ರಾಜಕೀಯ

 'ಎರಡು ಕ್ಷೇತ್ರಗಳಲ್ಲಿ ಗೆಲುವು ನಮ್ಮದೇ: ಮತ ಎಣಿಕೆ ಕೆಂದ್ರದಲ್ಲಿ ಕಾಂಗ್ರೆಸ್- ಜೆಡಿಎಸ್‌ ಬಹಳ ಹೊತ್ತು ಇರುವುದಿಲ್ಲ'

Shilpa D

ವಿಜಯಪುರ:  ಅಕ್ಟೋಬರ್ 30 ರಂದು ನಡೆಯುವ ಸಿಂದಗಿ, ಹಾನಗಲ್ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸಲಿದೆ ಎಂದು ಬಿಜೆಪಿ ಮುಖಂಡ ಬಿವೈ ವಿಜಯೇಂದ್ರ ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಲಮೇಲದಲ್ಲಿ ಮಾತನಾಡಿದ ಅವರು, ಕೆಂದ್ರ ಮತ್ತು ರಾಜ್ಯದಲ್ಲಿ ಎರಡೂ ಕಡೆಗಳಲ್ಲಿ ಬಿಜೆಪಿ ಸರಕಾರ ಇರುವುದರಿಂದ ಸಿಂದಗಿ ಮತಕ್ಷೇತ್ರ ಅಭಿವೃದ್ಧಿ ಆಗುತ್ತದೆ. ಈ ಹಿನ್ನೆಲೆ ಸಿಂದಗಿ ಮತಕ್ಷೇತ್ರದ ಜನತೆ ಈ ಬಾರಿ ಬಿಜೆಪಿಗೆ ಮತ ಹಾಕಲು ನಿರ್ಧರಿಸಿದ್ದಾರೆ ಎಂದರು. ಸಿಂದಗಿಯ ಮತದಾರರು ಈ ಬಾರಿ ಬಿಜೆಪಿ ಅಭ್ಯರ್ಥಿ ರಮೇಶ್‌ ಭೂಸನೂರು ಅವರನ್ನು ಗೆಲ್ಲಿಸಲಿದ್ದಾರೆ ಎಂದು ಬಿವೈ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮತ್ತು ಜೆಡಿಎಸ್‌ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿವೆ. ನವೆಂಬರ್ 2 ರಂದು ಮತ ಎಣಿಕೆ ಕೆಂದ್ರದಲ್ಲಿ ಬಹಳ ಹೊತ್ತು ಅವರು ಇರುವುದಿಲ್ಲ. ಸಿಂದಗಿಯಲ್ಲಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಸದೃಢವಾಗಿದೆ. ಇಲ್ಲಿ ಗೆಲ್ಲಲು ಸಮಸ್ಯೆ ಇಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಆರ್‌ಎಸ್‌ಎಸ್ ಬಗೆಗಿನ ಬೇಜವಾಬ್ದಾರಿ ಹೇಳಿಕೆಗಳಿಗೆ ಉತ್ತರ ನೀಡಲು ತಾವು ಇಷ್ಟಪಡುವುದಿಲ್ಲ. ಬೈ ಎಲೆಕ್ಷನ್ ಬಂದಿದೆ, ಅಭಿವೃದ್ಧಿ ಕೆಲಸಗಳನ್ನು ಮಾಡಿರುವದನ್ನು ಮುಂದಿಟ್ಟುಕೊಂಡು ಮತ ಕೇಳಿ ಎಂದು ಹೇಳಲು ಇಷ್ಟಪಡುತ್ತೇನೆ ಎಂದು ಅವರು ತಿಳಿಸಿದರು.

ಕೆಆರ್ ಪೇಟೆ ಮತ್ತು ಶಿರಾ ಬೈ ಎಲೆಕ್ಷನ್ ವಿಶೇಷ ಚುನಾವಣೆಯಾಗಿದ್ದವು. ಆ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಾರ್ಟಿ ಎಂದೂ ಗೆದ್ದಿರಲಿಲ್ಲ. ಅಲ್ಲಿ ಬಿಜೆಪಿ ಸಂಘಟನೆಯೂ ದೊಡ್ಡ ಮಟ್ದದಲ್ಲಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಸುಮಾರು 20 ರಿಂದ 25 ದಿನಗಳ ಕಾಲ ಶಿರಾ ಮತ ಕ್ಷೇತ್ರದಲ್ಲಿದ್ದು ಬೂತ್‌ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಿ ಉತ್ಸಾಹ ತುಂಬುವ ಕೆಲಸ ಮಾಡಿದ್ದೇವು. ಆದರೆ, ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಸಂಘಟನೆ ಬಹಳ ಸದೃಢವಾಗಿದೆ ಎಂದರು.
 

SCROLL FOR NEXT