ರಾಜಕೀಯ

ಕಾಂಗ್ರೆಸ್-ಜೆಡಿಎಸ್ ಜಗಳ ಬಿಜೆಪಿಗೆ ಲಾಭ: ಮೈಸೂರು ಪಾಲಿಕೆ ಮೇಯರ್ ಸುನಂದಾ ಪಾಲನೇತ್ರಗೆ ಹಾಲಿ-ಮಾಜಿ ಸಿಎಂ ಅಭಿನಂದನೆ

Sumana Upadhyaya

ಮೈಸೂರು: ಇಬ್ಬರ ಜಗಳ ಮೂರನೆಯವರಿಗೆ ಲಾಭ ಎನ್ನುವಂತೆ ಕಾಂಗ್ರೆಸ್-ಜೆಡಿಎಸ್ ನ ಜಗಳದಿಂದ ಬಿಜೆಪಿಗೆ ಲಾಭವಾಗಿ ಮೇಯರ್ ಪಟ್ಟ ಮೊದಲ ಬಾರಿಗೆ ಬಿಜೆಪಿ ಪಾಲಾಗಿದೆ. ಈ ಮೂಲಕ ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನದ ಇತಿಹಾಸದಲ್ಲಿ ಕಮಲ ಅರಳಿದೆ.

ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿದ್ದರೆ ಈ ಬಾರಿ ಮೇಯರ್ ಪಟ್ಟ ಬಿಡಲು ಒಪ್ಪಂದ ಕಾಂಗ್ರೆಸ್ ನಿಂದಾಗಿ ಇಂದು ನಡೆದ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ತಟಸ್ಥ ನಿಲುವು ತಳೆಯಿತು. ಇದರಿಂದ ಬಿಜೆಪಿಯ ಸುನಂದಾ ಫಾಲನೇತ್ರ ಅವರಿಗೆ 26 ಮತಗಳು ಬಂದು ಮೇಯರ್ ಆಗಿ ಆಯ್ಕೆಯಾದರು.

ಕಾಂಗ್ರೆಸ್ ನ ಅಭ್ಯರ್ಥಿ ಶಾಂತಕುಮಾರಿಯವರಿಗೆ 22 ಮತಗಳು ಬಂದವು. ಈ ಮಧ್ಯೆ ಜೆಡಿಎಸ್ ಸದಸ್ಯರು ಕಾಂಗ್ರೆಸ್ ಅಧಿಕಾರ ಲಾಲಸೆಯನ್ನು ಹೊಂದಿದೆ ಎಂದು ಆಕ್ರೋಶ ಹೊರಹಾಕಿ ಛೀಮಾರಿ ಹಾಕಿತು. ಕಾಂಗ್ರೆಸ್ ನಾಯಕರು ವಾಕ್ ಔಟ್ ಮಾಡಿದರು. ಹೀಗಾಗಿ ಇಂದು ಪಾಲಿಕೆ ಹೈಡ್ರಾಮಕ್ಕೆ ಸಾಕ್ಷಿಯಾಯಿತು.

ಮೇಯರ್ ಆಗಿ ಆಯ್ಕೆಯಾದ ಸುನಂದಾ ಫಾಲನೇತ್ರ ಅವರು, ಸಿಕ್ಕಿರುವ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ನಗರದ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲೆಯ ಬಿಜೆಪಿ ಸಂಸದರು, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಯಕರ್ತರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ. 

ನೂತನ ಮೇಯರ್ ಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ. ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನವನ್ನು ಮೊದಲ ಬಾರಿಗೆ ಬಿಜೆಪಿ ಪಡೆದುಕೊಂಡಿದ್ದು, ಇದು ಪಕ್ಷದ ಬೇರುಗಳು ವಿಸ್ತಾರಗೊಳ್ಳುತ್ತಿರುವ ಪ್ರಬಲ ಸಂಕೇತವಾಗಿದೆ. ಮೈಸೂರಿನ ಮೇಯರ್ ಆಗಿ ಆಯ್ಕೆಯಾಗಿರುವ ಪಕ್ಷದ ಅಭ್ಯರ್ಥಿ ಸುನಂದಾ ಪಾಲನೇತ್ರ ಅವರಿಗೆ ಹಾರ್ದಿಕ ಅಭಿನಂದನೆಗಳು ಎಂದು ಹೇಳಿದ್ದಾರೆ. 

SCROLL FOR NEXT