ಹಾನಗಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ವಿ ಮನೆಯವರಿಗೆ ಕಾಂಗ್ರೆಸ್ ಕಾರ್ಯಕರ್ತರ ಬೆಂಬಲ 
ರಾಜಕೀಯ

ಬಿಜೆಪಿ ಅಭ್ಯರ್ಥಿಗಳ ಘೋಷಣೆ: ರಂಗೇರಿದ ಹಾನಗಲ್, ಸಿಂದಗಿ ಉಪ ಚುನಾವಣೆ ಕಾವು

ಅಕ್ಟೋಬರ್ 30ರಂದು ನಡೆಯಲಿರುವ ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳ ಉಪ ಚುನಾವಣೆಗೆ ಬಿಜೆಪಿಯ ಅಭ್ಯರ್ಥಿಗಳ ಘೋಷಣೆಯಾಗಿದೆ. ಮಾಜಿ ಶಾಸಕ ರಮೇಶ್ ಬೂಸನೂರ್ ಮತ್ತು ಶಿವರಾಜ್ ಸಜ್ಜನರ್ ಅಭ್ಯರ್ಥಿಗಳೆಂದು ಬಿಜೆಪಿ ಘೋಷಣೆ ಮಾಡಿದ್ದು ಇಬ್ಬರೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಆಪ್ತರು.

ಬೆಂಗಳೂರು: ಅಕ್ಟೋಬರ್ 30ರಂದು ನಡೆಯಲಿರುವ ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳ ಉಪ ಚುನಾವಣೆಗೆ ಬಿಜೆಪಿಯ ಅಭ್ಯರ್ಥಿಗಳ ಘೋಷಣೆಯಾಗಿದೆ. ಮಾಜಿ ಶಾಸಕ ರಮೇಶ್ ಬೂಸನೂರ್ ಮತ್ತು ಶಿವರಾಜ್ ಸಜ್ಜನರ್ ಅಭ್ಯರ್ಥಿಗಳೆಂದು ಬಿಜೆಪಿ ಘೋಷಣೆ ಮಾಡಿದ್ದು ಇಬ್ಬರೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಆಪ್ತರು.

ಉಪ ಚುನಾವಣೆಗೆ ದಿನಾಂಕ ಘೋಷಣೆಯಾದ ಕೂಡಲೇ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮ್ಮದೇ ರೀತಿಯಲ್ಲಿ ತಮ್ಮ ಅಭ್ಯರ್ಥಿಗಳು ಗೆಲ್ಲಲು ಕಾರ್ಯತಂತ್ರ ರೂಪಿಸುತ್ತಿವೆ.

ಈ ವಾರದ ಆರಂಭದಲ್ಲಿ ಕಾಂಗ್ರೆಸ್ ಅಶೋಕ್ ಮನಗುಳಿಯವರನ್ನು ಸಿಂದಗಿ ಅಭ್ಯರ್ಥಿಯೆಂದು ಮತ್ತು ಶ್ರೀನಿವಾಸ್ ವಿ ಮನೆಯವರನ್ನು ಹಾನಗಲ್ ಕ್ಷೇತ್ರದ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಿದೆ. ಜೆಡಿಎಸ್ ನಜಿಯಾ ಶಕೀಲ್ ಅಹ್ಮದ್ ಅಂಗಡಿಯನ್ನು ಸಿಂದಗಿ ಕ್ಷೇತ್ರದ ಅಭ್ಯರ್ಥಿಯೆಂದು ಮತ್ತು ಹಾನಗಲ್ ಕ್ಷೇತ್ರದ ಅಭ್ಯರ್ಥಿಯಾಗಿ ನಿಯಾಜ್ ಶೈಖ್ ಅವರನ್ನು ಘೋಷಿಸಿದೆ. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರ ಸಮ್ಮುಖದಲ್ಲಿ ನಜಿಯಾ ಅವರು ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಜೆಡಿಎಸ್ ಶಾಸಕ ಎಂ ಸಿ ಮನಗುಳಿ ಮತ್ತು ಬಿಜೆಪಿ ಶಾಸಕ ಸಿಎಂ ಉದಾಸಿಯವರ ಮರಣ ನಂತರ ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳಿಗೆ ಉಪ ಚುನಾವಣೆ ಅನಿವಾರ್ಯವಾಗಿದೆ.

ಸಿಎಂ ಆಗಿ ಅಧಿಕಾರ ವಹಿಸಿಕೊಂಡ ನಂತರ ಚುನಾವಣೆ ಇದು ಮೊದಲು ನಡೆಯುತ್ತಿರುವುದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಇದು ಪ್ರತಿಷ್ಠೆಯ ಕಣ. ಹಾನಗಲ್ ಅವರ ತವರು ಜಿಲ್ಲೆ ಹಾವೇರಿಯ ಕ್ಷೇತ್ರ. ಹಾಗಾಗಿ ಅಲ್ಲಿ ಗೆಲುವು ಬೊಮ್ಮಾಯಿಯವರಿಗೆ ಅನಿವಾರ್ಯ. ಸಜ್ಜನರ್ ಹಾವೇರಿಯ ಮಾಜಿ ಶಾಸಕ ಮತ್ತು ಲಿಂಗಾಯತ ಮುಖಂಡ ಯಡಿಯೂರಪ್ಪನವರಿಗೆ ಆಪ್ತ. 2013ರಲ್ಲಿ ಯಡಿಯೂರಪ್ಪನವರು ಬಿಜೆಪಿ ತೊರೆದು ತಮ್ಮ ಕರ್ನಾಟಕ ಜನತಾ ಪಕ್ಷ ಕಟ್ಟಿದ್ದಾಗ ಸಜ್ಜನರ್ ಕೂಡ ಯಡಿಯೂರಪ್ಪನವರ ಹೊಸ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. 2013ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು.

