ರಾಜಕೀಯ

ಕುತೂಹಲ ಮೂಡಿಸಿದ ಸಿಎಂ ಬೊಮ್ಮಾಯಿ- ಆರ್'ಎಸ್ಎಸ್ ನಾಯಕರ ಭೇಟಿ

Manjula VN

ಬೆಂಗಳೂರು; ಬಿಜೆಪಿ ಕಾರ್ಯಕಾರಿಣಿ ಸಭೆ ಆರಂಭಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರ್'ಎಸ್ಎಸ್ ನಾಯಕರ ನಡುವಿನ ಭೇಟಿ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಮುಖ್ಯಮಂತ್ರಿಯ ಸರ್ಕಾರಿ ನಿವಾಸಕ್ಕೆ ನಿನ್ನೆ ಬೆಳಿಗ್ಗೆ ಆರೆಸ್ಸೆಸ್‌ ಸಹ ಸರಕಾರ್ಯವಾಹ ಮುಕುಂದ ಸಿ.ಆರ್‌ ಅವರು ಭೇಟಿ ಮಾಡಿದ್ದು, ಕೆಲಕಾಲ ಮಾತುಕತೆ ನಡೆಸಿದರು. ಇಬ್ಬರ ಈ ಭೇಟಿ ಇದೀಗ ಬಿಜೆಪಿ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಧಾರವಾಡದಲ್ಲಿ ಇತ್ತೀಚೆಗೆ ಆರೆಸ್ಸೆಸ್ಸ್ ರಾಷ್ಟ್ರೀಯ ಕಾರ್ಯಕಾರಿ ಬೈಠಕ್‌ನಲ್ಲಿ ನಡೆದಿತ್ತು. ಬಳಿಕ, ಮುಕುಂದ ಅವರು ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದಾರೆ.

ಬಿಟ್‌ ಕಾಯಿನ್‌ ಹಗರಣ, ಈ ಹಗರಣದಲ್ಲಿ ಪ್ರಭಾವಿಗಳು, ಪ್ರಭಾವಿಗಳ ಮಕ್ಕಳು ಭಾಗಿಯಾಗಿದ್ದಾರೆಂಬ ಕಾಂಗ್ರೆಸ್‌ ಆರೋಪ, ಪ್ರಕರಣದ ಕುರಿತು ಜಾರಿ ನಿರ್ದೇಶನಾಲಯಕ್ಕೆ ರಾಜ್ಯ ಸರ್ಕಾರ ಪತ್ರ ಬರೆದಿದೆ ಎಂಬ ಮುಖ್ಯಮಂತ್ರಿ ಹೇಳಿಕೆ ನಡುವೆಯೇ ನಡೆದ ಭೇಟಿ ರಾಜಕೀಯವಾಗಿಯೂ ಕುತೂಹಲ ಮೂಡಿಸಿದೆ.

ಉಪಹಾರ ಸೇವನೆಯ ಜೊತೆಗೆ ಇಬ್ಬರೂ 20 ನಿಮಿಷಕ್ಕೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ಉಪ ಚುನಾವಣೆಯ ಫಲಿತಾಂಶವೂ ಸೇರಿದಂತೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಇಬ್ಬರೂ ಚರ್ಚೆ ನಡೆಸಿದರು ಎಂದು ಮುಖ್ಯಮಂತ್ರಿಯ ಆಪ್ತ ಮೂಲಗಳು ಹೇಳಿವೆ.

SCROLL FOR NEXT