ರಾಜಕೀಯ

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ರಕ್ಷಣೆಗೆ ಬರಬೇಕು: ಅಖಂಡ ಶ್ರೀನಿವಾಸಮೂರ್ತಿ

Lingaraj Badiger

ಬೆಂಗಳೂರು: ತಮ್ಮ ಮನೆಗೆ ಬೆಂಕಿ ಹಾಕಿದ ಅಪರಾಧಿಗಳು ಬೆಂಗಳೂರಿನಿಂದ ಹೊರಗಡೆ ಓಡಿ ಹೋಗಿದ್ದಾರೆ. ಶಾಸಕನಾಗಿ ತಮಗೆ ಅನ್ಯಾಯ ಆಗಿದೆ. ರಾಜ್ಯ ನಾಯಕರಿಂದ ನ್ಯಾಯ ಸಿಗುತ್ತಿಲ್ಲ. ಹೀಗಾಗಿ ಹೈಕಮಾಂಡ್ ನ ಸೋನಿಯಾಗಾಂಧಿ, ರಾಹುಲ್ ಗಾಧಿ ತಮ್ಮ ರಕ್ಷಣೆಗೆ ಬರಬೇಕು ಎಂದು ಪುಲಕೇಶಿನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹೇಳಿದ್ದಾರೆ.

ಶಾಸಕರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಖಂಡ ಶ್ರೀನಿವಾಸ ಮೂರ್ತಿ, ನಮ್ಮ ಮನೆಗೆ ಬೆಂಕಿ ಬಿದ್ದು ಮೂರು ತಿಂಗಳಾಗಿದೆ. ಈ ಪ್ರಕರಣದಲ್ಲಿ ತಮಗೆ ನ್ಯಾಯ ಸಿಕ್ಕಿಲ್ಲ. ಆದರೆ ಎಲ್ಲ ಮಾಧ್ಯಮಗಳು ತಮಗೆ ಸಹಕಾರ ನೀಡಿವೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮಗೆ ರಕ್ಷಣೆ ಕೊಡಬೇಕು. ಅಪರಾಧಿಗಳಿಗೆ ರಕ್ಷಣೆ ಸಿಗಬಾರದು. ಶಿಕ್ಷೆಯಾಗಲೇಬೇಕು ಎಂದರು.

ಅಪರಾಧಿಗಳು ಹೊರಗಡೆ ಓಡಿ ಹೋಗಿದ್ದಾರೆ. ಈ ಪ್ರಕರಣದಲ್ಲಿ ನೇರ ಆರೋಪಿ ಮಾಜಿ ಮೇಯರ್ ಸಂಪತ್ ರಾಜ್. ಸಂಪತ್ ರಾಜ್ ಪಿಎ ಅರುಣ್ ಮುಖಾಂತರ ಕಾಲ್ ಮಾಡಿದ್ದಾರೆ. ಸಂಪತ್ ರಾಜ್ ಅವರನ್ನು ಮೊದಲ ಆರೋಪಿ ಮಾಡಲೇಬೇಕು ಎಂದು ಒತ್ತಾಯಿಸಿದರು.

ರಾಜ್ಯ ನಾಯಕರ ಮನಸ್ಸಿನಲ್ಲಿ ಏನಿದೆ ಎಂದು ತಮಗೆ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಶ್ರೀನಿವಾಸಮೂರ್ತಿ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಡಿಜೆ ಹಳ್ಳಿ ಗಲಭೆ ಪ್ರಕರಣದ ವಿಚಾರವಾಗಿ ಮಾಜಿ ‌ಮೇಯರ್ ಸಂಪತ್ ರಾಜ್ ತಲೆ ಮರೆಸಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಶ್ರೀನಿವಾಸ್ ಮೂರ್ತಿ, ಆಸ್ಪತ್ರೆಯಿಂದ ಅವರು ಹೇಗೆ ಪರಾರಿಯಾದರು ಅಂತ ಗೊತ್ತಿಲ್ಲ. ತಪ್ಪು ಯಾರೇ ಮಾಡಿದರೂ ಶಿಕ್ಷೆ ಆಗಬೇಕು. ಯಾವ ಪಕ್ಷದವರು ಆಗಿದ್ದರೂ ಸರಿ. ಅವರಿಗೆ ಶಿಕ್ಷೆ ವಿಧಿಸಬೇಕು. ನಮ್ಮ ನಾಯಕರು, ಸಿಎಂ ಎಲ್ಲರಿಗೂ ನನ್ನದು ಇದೇ ಮನವಿ ಎಂದರು.

SCROLL FOR NEXT