ರಾಜಕೀಯ

ಸಂಪುಟ ವಿಸ್ತರಣೆ: ಬಿ.ಎಲ್.ಸಂತೋಷ್ ಭೇಟಿ ಮಾಡಿದ ರಮೇಶ್ ಜಾರಕಿಹೊಳಿ, ಗರಿದೆರಿದ ರಾಜಕೀಯ

Lingaraj Badiger

ನವದೆಹಲಿ: ಮೂರು ದಿನಗಳಿಂದ ದೆಹಲಿಯಲ್ಲಿಯೇ ಕಾದು ಕುಳಿತಿದ್ದ ಸಚಿವ ರಮೇಶ್ ಜಾರಕಿಹೊಳಿ ಅವರು ಶುಕ್ರವಾರ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿರುವುದು ರಾಜ್ಯ ರಾಜಕಾರಣದಲ್ಲಿ ಭಾರೀ ಚೆರ್ಚೆಗೆ ಗ್ರಾಸವಾಗಿದೆ.

ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಕಸರತ್ತು ಆರಂಭಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷದ ರಾಷ್ಟ್ರಅಧ್ಯಕ್ಷ ಜೆ.ಪಿ.ನಡ್ಡಾ ಅವರ ಭೇಟಿಗಾಗಿ ದೆಹಲಿಗೆ ನವೆಂಬರ್ 18ರಂದು ತೆರಳಿದ್ದರು. ಅಂದೇ ಸಚಿವ ರಮೇಶ್ ಜಾರಕಿಹೊಳಿಯೂ ದೆಹಲಿ ತಲುಪಿದ್ದರೂ ಕರ್ನಾಟಕ ಭವನದಲ್ಲಿ ಅಥವಾ ಬೇರೆ ಕಡೆ ಯಡಿಯೂರಪ್ಪ ಅವರನ್ನು ಭೇಟಿ ಮಾಡರಲಿಲ್ಲ. ಆದರೆ ಪಶ್ಚಿಮ ಬಂಗಾಳ ರಾಜ್ಯದ ಪ್ರವಾಸದಲ್ಲಿದ್ದ ಬಿ.ಎಲ್.ಸಂತೋಷ್ ಅವರು ದೆಹಲಿಗೆ ವಾಪಸ್ ಬರುವವರೆಗೆ ಕಾದು ಕುಳಿತು ಇಂದು ಭೇಟಿ ಮಾಡಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಚೆರ್ಚೆಯನ್ನು ಹುಟ್ಟುಹಾಕಿದೆ. 

ಮುಖ್ಯಮಂತ್ರಿ ಯಡಿಯೂರಪ್ಪ ಬಣದಲ್ಲಿದ್ದ ಸಚಿವ ರಮೇಶ್ ಜಾರಕಿಹೊಳಿ, ಪದೇ ಪದೇ ಸಂತೋಷ್ ಭೇಟಿಯಾಗುತ್ತಿರುವುದರಿಂದ ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರುವ ಮೂಲಕ ಸಚಿವ ಸಂಪುಟದಲ್ಲಿ ತಮ್ಮ ಬೆಂಬಲಿಗರಿಕೆ ಸೂಕ್ತ ಸ್ಥಾನಮಾನ ದೊರಕಿಸಿಕೊಳ್ಳುವ ಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಸಂತೋಷ್ ಜೊತೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಭೇಟಿ ಮಾಡಿ ಯೋಗೀಶ್ವರ್ ಹಾಗೂ ಇತರರಿಗೆ ಸಚಿವ ಸ್ಥಾನವನ್ನು ಕೊಡಿಸುವ ಪ್ರಯತ್ನ ಮುಂದುವರೆಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. 

ಮತ್ತೊಂದೆಡೆ ವಲಸಿಗರಿಗೆ ಬಿಜೆಪಿ ಸರ್ಕಾರದಲ್ಲಿ ಎಲ್ಲಾ ಸೌಲಭ್ಯಗಳು, ಸಚಿವ ಸ್ಥಾನ ದೊರಕುತ್ತಿರುವುದರಿಂದ ಮೂಲ ಬಿಜೆಪಿಗರಲ್ಲಿ ರಮೇಶ್ ಜಾರಕಿಹೊಳಿ ಟೀಂ ಬಗ್ಗೆ ಆಕ್ರೋಷ ಹೆಚ್ಚಾಗ ತೊಡಗಿದೆ.ಇದರಿಂದಾಗಿ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸಮಸ್ಯೆ ಹಾಗೂ ನಾಯಕತ್ವ ಬದಲಾದರೂ ತಮ್ಮ ಬೆಂಬಲಿಗ ಶಾಸಕರ ಹಿತ ರಕ್ಷಣೆಗೆ ರಮೇಶ್ ಜಾರಕಿಹೊಳಿ ಟೊಂಕಟ್ಟಿ ನಿಂತಿದ್ದಾರೆ ಎನ್ನಲಾಗಿದೆ.

SCROLL FOR NEXT