ರಾಜಕೀಯ

ರಾಜ್ಯಸಭಾ ಚುನಾವಣೆ: ಬಿಜೆಪಿಯ ಕೆ. ನಾರಾಯಣ್ ಅವಿರೋಧ ಆಯ್ಕೆ ಬಹುತೇಕ ಖಚಿತ

Sumana Upadhyaya

ಬೆಂಗಳೂರು: ಅಶೋಕ್ ಗಸ್ತಿಯವರ ನಿಧನದಿಂದ ತೆರವಾದ ರಾಜ್ಯಸಭಾ ಸ್ಥಾನಕ್ಕೆ ಬಿಜೆಪಿ ಕೆ ನಾರಾಯಣ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದು ಅವಿರೋಧವಾಗಿ ಅವರು ಆಯ್ಕೆಯಾಗುವ ಸಾಧ್ಯತೆಯಿದೆ. ನಿನ್ನೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ.

ನಾರಾಯಣ್ ಅವರ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್, ಸಚಿವರಾದ ಆರ್ ಅಶೋಕ್ ಮತ್ತು ಕೆ ಎಸ್ ಈಶ್ವರಪ್ಪ ಜೊತೆಗಿದ್ದರು. ಅವರ ಅಭ್ಯರ್ಥಿತನದ ಆಯ್ಕೆಯನ್ನು ಬಿಜೆಪಿ ಮೊನ್ನೆಯಷ್ಟೇ ಘೋಷಿಸಿತ್ತು. ನಾರಾಯಣ್ ಅವರ ಹೆಸರು ಪ್ರಕಟಿಸಿದ್ದು ಹಲವರಿಗೆ ಅಚ್ಚರಿಯನ್ನುಂಟುಮಾಡಿತ್ತು. 

ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿ ಮತ್ತು ರಾಜ್ಯಸಭಾ ಉಪ ಚುನಾವಣೆಯ ರಿಟರ್ನಿಂಗ್ ಅಧಿಕಾರಿಯಾದ ಎಂ ಕೆ ವಿಶಾಲಾಕ್ಷಿ, ನಾರಾಯಣ್ ಅವರು ಬಿ ಫಾರ್ಮ್ ಸಲ್ಲಿಸಿದ್ದಾರೆ ಎಂದರು. ಮತ್ತೊಬ್ಬ ಅಭ್ಯರ್ಥಿ ಸುಧಾಕರ್ ಕೂಡ ನಾಮಪತ್ರ ಸಲ್ಲಿಸಿದ್ದು ಆದರೆ ಅವರು ಬಿ ಫಾರ್ಮ್ ಸಲ್ಲಿಕೆ ಮಾಡಿಲ್ಲ. ಅದು ನಾಮಪತ್ರ ಸಲ್ಲಿಸಲು ಕಡ್ಡಾಯವಾಗಿರುತ್ತದೆ. 

ಇಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನವೆಂಬರ್ 23 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಬೇರೆ ಯಾವುದೇ ಪಕ್ಷಗಳ ನಾಯಕರು ನಾಮಪತ್ರ ಸಲ್ಲಿಸಿಲ್ಲ. ಹೀಗಾಗಿ ನಾರಾಯಣ್ ಅವರು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ನಾರಾಯಣ್ ಅವರಿಗೆ ಗೆಲ್ಲಲು 112 ಸ್ಥಾನಗಳು ಬೇಕು, ಅದು ಬಿಜೆಪಿಯಲ್ಲಿ ವಿಧಾನಸಭೆಯಲ್ಲಿ ಇದೆ. ಮೂಲತಃ ಉದ್ಯಮಿಯಾಗಿರುವ ನಾರಾಯಣ್ ಬೆಂಗಳೂರಿನಲ್ಲಿ ಪ್ರಿಂಟಿಂಗ್ ಪ್ರೆಸ್ ಹೊಂದಿದ್ದಾರೆ. ಆರ್ ಎಸ್ಎಸ್ ಜೊತೆಗೆ ಗುರುತಿಸಿಕೊಂಡಿರುವ ಅವರು ನೇಯ್ಗೆ ಸಮುದಾಯದ ಪ್ರತಿನಿಧಿಯಾಗಿದ್ದಾರೆ.

SCROLL FOR NEXT