ರಾಜಕೀಯ

ಮುಸ್ಲಿಮರು ಮಸೀದಿಗಳಲ್ಲಿ ಆಯುಧಗಳನ್ನು ಇಟ್ಟುಕೊಂಡಿರುತ್ತಾರೆ ಎಂಬ ರೇಣುಕಾಚಾರ್ಯ ಹೇಳಿಕೆ ವೈಯಕ್ತಿಕ: ಬಿಜೆಪಿ

Sumana Upadhyaya

ಬೆಂಗಳೂರು: ಮುಸಲ್ಮಾನರು ಮಸೀದಿಗಳಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸುವ ಮೊದಲು ಶಸ್ತ್ರಾಸ್ತ್ರ, ಕತ್ತಿ, ಗುರಾಣಿಗಳಂತಹ ಆಯುಧಗಳನ್ನು ಇಟ್ಟುಕೊಂಡಿರುತ್ತಾರೆ ಎಂದು ಬಿಜೆಪಿ ಶಾಸಕ ಮತ್ತು ಸಿಎಂ ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಹೇಳಿರುವುದು ಹೊಸ ವಿವಾದಕ್ಕೆ ಕಾರಣವಾಗಿದ್ದು ಬಿಜೆಪಿ ನಾಯಕರು ಇದರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.


ಬಿಜೆಪಿ ವಕ್ತಾರ ಎಸ್ ಪ್ರಕಾಶ್, ಇಂತಹ ಹೇಳಿಕೆಗಳಿಂದ ಬಿಜೆಪಿ ಯಾವಾಗಲೂ ದೂರವಿರುತ್ತದೆ. ಇದು ಕೇವಲ ರೇಣುಕಾಚಾರ್ಯ ಅವರ ವೈಯಕ್ತಿಕ ಹೇಳಿಕೆ, ಇದಕ್ಕೂ ಬಿಜೆಪಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದಿದ್ದಾರೆ.


ಮತ್ತೊಬ್ಬ ಪಕ್ಷದ ವಕ್ತಾರ ಜಿ ಮಧುಸೂದನ, ರೇಣುಕಾಚಾರ್ಯ ಅವರು ನೀಡಿರುವ ಹೇಳಿಕೆ ಬಗ್ಗೆ ಪರಿಶೀಲನೆ ನಡೆಸಿ ಅವರು ಯಾವ ಸಂದರ್ಭದಲ್ಲಿ ಹೇಳಿದ್ದಾರೆ ಎಂದು ನೋಡಿಕೊಂಡು ಮಸೀದಿಗಳಲ್ಲಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡಿದ್ದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.


ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಅರಿವು ಮೂಡಿಸುವ ರ್ಯಾಲಿಯಲ್ಲಿ ಮುಸ್ಲಿಂ ಸಮುದಾಯದವರು ಭಾಗವಹಿಸದಿದ್ದ ಬಗ್ಗೆ ತಮ್ಮ ಬೇಸರ ವ್ಯಕ್ತಪಡಿಸಿ ಮಾತನಾಡುತ್ತಿದ್ದಾಗ ರೇಣುಕಾಚಾರ್ಯ ಅವರು, ತಾವು ಯಾರನ್ನೂ ತಾರತಮ್ಯ ಮಾಡದಿದ್ದರೂ ಮುಸ್ಲಿಂರಲ್ಲಿ ತಮ್ಮ ಮತ್ತು ಬಿಜೆಪಿ ಬಗ್ಗೆ ಉಂಟಾಗಿರುವ ಬದಲಾವಣೆ ನಿಜಕ್ಕೂ ಅಚ್ಚರಿಯನ್ನುಂಟುಮಾಡಿದೆ ಎಂದಿದ್ದರು. 


ಇನ್ನು ರೇಣುಕಾಚಾರ್ಯ ಅವರ ಹೇಳಿಕೆ ಬಗ್ಗೆ ತನಿಖೆ ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಪಕ್ಷ ನಾಯಕರು ಆಗ್ರಹಿಸಿದ್ದಾರೆ.

SCROLL FOR NEXT