ರಾಜಕೀಯ

ಪ್ರಚೋದನಾಕಾರಿ ಹೇಳಿಕೆ: ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ವಿರುದ್ಧ ಕಾಂಗ್ರೆಸ್ ದೂರು

Nagaraja AB

ಬೆಂಗಳೂರು: ದೇಶದಲ್ಲಿ ಬಹುಸಂಖ್ಯಾತರಾಗಿರುವ ಹಿಂದೂಗಳು ಸಿಎಎ ವಿರೋಧಿಸುತ್ತಿರುವ  ಅಲ್ಪಸಂಖ್ಯಾತರ ಮೇಲೆ ಖಡ್ಗ ಜಳಪಿಸಿದರೆ ಅವರೆಲ್ಲರೂ ನಿರ್ನಾಮವಾಗುತ್ತಾರೆ ಎಂದು  ಪ್ರಚೋದನಕಾರಿ ಹೇಳಿಕೆ ನೀಡಿರುವ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ  ಸೋಮಶೇಖರ್ ರೆಡ್ಡಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕಾಂಗ್ರೆಸ್  ದೂರು ಸಲ್ಲಿಸಿದೆ.

ವಿಪಕ್ಷ ನಾಯಕ ಸಿದ್ದರಾಮಯ್ಯ  ನೇತೃತ್ವದ ಕಾಂಗ್ರೆಸ್ ನಿಯೋಗ  ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರಿಗೆ ಶನಿವಾರ ಮನವಿ ಸಲ್ಲಿಸಿತು. ಪೊಲೀಸ್ ಮಹಾ  ನಿರ್ದೇಶಕರ ಪರವಾಗಿ ಎಡಿಜಿಪಿ ಡಾ.ಎಂ.ಎ.ಸಲೀಂ ಅವರು ಮನವಿ ಸ್ವೀಕರಿಸಿದರು.

ಜ‌ 3ರಂದು ಬಳ್ಳಾರಿಯ ಗಡಗಿ ಚನ್ನಪ್ಪ ವೃತ್ತದಲ್ಲಿ'ದೇಶಭಕ್ತ  ನಾಗರೀಕರ ವೇದಿಕೆ' ವತಿಯಿಂದ ಸಿಎಎ ಹಾಗೂ ಎನ್‌ಸಿ‌ಆರ್ ಪರವಾಗಿ ನಡೆದ ಸಭೆ ಹಾಗೂ  ಮೆರವಣಿಗೆಯಲ್ಲಿ ಶಾಸಕ ಸೋಮಶೇಖರ್ ರೆಡ್ಡಿ ಹಾಗೂ ಆರ್‌ಎಸ್‌ಎಸ್ ಮುಖಂಡರು  ಭಾಗಿಯಾಗಿದ್ದರು. 

ಪೌರತ್ವ ತಿದ್ದುಪಡಿ ವಿರೋಧಿಸುವವರನ್ನು ಶಾಸಕ ಸೋಮಶೇಖರರೆಡ್ಡಿ ಅವಾಚ್ಯ ಶಬ್ದಗಳಿಂದ‌  ನಿಂದಿಸಿದಲ್ಲದೇ ದೇಶಬಿಟ್ಟು ಹೋಗಬೇಕೆಂದು ಬೆದರಿಕೆಯನ್ನು  ಹಾಕಿದ್ದಾರೆ. ದೇಶದಲ್ಲಿ ಶೇ. 80ರಷ್ಟು ಹಿಂದೂಗಳು, ಶೇ 18ರಷ್ಟು ಅಲ್ಪಸಂಖ್ಯಾತರಿದ್ದಾರೆ. ಬಹುಸಂಖ್ಯಾತರಾದ  ಹಿಂದೂಗಳು ಉಫ್ ಎಂದು ಊದಿದರೆ ಅಲ್ಪಸಂಖ್ಯಾತರು ಹಾರಿಹೋಗಬೇಕು.10 ಮಕ್ಕಳನ್ನು  ಹುಟ್ಟಿಸುವ ತಾಕತ್ತು ಮುಸ್ಲಿಮರಿಗಿದ್ದರೆ 50 ಮಕ್ಕಳನ್ನು ಹುಟ್ಟಿಸುವಷ್ಟು ಶಕ್ತಿ  ಹಿಂದೂಗಳಿಗಿದೆ ಎಂದಿದ್ದಾರೆ. 

ಛತ್ರಪತಿ ಶಿವಾಜಿ ಮಹಾರಾಜರಂತೆ‌ ಹಿಂದೂಗಳು ಮುಸ್ಲಿಂರ ಮೇಲೆ ಖಡ್ಗ  ಬೀಸಿದರೆ ಅವರೆಲ್ಲ ನಿರ್ನಾಮ ಆಗಬೇಕು. ಬೇವಕೂಫ್ ಕಾಂಗ್ರೆಸ್ ನಾಯಕರ ಮಾತುಕೇಳಿ ಬೀದಿಗೆ  ಬಂದರೆ ಪರಿಣಾಮ ನೆಟ್ಟಗೆ ಇರದು. ಎಲ್ಲರೂ ಕಾಯಿದೆ ಪರವಾಗಿ ಇರಬೇಕು. ಇಲ್ಲದಿದ್ದರೆ  ಬಾಂಗ್ಲಾ, ಪಾಕಿಸ್ತಾನಕ್ಕೆ ಹೋಗಬೇಕು ಎಂದು ಪ್ರಚೋದನಕಾರಿ‌ ಹೇಳಿಕೆ ನೀಡಿದ್ದರು. 

ಬಿಜೆಪಿ  ಶಾಸಕರ ಇಂತಹ ಪ್ರಚೋದನಕಾರಿ ಹೇಳಿಕೆಯಿಂದ ಸಮಾಜದಲ್ಲಿ ಕೋಮುಸೌಹಾರ್ದ ಕದಡಿ ಹೋಗಿದ್ದು  ಅಶಾಂತಿಗೆ ಕಾರಣವಾಗಿದೆ. ಹೀಗಾಗಿ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ  ಮನವಿಯಲ್ಲಿ ತಿಳಿಸಲಾಗಿದೆ.

SCROLL FOR NEXT