ರಾಜಕೀಯ

ಯಡಿಯೂರಪ್ಪ ಸಚಿವ ಸ್ಥಾನದ ಮಾತುಕೊಟ್ಟಿದ್ದಾರೆ: ಉಮೇಶ್ ಕತ್ತಿ

Srinivasamurthy VN

ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರು ತಮಗೆ ಸಚಿವ ಸ್ಥಾನದ ಮಾತು ನೀಡಿದ್ದಾರೆ ಎಂದು ಬಿಜೆಪಿ ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.

ಬಹು ನಿರೀಕ್ಷೆಯ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಾಳೆ ನಡೆಯಲಿದ್ದು, ಸಚಿವ ಸ್ಥಾನದ ಆಕಾಂಕ್ಷಿಗಳು ಇಂದು ಬೆಳಗ್ಗೆಯಿಂದಲೇ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮನೆಗೆ ದಾಂಗುಡಿಯಿಡುತ್ತಿದ್ದಾರೆ. ಅಲ್ಲದೆ, ತಮಗೆ ಸಚಿವ ಸ್ಥಾನ ಖಾಯಂ ಮಾಡುವಂತೆ ಮತ್ತೊಂದು ಸುತ್ತಿನ ಲಾಬಿಗೆ ಮುಂದಾಗಿದ್ದಾರೆ. ಇದೇ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಶಾಸಕ ಉಮೇಶ್ ಕತ್ತಿ ಅವರು, ಎಂಟು ಬಾರಿ ಶಾಸಕನಾಗಿರುವ ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತುಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ಯಡಿಯೂರಪ್ಪ ಅವರ ಭೇಟಿ ಬಳಿಕ ವಿಧಾನಸೌಧದಲ್ಲಿ ಮಾತನಾಡಿದ ಅವರು, ತಮ್ಮನ್ನು ಮಂತ್ರಿ ಮಾಡಿ ಎಂದು‌ ಕೇಳಿಲ್ಲ. ಆದರೆ ನನಗೆ ಸಚಿವ ಸ್ಥಾನ ಕೊಡುವುದಾಗಿ ಭರವಸೆ ನೀಡಿದ್ದಾರೆ. ಸಚಿವನನ್ನಾಗಿ ಮಾಡಿದರೆ ಕೆಲಸ‌ ಮಾಡುತ್ತೇನೆ. ಇಲ್ಲವಾದರೆ ಶಾಸಕನಾಗಿ ಕೆಲಸ ಮಾಡುತ್ತೇನೆ. ಸಚಿವ ಸ್ಥಾನ‌ತ್ಯಾಗ ಮಾಡುವಂತೆ ಯಾರೂ ನನಗೆ ಮನವೊಲಿಸಿಲ್ಲ. ನನಗೆ ಈ ಬಗ್ಗೆ ಯಾರೂ ಮಾತಾಡಿಲ್ಲ. ಹತ್ತು ಜನರು ಸಚಿವರಿಗೆ ಸ್ಥಾನ ನೀಡುವ ಬಗ್ಗೆ ಮಾಹಿತಿ ಇಲ್ಲ ಎಂದು ಹೇಲಿದರು.

ಅಂತೆಯೇ ಸಿಎಂ ಕರೆದರೆ ನಾಳೆಯೇ ಪ್ರಮಾಣವಚನ ಸ್ವೀಕರಿಸುತ್ತೇನೆ. ಇಲ್ಲದಿದ್ದರೆ ಶಾಸಕನಾಗಿ ಕ್ಷೇತ್ರದ ಕೆಲಸ ಮುಂದುವರೆಸುತ್ತೇನೆ. ಈವರೆಗೆ ಸಿಎಂರಿಂದ ಏನು ಮಾಹಿತಿ ಬಂದಿಲ್ಲ. ನಾನು ಮಂತ್ರಿ ಸ್ಥಾನಕ್ಕೆ ದುಂಬಾಲು ಬಿದ್ದಿಲ್ಲ. ದುಂಬಾಲು ಬಿದ್ದು ಸ್ಥಾನ ಕೇಳುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

SCROLL FOR NEXT