ರಾಜಕೀಯ

ಆರ್‌ಆರ್‌ ನಗರದಲ್ಲಿ ಠೇವಣಿ ಕಳೆದುಕೊಂಡ ಜೆಡಿಎಸ್, ಸೋಲನ್ನು ಸಮಚಿತ್ತದಿಂದ ಸ್ವೀಕರಿಸುತ್ತೇವೆ ಎಂದ ಕುಮಾರಸ್ವಾಮಿ

Lingaraj Badiger

ಬೆಂಗಳೂರು: ರಾಜ್ಯದ ಎರಡು ಉಪ ಚುನಾವಣೆಗಳ ಫಲಿತಾಂಶವನ್ನು ನಮ್ಮ ಪಕ್ಷ ಸಮಚಿತ್ತ ಭಾವದಿಂದ ಸ್ವೀಕರಿಸುತ್ತದೆ. ಪಕ್ಷದ ಅಭ್ಯರ್ಥಿಗಳ ಪರವಾಗಿ ದುಡಿದ ಮುಖಂಡರು ಮತ್ತು ಕಾರ್ಯಕರ್ತರಿಗೆ ನಾನು ಸದಾ ಋಣಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಉಪ ಚುನಾವಣೆ ಫಲಿತಾಂಶದ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಅವರು, ಈ ಫಲಿತಾಂಶದ ಹಿನ್ನಡೆಯಿಂದ ಧೃತಿಗೆಡಬೇಕಾದ ಅಗತ್ಯವಿಲ್ಲ. ರಾಜಕೀಯ ಪಕ್ಷಗಳಿಗೆ ಉಪಚುನಾವಣೆ ಫಲಿತಾಂಶ ಭವಿಷ್ಯದ ಮಂತ್ರ ದಂಡ ಅಲ್ಲ. ಉಪಚುನಾವಣೆಗಳು ಹೇಗೆ ನಡೆದವು ಎಂಬ ಪರಾಮರ್ಶೆಗೆ ಹೋಗುವುದಿಲ್ಲ. ಜನತಾಜನಾರ್ಧನ ತೀರ್ಪಿಗೆ ತಲೆಬಾಗಿದ್ದೇನೆ ಎಂದು ವಿನಂಬ್ರವಾಗಿ ಮನವಿ ಮಾಡಿದ್ದಾರೆ.

ಹಿಂದೊಮ್ಮೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಚುನಾವಣೆಯಲ್ಲಿ ಜನತೆ ಮನ್ನಣೆ ನೀಡಿರಲಿಲ್ಲ. ಕೇವಲ 2 ಸೀಟು ಪಕ್ಷಕ್ಕೆ ಬಂದಿದ್ದ ಕಾಲವೊಂದಿತ್ತು. ಆನಂತರ ಇದೇ ಜನತೆ ಮುಖ್ಯಮಂತ್ರಿ ಮಾಡಿದರು, ಜನಾಶೀರ್ವಾದದಿಂದ ಪ್ರಧಾನಿಯಾದರು. ಉಪಚುನಾವಣೆ ಫಲಿತಾಂಶದಿಂದ ಕುಗ್ಗಿ ಹೋಗದೆ, ಪಕ್ಷವನ್ನು ಸಂಘಟಿಸಿ ಬಲಪಡಿಸುವತ್ತ ಗಮನಹರಿಸುತ್ತೇನೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಕಳೆದ 15 ತಿಂಗಳಲ್ಲಿ ಜನತೆಗೆ ಸ್ಪಂದಿಸಿದ ಕಾಳಜಿಗೆ ಉಪ ಚುನಾವಣೆ ಫಲಿತಾಂಶ ಗೆಲುವು ತಂದು ಕೊಟ್ಟಿರಬಹುದು ಎಂದಷ್ಟೇ ವ್ಯಾಖ್ಯಾನ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಆರ್‌ಆರ್‌ ನಗರದಲ್ಲಿ ಠೇವಣಿ ಕಳೆದುಕೊಂಡ ಜೆಡಿಎಸ್
ರಾಜರಾಜೇಶ್ವರಿ ನಗರದಲ್ಲಿ ಜೆಡಿಎಸ್ ಈ ಬಾರಿ ಹೀನಾಯವಾಗಿ ಸೋಲು ಅನುಭವಿಸಿದ್ದು, ಠೇವಣಿಯನ್ನು ಕಳೆದುಕೊಂಡಿದೆ.

ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಗೆಲುವಿನ ನಗೆ ಬೀರಿದ್ದು, ಕಾಂಗ್ರೆಸ್‍ನ ಕುಸುಮಾ ಎರಡನೇ ಸ್ಥಾನದಲ್ಲಿದ್ದಾರೆ. ಆದರೆ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ 10,251 ಮತಗಗಳನ್ನು ಪಡೆಯುವ ಮೂಲಕ ಠೇವಣಿ ಕಳೆದುಕೊಂಡಿದ್ದಾರೆ. ಕಳೆದ ಬಾರಿ ಜೆಡಿಎಸ್ 60 ಸಾವಿರ ಮತಗಳನ್ನು ಪಡೆದಿತ್ತು. ಆದರೆ ಈ   ಬಾರಿ ಇದರ ಅರ್ಧದಷ್ಟು ಮತಗಳನ್ನು ಸಹ ಜೆಡಿಎಸ್ ಅಭ್ಯರ್ಥಿ ಪಡೆದಿಲ್ಲ. ಒಟ್ಟು 57,936 ಮತಗಳ ಅಂತರದಿಂದ ಮುನಿರತ್ನ ಈ ಚುನಾವಣೆಯನ್ನು ಗೆದ್ದಿದ್ದಾರೆ.

SCROLL FOR NEXT