ರಾಜಕೀಯ

ಹೆಚ್.ಡಿ. ಕುಮಾರಸ್ವಾಮಿ ಏಕೆ ಮಂಡ್ಯಕ್ಕೆ ಏನೂ ಮಾಡಿಲ್ಲ, ಅವರನ್ನು ಬಿಟ್ಟರೆ ಬೇರೆಯವರು ಬೆಳೆಯಬಾರದಾ?: ಚಲುವರಾಯಸ್ವಾಮಿ

Sumana Upadhyaya

ಮಂಡ್ಯ: ಮಂಡ್ಯ ಹಾಲು ಮಂಡಳಿಯಲ್ಲಿ ಹಗರಣ ನಡೆದಿರುವ ವಿವಾದಕ್ಕೆ ಸಂಬಂಧಪಟ್ಟಂತೆ ಮಾಡಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನಾಯಕರ ಮಧ್ಯೆ ವಾದ-ವಿವಾದ ಮುಂದುವರಿದಿದೆ.

ನನ್ನ ಆಡಿಯೋ ತಿರುಚಿ ಹೆಚ್ ಡಿ ಕುಮಾರಸ್ವಾಮಿ ಅನುಕಂಪ ಗಿಟ್ಟಿಸಿಕೊಳ್ಳಬಾರದು. ಎರಡು ಬಾರಿ ಸಿಎಂ ಆದವರು ನನ್ನ ಆಡಿಯೋ ವಿಚಾರದಲ್ಲಿ ಅನುಕಂಪ ಗಿಟ್ಟಿಸಿಕೊಳ್ಳುವುದು ಸರಿಯಲ್ಲ. ದೇವೆಗೌಡರಿಗೆ ನಾನು ಕುಮಾರಸ್ವಾಮಿಗಿಂತ ಹೆಚ್ಚಿನ ಗೌರವ ಕೊಡ್ತೀನಿ. ನನ್ನ ಜೊತೆ ಚರ್ಚೆ ಮಾಡುವುದಾದರೆ ಬರಲಿ. ಯಾವ ಯಾವ ಸಮಯದಲ್ಲಿ ದೇವೇಗೌಡರ ಬಗ್ಗೆ ಏನೇನ್ ಮಾತನಾಡಿದ್ದಾರೆ ಹೇಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮೇಲೆ ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಅವರು ಸಾಕಷ್ಟು ರಾಜಕಾರಣ ಮಾಡಿದ್ದಾರೆ, ಸಾಕು, ಹಾಗಾದರೆ ಅವರ ಕುಟುಂಬ ಬಿಟ್ಟು ಬೇರೆ ಯಾರೂ ಇಲ್ಲಿ ರಾಜಕಾರಣದಲ್ಲಿ ಬೆಳೆಯಲೇ ಬಾರದೇ, ನಿಮ್ಮ ಸಮಾಜದವರು ಬೇರೆಯವರು ಬೆಳೆಯಲೇ ಬಾರದೆ ಎಂದು ಕುಮಾರಸ್ವಾಮಿಯವರನ್ನು ಪ್ರಶ್ನಿಸಿದರು.

ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಬಳಿಕ ರಾಮನಗರ, ಚನ್ನಪಟ್ಟಣ ಅಭಿವೃದ್ದಿಗೆ ಕುಮಾರಸ್ವಾಮಿಯವರು ಹಣ ಬಿಡುಗಡೆ ಮಾಡಿಸಿದ್ದಾರೆ. ಮಂಡ್ಯ ಜಿಲ್ಲೆಗೆ ಏಕೆ ಬಿಡುಗಡೆ ಮಾಡಿಸಿಲ್ಲ, ಮಂಡ್ಯ ಜಿಲ್ಲೆಗೆ ಅವರೇನು ಕೊಡುಗೆ ಕೊಟ್ಟಿದ್ದಾರೆ, ಮಂಡ್ಯ ಜಿಲ್ಲೆಗೆ ಹಣ ಬಿಡುಗಡೆ ಮಾಡಿಸುವ ಬಗ್ಗೆ ಅವರೇಕೆ ಮುಖ್ಯಮಂತ್ರಿಗಳನ್ನು ಪ್ರಶ್ನಿಸುತ್ತಿಲ್ಲ ಎಂದು ಕೇಳಿದರು.

ಇಲ್ಲಿ ಜನ್ಮಭೂಮಿ ಅಲ್ಲ, ರಾಜಕೀಯ ಮಾಡೋದಿಕ್ಕೆ ಮಾತ್ರ ನಿಮಗೆ ಮಂಡ್ಯ ಬೇಕಾಗಿದೆಯಷ್ಟೆ ಎಂದು ಕುಮಾರಸ್ವಾಮಿ ವಿರುದ್ಧ ವ್ಯಂಗ್ಯವಾಗಿ ಚಲುವರಾಯಸ್ವಾಮಿ ನುಡಿದಿದ್ದಾರೆ.

SCROLL FOR NEXT