ರಾಜಕೀಯ

ವರಿಷ್ಠರೊಂದಿಗಿನ ಅಸಮಾಧಾನ: ಜೆಡಿಎಸ್ ಕಾರ್ಯಕರ್ತರ ಸಭೆಯಿಂದ ದೂರ ಉಳಿದ ಜಿಟಿ ದೇವೇಗೌಡ

Raghavendra Adiga

ಮೈಸೂರು: ಪಕ್ಷ ಹಾಗೂ ಅದರ ಮುಖಂಡರಿಂದ ಅಂತರ ಕಾಪಾಡಿಕೊಳ್ಳುವ ಪ್ರಯತ್ನದಲ್ಲಿರುವ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಭಾನುವಾರ ನಡೆದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯತ್ ಚುನಾವಣೆಗಾಗಿನ ಕಾರ್ಯಕರ್ತರ ಪೂರ್ವಸಿದ್ಧತಾ ಸಭೆಯಿಂದ ದೂರ ಉಳಿದಿದ್ದರು.

ಪಕ್ಷದ ಕಾರ್ಯಕರ್ತರು ಅಥವಾ ಮುಖಂಡರಿಂದ ಯಾವುದೇ ಆಹ್ವಾನ ಅಥವಾ ಕರೆ ಬಂದಿಲ್ಲ ಎಂದ ಜಿಟಿಡಿ, “ಗ್ರಾಮ ಪಂಚಾಯತ್ ಚುನಾವಣೆ ಪಕ್ಷದ ಚಿಹ್ನೆ ಮೇಲೆ ನಡೆಯುವುದಿಲ್ಲ, ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಯಾರ ಕುರಿತು ಪ್ರಚಾರ ಮಾಡುವ ಮೂಲಕ ಅಥವಾ ಬೆಂಬಲಿಸುವ ಮೂಲಕ ಜನರನ್ನು ವಿಭಜಿಸಲು ನಾನು ಬಯಸುವುದಿಲ್ಲ. ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನನ್ನ ಯಾವ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಲು ನಾನು ಬಯಸುತ್ತೇನೆ ” ಎಂದು ಸುದ್ದಿಗಾರರೊಂದಿಗೆ ಮಾತನಾಡಿ ಹೇಳಿದ್ದಾರೆ.

ಜಿಲ್ಲಾ ಪಂಚಾಯತ್ ಚುನಾವಣೆಗೆ ಮುನ್ನ ಜೆಡಿಎಸ್ ನಾಯಕರು ಹುಣಸೂರು ವಿಧಾನಸಭಾ ಕ್ಷೇತ್ರಕ್ಕೆ ಉಸ್ತುವಾರಿ ನೇಮಕ ಮಾಡಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ದೇವೇಗೌಡ ಅವರು ಅಂತಿಮವಾಗಿ ‘ಸಭೆ’ ನಡೆಸುತ್ತಾರೆ ಎಂದು ಪಕ್ಷದ ಕಾರ್ಯಕರ್ತರು ಆಶಿಸಿದ್ದರಿಂದ ಪೂರ್ವಸಿದ್ಧತಾ ಸಭೆ ಬಹಳ ಮಹತ್ವದ್ದಾಗಿತ್ತು.

ಆದರೆ, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹ ಅವರ ಅಧ್ಯಕ್ಷತೆಯಲ್ಲಿ ಪಕ್ಷದ ಕಾರ್ಯಕರ್ತರು ಸಭೆಯನ್ನು ಮುಂದುವರೆಸಿದ್ದಾಗ ಇಬ್ಬರೂ ನಾಯಕರು ದೂರ ಉಳಿದಿದ್ದರು. ಏತನ್ಮಧ್ಯೆ, ಪಕ್ಷದ ಎಲ್ಲ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಕೆ.ಆರ್.ನಗರ ಶಾಸಕ ಸಾ ರಾ ಮಹೇಶ್ ದೇವೇಗೌಡ ಅವರೊಂದಿಗೆ ಭಾನುವಾರ ತೆರೆಮರೆಗಿನ ಸಭೆ ನಡೆಸಿದ್ದು ಸಭೆಯ ನಂತರ ಮಹೇಶ್ ಸುದ್ದಿಗಾರರಿಗೆ, “ದೇವೇಗೌಡ ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರು ಮತ್ತು ನಮಗೆ ಮಾರ್ಗದರ್ಶಕರಾಗಿರಲು ನಾವು ಅವರಲ್ಲಿ ಕೇಳಿದ್ದೇವೆ. ಅವರು ಪಕ್ಷಕ್ಕಾಗಿ ಕೆಲಸ ಮಾಡುತ್ತಾರೆ ಮತ್ತು ಶೀಘ್ರದಲ್ಲೇ ಸಕ್ರಿಯರಾಗುತ್ತಾರೆ." ಎಂದು ಹೇಳಿದ್ದಾರೆ. 

SCROLL FOR NEXT