ಹಲವು ಸಮಯಗಳಿಂದ ಸಜ್ಜನರ್ ಹೆಸರು ಬರುತ್ತಿತ್ತಾದರೂ ಸಿಎಂ ಬೊಮ್ಮಾಯಿ ಸೇರಿದಂತೆ ಹಲವರು ಸಂಸದ ಶಿವಕುಮಾರ್ ಉದಾಸಿಯವರ ಪತ್ನಿ ರೇವತಿ ಉದಾಸಿಯವರನ್ನು ಕಣಕ್ಕಿಳಿಸುವ ಉತ್ಸಾಹ ಹೊಂದಿದ್ದರು. ಬೊಮ್ಮಾಯಿಯವರು ಸಿಎಂ ಉದಾಸಿಯವರಿಗೆ ಅತ್ಯಾಪ್ತರಾಗಿದ್ದರು. ಅಲ್ಲದೆ ತಮ್ಮ ಮಾರ್ಗದರ್ಶಕ ಉದಾಸಿ ಎಂದು ಬೊಮ್ಮಾಯಿಯವರು ವಿಶ್ವಾಸ ಇರಿಸಿಕೊಂಡಿದ್ದರು.

ಬಿಜೆಪಿಯ ಕೆಲವು ನಾಯಕರು ಶಿವಕುಮಾರ್ ಉದಾಸಿಯವರ ಪತ್ನಿಗೆ ಟಿಕೆಟ್ ಕೊಡಿಸುವ ಉತ್ಸುಕತೆಯಲ್ಲಿದ್ದರು. ಆದರೆ ಪಕ್ಷದ ಹೈಕಮಾಂಡ್ ಒಂದೇ ಕುಟುಂಬದ ಸದಸ್ಯರಿಗೆ ಟಿಕೆಟ್ ಕೊಡುವ ಮನಸ್ಸು ತೋರಿಸಲಿಲ್ಲ. ಅಲ್ಲದೆ ಗದಗ ಲೋಕಸಭಾ ಸ್ಥಾನಕ್ಕೆ ಉಪ ಚುನಾವಣೆಯನ್ನು ಕೂಡ ಬಿಜೆಪಿ ಹೈಕಮಾಂಡ್ ಬಯಸಿಲ್ಲ ಎಂದು ಪಕ್ಷದ ಹಿರಿಯ ಸದಸ್ಯರೊಬ್ಬರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ಇನ್ನು ಸಿಂದಗಿ ಕ್ಷೇತ್ರದಲ್ಲಿ ಪಕ್ಷ ಮಾಜಿ ಶಾಸಕ ರಮೇಶ್ ಬೂಸನೂರ್ ಅವರನ್ನು ಕಣಕ್ಕಿಳಿಸಿದೆ. ಅವರು ಎಂ ಸಿ ಮನಗೂಳಿ ವಿರುದ್ಧ 2018ರಲ್ಲಿ ಸೋತಿದ್ದರು. ಬೂಸನೂರ್ ಅವರ ಹೆಸರು ಘೋಷಣೆಯಾಗುವ ಮೊದಲು ಅವರು ಯಡಿಯೂರಪ್ಪನವರನ್ನು ಹಲವು ಬಾರಿ ಭೇಟಿ ಮಾಡಿ ಬಂದಿದ್ದರು. ಸ್ವತಃ ಲಿಂಗಾಯತರಾಗಿರುವ ಬೂಸನೂರ್ ತಮ್ಮ ಪರವಾಗಿ ಮೂರು ದಿನ ಕ್ಷೇತ್ರದಲ್ಲಿ ಪ್ರಚಾರ ಮಾಡುವಂತೆ ಯಡಿಯೂರಪ್ಪನವರನ್ನು ಕೇಳಿಕೊಂಡಿದ್ದಾರೆ.

ಜೆಡಿಎಸ್ ಅಭ್ಯರ್ಥಿ ನಜಿಯಾ ಅಂಗಡಿ ನಾಮಪತ್ರ ಸಲ್ಲಿಕೆ ವೇಳೆ ವೈಯಕ್ತಿಕ ಆಸ್ತಿ 49 ಲಕ್ಷದ 85 ಸಾವಿರ ಎಂದು ಘೋಷಿಸಿಕೊಂಡಿದ್ದಾರೆ. ಅದರಲ್ಲಿ 24 ಲಕ್ಷ ಚಿನ್ನಾಭರಣ, 4.27 ಲಕ್ಷ ಬ್ಯಾಂಕ್ ಠೇವಣಿ ಮತ್ತು 2 ಲಕ್ಷ ನಗದು ಒಳಗೊಂಡಿದೆ. ಅಲ್ಲದೆ ಒಂದು ಎಕರೆ ಭೂಮಿ ಮತ್ತು 13 ಲಕ್ಷ ಬೆಲೆಯ ಕಾರು ಹೊಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT