ರಾಜಕೀಯ

2021 ಕಾಂಗ್ರೆಸ್ ಗೆ ಹೋರಾಟದ ವರ್ಷ: ಡಿ.ಕೆ. ಶಿವಕುಮಾರ್

Lingaraj Badiger

ಬೆಂಗಳೂರು: ಬರುತ್ತಿರುವ 2021 ಹೊಸ ವರ್ಷ ಕಾಂಗ್ರೆಸ್ ಕಾರ್ಯಕರ್ತರಿಗೆ ಹೋರಾಟದ ವರ್ಷ. ಮುಂದೆ ಪಕ್ಷ ಅಧಿಕಾರಕ್ಕೆ‌ ತರಲು, ಪಕ್ಷ ಸಂಘಟನಾತ್ಮಕವಾಗಿ ಹೋರಾಟ ನಡೆಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಇವರು ಇಂತಹದ್ದೇ ಪಕ್ಷದವರು ಎಂದು ಗುರುತಿಸಲು ಸಾಧ್ಯವಿಲ್ಲ. ಆದರೂ ಚುನಾವಣೆಯಲ್ಲಿ ಶೇ.60 ರಷ್ಟು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪಟ್ಟಿ ಕೊಡಬಲ್ಲೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಗ್ರಾಮ ಪಂಚಾಯತಿಗಳಲ್ಲಿ ಗೆದ್ದಿದ್ದಾರೆ. ಫಲಿತಾಂಶದ ಬಗ್ಗೆ ತಮಗೆ ಸಮಾಧಾನವಿದೆ. ಈ ಬಗ್ಗೆ ಜಿಲ್ಲಾಧ್ಯಕ್ಷರಿಂದ ಸಂಪೂರ್ಣ ವರದಿ ತರಿಸಿಕೊಳ್ಳುವುದಾಗಿ ಹೇಳಿದರು.

ಮುಂದೆ ಗ್ರಾಮ ಪಂಚಾಯತಿಗಳಲ್ಲಿ ಯಾರು ಅಧಿಕಾರ ಹಿಡಿಯಲಿದ್ದಾರೆ ಎನ್ನುವುದು‌ ನಿಮಗೆ ಗೊತ್ತಾಗಲಿದೆ ಎಂದು ಮಾರ್ಮಿಕವಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಮೀಸಲಾತಿ ಬಳಸಿ ಗ್ರಾಮ ಪಂಚಾಯತಿಗಳನ್ನು ಹಿಡಿಯಲು ಬಿಜೆಪಿ ಮುಂದಾಗಬಹುದು ಎಂದರು.

ಆಡಳಿತದಲ್ಲಿರುವ ಸರ್ಕಾರಗಳು ಉಪಚುನಾವಣೆ ಗೆಲ್ಲುವುದು ಸಹಜ. ಮುಖ್ಯಮಂತ್ರಿ ಯಡಿಯೂರಪ್ಪ ಉಪಚುನಾವಣೆ ಗೆದ್ದಿರುವ ಬಗ್ಗೆ ಹೇಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರವಿದ್ದಾಗ ಕಾಂಗ್ರೆಸ್ ಸಹ ಉಪಚುನಾವಣೆ ಗೆದ್ದಿತ್ತು. ಈ ಬಗ್ಗೆ ಪಟ್ಟಿ ಕೊಡಬಲ್ಲೆ ಎಂದರು.

SCROLL FOR NEXT