ರಾಜಕೀಯ

ಜೆಡಿಎಸ್ ಶಾಸಕರ ಬ್ರೈನ್ ವಾಶ್ ಮಾಡಲು ಸಿದ್ದರಾಮಯ್ಯ ಪ್ರಯತ್ನ: ಹೆಚ್.ಡಿ. ಕುಮಾರಸ್ವಾಮಿ

Manjula VN

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ನಾಯಕರನ್ನು ಸಾಕಷ್ಟು ಬಾರಿ ಸಂಪರ್ಕಿಸಿದ್ದು, ಅವರ ಬ್ರೈನ್ ವಾಶ್ ಮಾಡಿ ಹೈಜಾಕ್ ಮಾಡಲು ಪ್ರಯತ್ನಿಸುತ್ತಿದ್ದಾರೆಂದು ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಗುರುವಾರ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ನಿನ್ನೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಹೆಸರೇಳದೆಯೇ ಅವರ ವಿರುದ್ಧ ಗುಡುಗಿದರು.

ಜೆಡಿಎಸ್‌ಗೆ ಭವಿಷ್ಯ ಇಲ್ಲ ಎಂದು ಹೇಳುತ್ತಿದ್ದಾರೆ. ಸಿಎಂ ಆಗಿದ್ದವರು, ಸಿಎಂ ಆಗಬೇಕೆನ್ನುವವರು ಅವರು. ಜೆಡಿಎಸ್ ಶಾಸಕರಿಗೆ ಬ್ರೈನ್ ವಾಶ್ ಮಾಡುತ್ತಿದ್ದಾರೆ. ಅವರು ದಯನೇಸಿ ಪರಿಸ್ಥಿತಿ ತಲುಪಿದ್ದಾರೆ, ಜೆಡಿಎಸ್ ಮುಗಿಸಬೇಕೆನ್ನುವ ಹುನ್ನಾರ ಅವರದ್ದು ಎಂದರು.

ನಮ್ಮ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುವುದು ಬೇಡ. ಇಲ್ಲಿಂದ ಎಲ್ಲ ಶಕ್ತಿ ಪಡೆದುಕೊಂಡು ನಮ್ಮ ಬಗ್ಗೆ ಮಾತನಾಡಬೇಡಿ. ಯಾರು ಪಕ್ಷ ಬಿಡಲು ಒಂದು ಹೆಜ್ಜೆ ಇಟ್ಟಿದ್ದಾರೆ. ಯಾರು ಎರಡೂ ಕಾಲು ಆಚೆ ಇಟ್ಟಿದ್ದಾರೆ ಗೊತ್ತಿದೆ. ನಿಮಗೆ ಎಲ್ಲಿ ಭವಿಷ್ಯ ಇದೆ ಎಂದು ಅನ್ನಿಸುವುದೋ ಅಲ್ಲಿಗೆ ಹೋಗಿ. ಪಕ್ಷ ಬಿಟ್ಟು ಹೋಗುತ್ತಾರೆ ಎಂದು ಅಳುತ್ತ ಕೂರಲು ಆಗಲ್ಲ. ಮನವೊಲಿಸಲು ಸಾಧ್ಯವಿದ್ದರೆ ಮಾಡುತ್ತೇವೆ ಎಂದು ತಿಳಿಸಿದರು.

2004ರ ಚುನಾವಣೆಯಲ್ಲಿ ಜೆಡಿಎಸ್ 30-40 ಸ್ಥಾನಗಳಲ್ಲಿ ಕಡಿಮೆ ಅಂತರದಲ್ಲಿ ಸೋಲುಕಂಡಿದೆ, 2023ರಲ್ಲಿ ಈ ಸ್ಥಾನಗಳಲ್ಲಿ ಗೆಲುವು ಸಾಧಿಸಲು ನಮ್ಮ ಪಕ್ಷ ಪ್ರಯತ್ನಿಸಲಿದೆ ಎಂದರು.

"ನಾನು ಅಭ್ಯರ್ಥಿಗಳ ಪಟ್ಟಿಯನ್ನು ಮೊದಲೇ ಪ್ರಕಟಿಸುತ್ತೇನೆ, ಬಹುಶಃ ಜನವರಿ 2022 ರಲ್ಲಿ ಪ್ರಕಟಿಸಲಾಗುತ್ತದೆ, ಇದರಿಂದ ಹೊಸಬರಿಗೆ ಚುನಾವಣೆಗೆ ಸಿದ್ಧತೆ ನಡೆಸಲು ಸಮಯ ಸಿಕ್ಕಂತಾಗುತ್ತದೆ ಎಂದು ಹೇಳಿದರು

SCROLL FOR NEXT