯಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

SCROLL FOR NEXT