ರಾಜಕೀಯ

ಕೇಂದ್ರ, ರಾಜ್ಯ ಸರ್ಕಾರಕ್ಕೆ ಉಪ ಚುನಾವಣೆ ಫಲಿತಾಂಶದ ಮೂಲಕ ಎಚ್ಚರಿಕೆಯ ಸಂದೇಶ ರವಾನೆ: ಡಿಕೆ ಶಿವಕುಮಾರ್

Vishwanath S

ಬೆಂಗಳೂರು: ಶಿರಾ ಹಾಗೂ ಆರ್.ಆರ್ ನಗರ ಉಪಚುನಾವಣೆಯನ್ನು ಯಡಿಯೂರಪ್ಪ ಸರ್ಕಾರವನ್ನಾಗಲೀ ಅಥವಾ ಮೋದಿ ಸರ್ಕಾರವನ್ನಾಗಲೀ ಅಸ್ಥಿರಗೊಳಿಸಲು ಕಾಂಗ್ರೆಸ್ ಎದುರಿಸುತ್ತಿಲ್ಲ. ಈ ಉಪಚುನಾವಣೆಯನ್ನು ಎರಡೂ ಸರ್ಕಾರಗಳಿಗೆ ಸಂದೇಶವೊಂದನ್ನು ರವಾನಿಸಲು ಎದುರಿಸಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ರಾಜರಾಜೇಶ್ವರಿ ನಗರ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜರಾಜೇಶ್ವರಿ ನಗರ ಉಪಚುನಾವಣೆಗೆ ಪಕ್ಷದ ನಾಯಕರೆಲ್ಲ ಒಟ್ಟಾಗಿ ಸೇರಿ ವಿದ್ಯಾವಂತ, ಯುವ ಹೆಣ್ಣು ಮಗಳನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದೇವೆ. 

ವಿದ್ಯಾವಂತ, ಪ್ರಜ್ಞಾವಂತ ಹಾಗೂ ಬುದ್ಧಿವಂತರಾಗಿರುವ ಕ್ಷೇತ್ರದ ಮತದಾರರು ಎರಡು ಬಾರಿ ಸತತವಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಿದಂತೆ ಈ ಬಾರಿಯೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ. ಈ ಹಿಂದೆ ಇದ್ದ ಅಭ್ಯರ್ಥಿ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಏಕೆ ಹೋದರು? ಎಂಬ ಬಗ್ಗೆ ಈಗ ಚರ್ಚೆ ಈಗ ಪ್ರಸ್ತುತವಲ್ಲ. ಮತದಾರ ಕಳೆದ ಚುನಾವಣೆಯಲ್ಲಿ ಪಕ್ಷಕ್ಕೆ ನೀಡಿದ್ದಕ್ಕಿಂತ ಹೆಚ್ಚಿನ ಮತ ನೀಡಿ ನಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಮುನಿರತ್ನಗೆ, ಅಶೋಕ್ ಗೆ, ಬಿಜೆಪಿಯವರಿಗೆ ಯಾರು ಬೇಕಾದರು ಪುಡಿ ಮಾಡೋ ಶಕ್ತಿ ಇದೆ ಬಿಡಿ. ಡಿಜೆ ಹಳ್ಳಿ ಗಲಭೆ ಪ್ರಕರಣ ವಿಚಾರದಲ್ಲಿ ಕಾಂಗ್ರೆಸ್ ಗೆ ಏನಾದ್ರೂ ಕಳಂಕ ತರಬೇಕು ಅಂತ ಪೊಲೀಸರ ದುರ್ಬಳಕೆ ಮಾಡಿಕೊಂಡು ಸುಳ್ಳು ರಿಪೋರ್ಟ್ ರೆಡಿ ಮಾಡಿದ್ದಾರೆ. ಯಾವ ಕಾಂಗ್ರೆಸ್ ಮುಖಂಡರೂ ಇದರಲ್ಲೂ ಭಾಗಿ ಆಗಿಲ್ಲ. ಪೊಲೀಸ್ ಸಂಪೂರ್ಣ ವಿಫಲರಾಗಿದ್ದಾರೆ. ರಾತ್ರೋರಾತ್ರಿ ಪೊಲೀಸರ ಮೇಲೆ ಒತ್ತಡ ತಂದು ಚಾರ್ಜ್ ಶೀಟ್ ಹಾಕಿಸಿದ್ದಾರೆ ಎಂದು ಆರೋಪಿಸಿದರು.

SCROLL FOR NEXT