ರಾಜಕೀಯ

ಕ್ಯಾಂಟೀನ್‌ ಹೆಸರು ಬದಲಾಯಿಸಿದರೆ ಗಂಟಲಲ್ಲಿ ಅನ್ನ ಇಳಿಯುವುದಿಲ್ಲವೇ?: ಸಿ.ಟಿ. ರವಿ ಪ್ರಶ್ನೆ

Shilpa D

ಬೆಂಗಳೂರು: ಇಂದಿರಾ ಕ್ಯಾಂಟೀನ್‌ ಹೆಸರು ಬದಲಾಯಿಸುವುದು ಬಿಜೆಪಿಯ ಚುನಾವಣಾ ಪ್ರಣಾಳಿಕೆ. ಅನ್ನಪೂರ್ಣೇಶ್ವರಿ ಎಂದು ನಾಮಕರಣ ಮಾಡಿದರೆ ಅನ್ನ ಗಂಟಲಲ್ಲಿ ಇಳಿಯುವುದಿಲ್ಲವೇ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, ಇಂದಿರಾಗಾಂಧಿ ಭಾವಚಿತ್ರ ಇರುವ ಕಾರಣ ಅದನ್ನು ಬದಲಾಯಿಸಿ ಅನ್ನಪೂರ್ಣೇಶ್ವರಿ ಕ್ಯಾಂಟೀನ್‌ ಎಂದು ನಾಮಕರಣ ಮಾಡುವ ಬಗ್ಗೆ ಮಾತನಾಡಿದ್ದೇನೆ. ಅನ್ನಪೂರ್ಣೇಶ್ವರಿ ಪಾರ್ವತಿಯ ಅಂಶ, ಹೆಸರು ಬದಲಾದರೂ ಬಡವರಿಗೆ ಅನ್ನ ನೀಡುವ ಉದ್ದೇಶ ಮುಂದುವರಿಯಲಿದೆ. ಈ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಒಂದೇ ಕುಟುಂಬ ಸದಸ್ಯರು ನೂರಾರು ಯೋಜನೆಗಳಗೆ ತಮ್ಮದೇ ಹೆಸರು ಇಟ್ಟುಕೊಂಡಿದ್ದಾರೆ. ಜವಹರಲಾಲ್‌ ನೆಹರೂ, ಇಂದಿರಾಗಾಂಧಿ ತಮಗೆ ತಾವೇ ಭಾರತ ರತ್ನ ಕೊಟ್ಟುಕೊಂಡಿದ್ದಾರೆ. ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಭಾರತ ರತ್ನ ನೀಡಲು 1989- 90ರವರೆಗೆ ಕಾಯಬೇಕಾಯಿತು. ನಮ್ಮ ಬೆಂಬಲದೊಂದಿಗೆ ರಚನೆಯಾಗಿದ್ದ ವಿ.ಪಿ.ಸಿಂಗ್‌ ಸರ್ಕಾರದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರ ಪ್ರಸ್ತಾವದ ಮೇರೆಗೆ ಅಂಬೇಡ್ಕರ್‌ ಅವರಿಗೆ ಭಾರತರತ್ನ ನೀಡಲಾಯಿತು ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

SCROLL FOR NEXT