ರಾಜಕೀಯ

ರಾಜ್ಯಸಭೆ ಕುರಿತ ಸ್ಪೀಕರ್ ಕಾಗೇರಿಯವರ ಹೇಳಿಕೆ ಒಪ್ಪಲಾಗದ್ದು: ಬಿ.ಕೆ. ಹರಿಪ್ರಸಾದ್

Manjula VN

ಬೆಳಗಾವಿ: ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ರಾಜ್ಯಸಭೆ ಕುರಿತು ಮಾಡಿದ ಟೀಕೆ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಸೋಮವಾರ ತೀವ್ರವಾಗಿ ಕಿಡಿಕಾರಿದ್ದಾರೆ. 

ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಸ್ಪೀಕರ್ ಕಾಗೇರಿಯವರು ಇತ್ತೀಚೆಗೆ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ನಡೆದ ಕದ್ದಲ ಕುರಿತಂತೆ ಹೇಳಿಕೆ ನೀಡಿದ್ದಾರೆ. ಕಾಗೇರಿಯವರಿಗೆ ಅವರದ್ದೇ ಆದ ಅಧಿಕಾರ ಹಾಗೂ ಗೌರವ ಇದೆ. ಹೀಗಾಗಿ ಮಾತನಾಡುವಾಗ ಸೂಕ್ತ ರೀತಿಯಲ್ಲಿ ಹಾಗೂ ನಿಷ್ಪಕ್ಷಪಾತವಾಗಿ ಮಾತನಾಡಬೇಕು. ಒಂದು ಸದನದ ಸದಸ್ಯರಾದವರು ಇನ್ನೊಂದು ಸದನದ ಬಗ್ಗೆ ಟೀಕೆ-ಟಿಪ್ಪಣೆ ಮಾಡಿದ ಉದಾಹರಣೆ ದೇಶದ ಇತಿಹಾಸದಲ್ಲಿಯೇ ಇಲ್ಲ. ಆದರೀಗ, ವಿಧಾನಸಭೆಯ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರಾಜ್ಯಸಭೆಯ ಬಗ್ಗೆ ಏಕಪಕ್ಷೀಯವಾಗಿ ಟಿಪ್ಪಣೆ ನೀಡಿ ಸದನದ ಗೌರವಕ್ಕೆ ಧಕ್ಕೆ ತಂದಿದ್ದಾರೆಂದು ಹೇಳಿದ್ದಾರೆ.

ಈ ಹಿಂದೆ ವಿರೋಧ ಪಕ್ಷದಲ್ಲಿದ್ದ ಬಿಜೆಪಿ ಸದನದಲ್ಲಿ ಟೇಬಲ್ ಮೇಲಿದ್ದ ಹಾಳೆ ಮಾತ್ರವಲ್ಲ ಪುಸ್ತಕಗಳನ್ನೇ ಹಾರಾಡಿಸಿರುವ ದಾಖಲೆಗಳನ್ನು ಕಾಗೇರಿ ಅವರು ಮರೆತು ಮಾತನಾಡಿದ್ದಾರೆ. ಅಂದು ವಿರೋಧ ಪಕ್ಷದ ನಾಯಕ ಅರುಣ್‌ ಜೇಟ್ಲಿ ನೇತೃತ್ವದಲ್ಲಿ ಇಡೀ ಚಳಿಗಾಲ ಅಧಿವೇಶನವನ್ನೆ ನಡೆಸಲು ಬಿಟ್ಟಿಲ್ಲದ ದಾಖಲೆ ಇಂದಿಗೂ ಬಿಜೆಪಿ ಪಾರ್ಟಿಗಿದೆ. ಅಂತಹ ವಿಷಯಳನ್ನೂ ಪ್ರಸ್ತಾಪಿಸದೇ ಕೇವಲ ಕಾಂಗ್ರೆಸ್ ನಡೆಗಳನ್ನು ಟೀಕಿಸಿರುವುದು ಕಾಗೇರಿ ಅವರ ಸ್ಥಾನಕ್ಕೆ ಗೌರವ ತರುವುದಿಲ್ಲ ಎಂದು ಕಿಡಿಕಾರಿದ್ದಾರೆ. 

ರಾಷ್ಟ್ರದಲ್ಲಿ ಎದುರಾಗಿರುವ ಪೆಟ್ರೋಲ್ ದರ ಏರಿಕೆ, ಅವೈಜ್ಞಾನಿಕ ಕೃಷಿ ಕಾಯಿದೆ, ಪೆಗಾಸಸ್ ಕದ್ದಾಲಿಕೆ ಪ್ರಕರಣಗಳ ಚರ್ಚೆಗೆ ಕಾಂಗ್ರೆಸ್ ಸೇರಿ ಎಲ್ಲ ವಿರೋಧ ಪಕ್ಷಗಳ ಒತ್ತಾಯವಾಗಿದೆ. ಅಧಿವೇಶನ ನಿಲ್ಲಿಸುವ ವಿಚಾರ ನಮ್ಮಲ್ಲೂ ಇಲ್ಲ. ಆದರೆ, ವಿರೋಧಪಕ್ಷಗಳ ಧ್ವನಿ ಅಡಗಿಸುವ ಕೆಲಸ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

SCROLL FOR NEXT