ರಾಜಕೀಯ

''ಥಿಯೇಟರ್ ಬಂದ್ ಹೈ ತೋ, ಪಿಚ್ಚರ್ ಕೇಸಾ ಚಾಲೂ ಹೋತಾ ಹೈ': ಆನಂದ್ ಸಿಂಗ್ ಕಾಲೆಳೆದ ರಾಜುಗೌಡ

Nagaraja AB

ಬೆಂಗಳೂರು: ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡಿರುವ ಸಚಿವ ಆನಂದ್ ಸಿಂಗ್ ಗೆ ಅವರದ್ದೇ ಪಕ್ಷದ ಇನ್ನೋರ್ವ ಸಚಿವಾಕಾಂಕ್ಷಿ  ರಾಜುಗೌಡ  ಥಿಯೇಟರ್ ಬಂದ್ ಹೈ ತೋ,  ಪಿಚ್ಚರ್ ಕೇಸಾ ಚಾಲೂ ಹೋತಾ ಹೈ ಎಂದು ಕಾಲೆಳೆದಿದ್ದಾರೆ.

ಆಗಸ್ಟ್ 15 ರಂದು ವಿಜಯಪುರದಲ್ಲಿ ಸ್ವಾತಂತ್ರ ದಿನಾಚರಣೆ ವೇಳೆ ಖಾತೆ ಬದಲಾವಣೆಗೆ ಸಿಎಂಗೆ ಪಟ್ಟು ಹಿಡಿದಿರುವ ಸಚಿವ ಆನಂದ್ ಸಿಂಗ್ ಅಂದು ಸಚಿವ ಸ್ಥಾನದ ಹಂಚಿಕೆ ಮುನಿಸು ವಿಚಾರವಾಗಿ ಪಿಚ್ಚರ್ ಅಭೀ ಬಾಕಿ ಹೈ ಎಂದು ಮಾರ್ಮಿಕವಾಗಿ ಹೇಳಿದ್ದರು.

ಸಚಿವ ಆನಂದ್ ಸಿಂಗ್ ಅವರು ನೀಡಿದ್ದ ಮಾರ್ಮಿಕ ಹೇಳಿಕೆಯ ಒಳಾರ್ಥವೇನಿರಬಹುದೆಂದು ವಿಧಾನಸೌಧದ ಕೆಂಗಲ್ ಗೇಟ್ ಬಳಿ ಸಚಿವ ಸ್ಥಾನದ ಆಕಾಂಕ್ಷಿ ರಾಜುಗೌಡ ಅವರನ್ನು ಸುದ್ದಿಗಾರರು ಪ್ರಶ್ನಿಸಿದಾಗ, ಆನಂದ್ ಸಿಂಗ್ ಪಿಚ್ಚರ್ ಅಭೀ ಬಾಕಿ ಹೈ ಎಂದಿದ್ದನ್ನು ನಾನೂ ನೋಡಿದ್ದೇನೆ. ಈ ಬಗ್ಗೆ ದೂರವಾಣಿ ಮೂಲಕ ಅವರನ್ನು ಸಂಪರ್ಕಿಸಿ ಕೋವಿಡ್ ಕಾರಣ ರಾಜ್ಯದಲ್ಲಿ ಸಿನಿಮಾ ಮಂದಿರಗಳೆಲ್ಲ ಬಂದ್ ಆಗಿವೆ. ಹೀಗಿದ್ದಾಗ “ಥಿಯೇಟರ್ ಬಂದ್ ಹೈ ತೋ, ಪಿಚ್ಚರ್ ಕೇಸಾ ಚಾಲೂ ಹೋತಾ ಹೈ” ಎಂದು ಹೇಳಿ ಅವರ ಕಾಲೆಳೆದು ತಮಾಷೆ ಮಾಡಿದ್ದೇನೆ ಎಂದರು.

ಆನಂದ್ ಸಿಂಗ್ ಅವರು ಸಮಾಧಾನ ಆಗಿಯೇ ಇದ್ದಾರೆ. ಅವರಿಗೆ ಖಾತೆ ಹಂಚಿಕೆಯಲ್ಲಿ ಅಸಮಾಧಾನ ಇದ್ದಿದ್ದು ನಿಜವಾದರೂ ನಾವೆಲ್ಲ ಸ್ನೇಹಿತರು ಅವರೊಂದಿಗೆ ಮಾತನಾಡಿ ಸಮಾಧಾನಿಸಿದ್ದೇವೆ. ಸಚಿವ ಸ್ಥಾನದಲ್ಲಿ ಮುಂದುವರೆಯುವಂತೆ ನಾವೆಲ್ಲ ಸಲಹೆ ನೀಡಿದ್ದೇವೆ. ಆನಂದ್ ಸಿಂಗ್ ಖಾತೆ ಅಸಮಾಧಾನ ವಿಚಾರವನ್ನು ದೆಹಲಿಯ ವರಿಷ್ಠರ ಬಳಿಯಲ್ಲಿ ಚರ್ಚಿಸದೇ ಸಿಎಂ ಬೊಮ್ಮಾಯಿ ಅವರ ಬಳಿಯೇ ಚರ್ಚಿಸಿ ಬಗೆಹರಿಸಿಕೊಳ್ಳುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.

ಆನಂದ್ ಸಿಂಗ್ ಈಗ ಸಮಾಧಾನವಾಗಿದ್ದು, ಅವರ ಕ್ಷೇತ್ರದಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ. ಇತ್ತೀಚೆಗೆ ರಾಜ್ಯಕ್ಕೆ ಉಪರಾಷ್ಟ್ರಪತಿಗಳು ಬಂದಿದ್ದಾಗ ಸಹ ಅವರನ್ನು ಭೇಟಿ ಮಾಡಿದ್ದರು. ಇನ್ನು ಕೆಲವು ದಿನಗಳಲ್ಲಿ ಬೆಂಗಳೂರಿಗೆ ಬರಲಿದ್ದಾರೆ. ಸಚಿವರಾದ ಬಳಿಕ ನಾಮಫಲಕ ಅಳವಡಿಸುವುದು ಸರ್ಕಾರದ ಶಿಷ್ಟಾಚಾರ ಅದರಂತೆ ನಾಮಫಲಕ ಅಳವಡಿಸಿದ್ದಾರೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ರಾಜುಗೌಡ ಉತ್ತರಿಸಿದರು.

SCROLL FOR NEXT