ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಜಿ.ಟಿ ದೇವೇಗೌಡ ಅವರು ಬುಧವಾರ ಬೆಳಗ್ಗೆ ಭೇಟಿ ನೀಡಿ ಮಾತುಕತೆ ನಡೆಸಿರುವುದು ಹಲವು ಊಹಾ ಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.
ಕೊರೋನಾದಿಂದ ಗುಣಮುಖರಾದ ನಂತರ ಮತ್ತು ಸಿಬಿಐ ದಾಳಿ ನಂತರ ಶಿವಕುಮಾರ್ ಅವರನ್ನು ಭೇಟಿಯಾಗಿರಲಿಲ್ಲ, ಇದೊಂದು ಸೌಜನ್ಯದ ಭೇಟಿ ಎಂದು ಹೇಳಿದ್ದಾರೆ.
ಪುತ್ರ ಹರೀಶ್ ಗೌಡ ಅವರ ರಾಜಕೀಯ ಭವಿಷ್ಯವನ್ನು ಗಮನದಲ್ಲಿಸಿರಿಸಿಕೊಂಡು ಜಿ.ಟಿ ದೇವೇಗೌಡ ಪದೇ ಪದೇ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪುತ್ರನಿಗೆ ಟಿಕೆಟ್ ಕೊಡಿಸಲು ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
2019ರ ಹುಣಸೂರು ವಿಧಾನಸಭೆ ಉಪ ಚುನಾವಣೆಯಲ್ಲಿ ಜಿಟಿಡಿ ಪುತ್ರ ಹರೀಶ್ ಗೌಡ ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ಅವರಿಗೆ ಬೆಂಬಲ ನೀಡಿದ್ದರು.
ಆದರೆ ಹುಣಸೂರು ವಿಧಾನಸಭೆ ಉಪಚುನಾವಣೆ ಯಲ್ಲಿ ಫಲಿತಾಂಶ ನೋಡಿದ ನಂತರ ಮೈಸೂರು ಭಾಗದಲ್ಲಿ ಮುಂದಿನ ನಾಯಕನನ್ನಾಗಿ ಬೆಳೆಸಲು ಶಿವಕುಮಾರ್ ಅವರ ಸಹಾಯಕ್ಕಾಗಿ ಜಿಟಿ ದೇವೇಗೌಡ ಬಯಸುತ್ತಿದ್ದಾರೆ.
ಇದರ ಜೊತೆಗೆ ಜಿಟಿ ದೇವೇಗೌಡ ಕೂಡ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ, ಆದರೆ ಈ ಹೇಳಿಕೆಯನ್ನು ಜಿಟಿಡಿ ನಿರಾಕರಿಸಿದ್ದಾರೆ, ಈ ಮೊದಲು ನಾನು ಬಿಜೆಪಿ ಸೇರುತ್ತೇನೆ ಎಂದು ಹೇಳಲಾಗುತ್ತಿತ್ತು, ನನ್ನ ಮನಸ್ಸಿನಲ್ಲಿ ಇದ್ಯಾವುದಕ್ಕೂ ಅವಕಾಶವಿಲ್ಲ,. ನಾನು ಹಲವು ಜೆಡಿಎಸ್ ನಾಯಕರ ಜೊತೆ ಕೆಲಸ ಮಾಡಿದ್ದೇನೆ, ಕುಮಾರ ಸ್ವಾಮಿ ಅವರನ್ನು ಸಿಎಂ ಮಾಡಲು ನಾನು ಕಷ್ಟ ಪಟ್ಟಿದ್ದೇನೆ, ಹೀಗಿರುವಾಗ ಸರ್ಕಾರ ಕೆಡವಿದ ಬಿಜೆಪಿಗೆ ನಾನು ಹೇಗೆ ಸೇರಲಿ ಎಂದು ಪ್ರಶ್ನಿಸಿದ್ದಾರೆ.
ಡಿಕೆ ಶಿವಕುಮಾರ್ ಮನೆಗೆ ಬಂದಿದ್ದ ಸೌಜನ್ಯದ ಭೇಟಿಯಾಗಿತ್ತು, 2019 ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಸರ್ಕಾರ ಬೀಳಿಸಲು ಮುಂಬೈ ಹೋಟೆಲ್ ನಲ್ಲಿ ವಾಸ್ತವ್ಯಹೂಡಿದ್ದಾಗ ರೆಬೆಲ್ ಶಾಸಕರ ಮನವೊಲಿಸಲು ಡಿಕೆ ಶಿವಕುಮಾರ್ ಜೊತೆ ಜಿಟಿ ದೇವೇಗೌಡ ಕೂಡ ಮುಂಬಯಿಗೆ ತೆರಳಿದ್ದರು.