ರಾಜಕೀಯ

ಬಿಜೆಪಿ ಪೇಯ್ಡ್ ಪ್ರಚಾರ ನಾಶಪಡಿಸುತ್ತೇವೆ: ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ

Manjula VN

ಮಂಗಳೂರು: ಬಿಜೆಪಿಯ ಪೇಯ್ಡ್ ಪ್ರಚಾರ ನಾಶಪಡಿಸುತ್ತೇವೆಂದು ರಾಜ್ಯ ಯುವ ಕಾಂಗ್ರೆಸ್'ನ ನೂತನ ರಾಜ್ಯಾಧ್ಯಕ್ಷ ರಕ್ಷಾ ರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ. 

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಯುವಕರು ಬಿಜೆಪಿಯತ್ತ ಒಲವು ತೋರಿಸಲು ಬಿಜೆಪಿಯ ಸೋಶಿಯಲ್ ಮೀಡಿಯಾ ಹೈಪ್ ಕಾರಣ. ಸಾಮಾಜಿಕ ಜಾಲತಾಣಕ್ಕಾಗಿಯೇ ಬಿಜೆಪಿಯವರು ರೂ.50-60 ಕೋಟಿ ಖರ್ಚು ಮಾಡುತ್ತಿದ್ದಾರೆ. ಅವರದ್ದು ಪೇಯ್ಡ್ ಸೋಶಿಯಲ್ ಮೀಡಿಯಾ. ಅದು ಯುವ ಸಮೂಹದ ಮೇಲೆ ಅನಿರೀಕ್ಷಿತ ಫಲಿತಾಂಶವನ್ನು ನೀಡಿದೆ ಎಂದು ಹೇಳಿದ್ದಾರೆ. 

ಇದೀಗ ಬಿಜೆಪಿಯ ನಿಜವಾದ ಬಣ್ಣವನ್ನು ಯುವಕರು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯುವ ಕಾಂಗ್ರೆಸ್'ಗೆ ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಲು ಎಲ್ಲಾ ಕ್ಷೇತ್ರಗಳಲ್ಲಿ ಅಭಿಯಾನ ಆರಂಭಿಸಲಿದ್ದೇವೆಂದು ತಿಳಿಸಿದ್ದಾರೆ. 

ಇದೇ ವೇಳೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ವೇಳೆ ನಡೆದ ಮಹಮ್ಮದ್ ಹ್ಯಾರಿಸ್ ನಲಪಾಡ್ ಜೊತೆಗಿನ ಹಗ್ಗಜಗ್ಗಾಟ ಕುರಿತು ಮಾತನಾಡಿದ ಅವರು, ಇದೊಂದು ಆಂತರಿಕ ವಿಚಾರವಾಗಿದ್ದು, ಇದೀಗ ಎಲ್ಲಾ ಮನಸ್ತಾಪಗಳೂ ಬಗೆಹರಿದಿವೆ. ನನ್ನ ಹಾಗೂ ನಲಪಾಡ್ ನಡುವೆ ಬಣಗಳಿಲ್ಲ. ಹಿರಿಯ ನಾಯಕರು ಒಂದು ತಿಂಗಳ ಮಟ್ಟಿಗೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕೊಟ್ಟರೂ ನಿಭಾಯಿಸುತ್ತೇನೆ. ಅದೇ ರೀತಿ 3 ತಿಂಗಳು, 6 ತಿಂಗಳು, 2 ವರ್ಷ ನೀಡಿದರು ಸೇವೆಗೆ ಸಿದ್ಧ ಎಂದಿದ್ದಾರೆ. 

ಬಳಿಕ ಮುಂದಿನ ಸಿಎಂ ಡಿಕೆ.ಶಿವಕುಮಾರ್ ಎಂಬ ನಲಪಾಡ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಡಿಕೆ.ಶಿವಕುಮಾರ್ ಮುಂದಿನ ಸಿಎಂ ಎಂದು ಬಾಯಿ ತಪ್ಪಿ ಹೇಳಿರಬೇಕು. ಯುವ ಕಾಂಗ್ರೆಸ್'ನ ಕೆಲಸ ಅದಲ್ಲ. ಪಕ್ಷವನ್ನು ಸಂಘಟಿಸುವಲ್ಲಿ ಕಾಂಗ್ರೆಸ್ ಮುಖಂಡರಿಗೆ ಮೂಲ ಬೆಂಬಲವಾಗಿ ಕೆಲಸ ಮಾಡುವುದು ಯುವ ಕಾಂಗ್ರೆಸ್'ನ ಮುಖ್ಯ ಉದ್ದೇಶವಾಗಿದೆ. ಸಿಎಂ ಯಾರು ಎಂದು ನಾವು ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

SCROLL FOR NEXT