ರಾಜಕೀಯ

ಕನ್ನಡವನ್ನು ಅಪಮಾನಿಸುವ ಎಂಇಎಸ್ ಪುಂಡರಿಗೆ ತಕ್ಕ ಶಾಸ್ತಿ ಮಾಡಿ: ಸರ್ಕಾರಕ್ಕೆ ಹೆಚ್.ಡಿ. ಕುಮಾರಸ್ವಾಮಿ

Manjula VN

ಬೆಂಗಳೂರು: ವಿನಾಕಾರಣ ಬೆಳಗಾವಿಯಲ್ಲಿ ಕನ್ನಡಿಗರನ್ನು ಕೆಣಕುತ್ತಾ ಕನ್ನಡಕ್ಕೆ ಅಪಮಾನ ಮಾಡುತ್ತಿರುವ ಎಂಇಎಸ್​ಗೆ ತಕ್ಕ ಶಾಸ್ತಿ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬುಧವಾರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್'ನಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, ಕುಂದಾನಗರಿಯ ಪ್ರತಿಷ್ಠೆಗೆ ಧಕ್ಕೆ ತಂದು ಅಲ್ಲಿನ ಸೌಹಾರ್ದ ವಾತಾವರಣವನ್ನು ಹಾಳು ಮಾಡುತ್ತಿರುವ ಎಂಇಎಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಡು ನುಡಿಯ ವಿಷಯದಲ್ಲಿ ರಾಜ್ಯ ಸರಕಾರ ಅಲಕ್ಷ್ಯ ಮಾಡಲೇಬಾರದು. ರಾಜಕೀಯವಾಗಿ ಮೂಲೆಗುಂಪಾಗಿರುವ ಎಂಇಎಸ್, ತಮ್ಮ ಅಸ್ತಿತ್ವಕ್ಕಾಗಿ ಬೆಳಗಾವಿಯಲ್ಲಿ ಗೊಂದಲ, ಗದ್ದಲ ಉಂಟು ಮಾಡುತ್ತಿದೆ. ಭಾಷಾ ಭ್ರಾತೃತ್ವ, ಸ್ನೇಹಶೀಲತೆ ಹಾಗೂ ಶಾಂತಿ ಸಹನೆಗೆ ಹೆಸರಾಗಿರುವ ಕುಂದಾ ನಗರಿಯ ಪ್ರತಿಷ್ಠೆಯನ್ನು ಹಾಳು ಮಾಡುವ ದುರುದ್ದೇಶ ಇವರಿಗಿದೆ.

ಕಳೆದ ಹಲವು ಚುನಾವಣೆಗಳಲ್ಲಿ ರಾಜಕೀಯವಾಗಿ ಮುಖಭಂಗ ಅನುಭವಿಸಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ- ಎಂಇಎಸ್, ಈಗ ಕನ್ನಡ ರಾಜ್ಯೋತ್ಸವ ಹತ್ತಿರಕ್ಕೆ ಬಂದ ಸಂದರ್ಭದಲ್ಲೇ ಪುಂಡಾಟಿಕೆ ಶುರು ಮಾಡಿದೆ. ಕನ್ನಡ ಅಸ್ಮಿತೆಯನ್ನೇ ಕೆಣಕುವ, ಕನ್ನಡಿಗರನ್ನು ಅಪಮಾನಿಸುವ ಹೇಯ ಕೆಲಸಕ್ಕೆ ಮುಂದಾಗಿದೆ. ಕನ್ನಡವನ್ನು ಅಪಮಾನಿಸುವ ಈ ಪುಂಡರಿಗೆ ತಕ್ಕ ಶಾಸ್ತಿ ಮಾಡಬೇಕು ಎಂದು ನಾನು ಸರಕಾರವನ್ನು ಒತ್ತಾಯ ಮಾಡುತ್ತೇನೆಂದು ಹೇಳಿದ್ದಾರೆ.

SCROLL FOR NEXT