ರಾಜಕೀಯ

'ಗಂಗಾನದಿಯಲ್ಲಿ ತೇಲುತ್ತಿರುವ ಶವಗಳಿಗೆ ಯಾರು ಜವಾಬ್ದಾರಿ: ಕೋವಿಡ್ ನಿರ್ವಹಿಸಲು ಸರ್ಕಾರ ಸಂಪೂರ್ಣ ವಿಫಲ'

Shilpa D

ಬೆಂಗಳೂರು: ಕೊರೋನಾ ಪರಿಸ್ಥಿತಿಯನ್ನು ವ್ಯವಸ್ಥಿತವಾಗಿ ನಿರ್ವಹಿಸದ ಸರ್ಕಾರ ಮಾಧ್ಯಮಗಳ ಗಮನವನ್ನು ಬೇರೆಡೆ ವರ್ಗಾಯಿಸಲು ಟೂಲ್ ಕಿಟ್ ಬಗ್ಗೆ ಅಪ ಪ್ರಚಾರಕ್ಕೆ ಮುಂದಾಗಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ.

ಕೊರೋನಾ ಎರಡನೇ ಅಲೆ ನಿರ್ವಹಿಸಲು ಜಗತ್ತಿನ ಎಲ್ಲಾ ರಾಷ್ಟ್ರಗಳು ಸಿದ್ಧತೆ ಮಾಡಿಕೊಂಡಿದ್ದವು, ಆದರೆ ಭಾರತ ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ.

ಮೋದಿ ಅವರು ದೀಪ ಬೆಳಗಲು ಮತ್ತು ಜಾಗಟೆ ಬಾರಿಸಲು ಹೇಳಿದ್ದರು, ಆದರೆ ಅನೇಕ ಮನೆಯ ದೀಪಗಳೇ ಆರಿ ಹೋಗಿವೆ, ಇದಕ್ಕೆ ಮೋದಿ ಸರ್ಕಾರವೇ ನೇರ ಹೊಣೆ ಎಂದು ಸುರೇಶ್ ಆರೋಪಿಸಿದ್ದಾರೆ.

ವಿದೇಶಿ ಮಾಧ್ಯಮಗಳು ಕೂಡ ಭಾರತ ಸರ್ಕಾರವನ್ನು ಟೀಕಿಸಿವೆ ಎಂದು ಅವರು ಹೇಳಿದರು. ಯಡಿಯೂರಪ್ಪ ಅವರು ಶವಸಂಸ್ಕಾರಕ್ಕೆ ಕೇವಲ 50,000 ರೂ. ನೀಡಿದ್ದಾರೆ. ಸರ್ಕಾರ ನೀಡುವ 2,000-3,000 ರೂ.ಗಳ ಮೊತ್ತವು ಅಲ್ಪವಾಗಿದ್ದು ಅದು ಸಾರಿಗೆ ವೆಚ್ಚವನ್ನು ಸಹ ಭರಿಸಲು ಸಾಕಾಗುವುದಿಲ್ಲ ಎಂದು ದೂರಿದ್ದಾರೆ. ಹಾಸಿಗೆಗಳು ಮತ್ತು ಆಮ್ಲಜನಕವನ್ನು
ಪಡೆಯಲು ಹೋರಾಟ ನಡೆಸಬೇಕಾಗಿದೆ ಎಂದು ಸುರೇಶ್ ಹೇಳಿದ್ದಾರೆ.  

ಲಾನ್ಸೆಟ್‌ನಂತಹ ಹೆಸರಾಂತ ವೈದ್ಯಕೀಯ ನಿಯತಕಾಲಿಕಗಳು ಕೂಡ ಭಾರತದ ಕೋವಿಡ್ ನಿರ್ವಹಣೆಗೆ ಮೋದಿ ಸರ್ಕಾರವನ್ನು ಟೀಕಿಸಿವೆ ಎಂದು ಕಾಂಗ್ರೆಸ್ ಮುಖಂಡ ಬ್ರಿಜೇಶ್ ಕಾಳಪ್ಪ ಹೇಳಿದರು. ಕಾಂಗ್ರೆಸ್ ಅನ್ನು 'ಟೂಲ್ಕಿಟ್' ಎಂದು ಬಿಜೆಪಿ ದೂಷಿಸುತ್ತಿದೆ. ಬಿಜೆಪಿ ನಾಯಕರಾದ ಜೆ.ಪಿ.ನಡ್ಡಾ, ಸಂಬಿತ್ ಪತ್ರ, ಬಿ.ಎಲ್.ಸಂತೋಷ್, ತೇಜಸ್ವಿ ಸೂರ್ಯ ಮತ್ತು ಇತರರು ಇದಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಫೋರ್ಜರಿ ಮಾಡಿದ್ದಕ್ಕಾಗಿ ಇವರಿಗೆ 7 ವರ್ಷ ಶಿಕ್ಷೆ ವಿಧಿಸಬೇಕಾಗುವುದು ಎಂದಿದ್ದಾರೆ.

ಗುಜರಾತ್, ಉತ್ತರ ಪ್ರದೇಶ, ಬಿಹಾರ ಮತ್ತು ಇತರ ರಾಜ್ಯಗಳಂತೆ ಸರ್ಕಾರವು ಸಾವಿನ ಬಗ್ಗೆ ಮಾಹಿತಿ ನೀಡುತ್ತಿದೆ ಎಂದು ರಾಜ್ಯಸಭಾ ಸಂಸದ ಸೈಯದ್ ನಾಸಿರ್ ಹುಸೇನ್ ಹೇಳಿದ್ದಾರೆ. "ಗಂಗಾ ನದಿಯಲ್ಲಿ ತೇಲುತ್ತಿರುವ ಶರೀರಗಳ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಾರೆ?" ಎಂದು ಹುಸೇನ್ ಪ್ರಶ್ನಿಸಿದ್ದಾರೆ.

ಈ ಮೊದಲು ಸರ್ಕಾರವು ಲಸಿಕೆಗಳನ್ನು ಆಮದು ಮಾಡಿಕೊಳ್ಳಲು ಏಕೆ ಸಾಧ್ಯವಾಗಲಿಲ್ಲ ಮತ್ತು ಅವುಗಳನ್ನು ಜನರಿಗೆ ಲಭ್ಯವಾಗುವಂತೆ ಏಕೆ ಮಾಡಲಿಲ್ಲ ಎಂದು ಕಾಂಗ್ರೆಸ್ ಸಂಸದರಾದ ಜಿಸಿ ಚಂದ್ರಶೇಖರ್ ಮತ್ತು  ಎಲ್.ಹನುಮಂತಯ್ಯ ಪ್ರಶ್ನಿಸಿದ್ದಾರೆ.

SCROLL FOR NEXT