ರಾಜಕೀಯ

ಮೋದಿ ಸಂಪುಟದಲ್ಲಿ ಒಬ್ಬರೂ ಕ್ರಿಶ್ಚಿಯನ್, ಮುಸ್ಲಿಂ ಸಚಿವರಿಲ್ಲ... ಇದೆಂತಹ ವಿಕಾಸ: ಸಿದ್ದರಾಮಯ್ಯ ಪ್ರಶ್ನೆ

Manjula VN

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುತ್ತಾರೆ, ಆದರೆ ಮಂತ್ರಿಮಂಡಲದಲ್ಲಿ ಒಬ್ಬನೇ ಒಬ್ಬ ಕ್ರಿಶ್ಚಿಯನ್, ಮುಸ್ಲಿಂ ಸಚಿವನಿಗೆ ಅವಕಾಶ ನೀಡಿಲ್ಲ... ಇದೆಂತಹ ವಿಕಾಸ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ. 

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಬಿಜೆಪಿ ಸುಳ್ಳಿನ ಕಾರ್ಖಾನೆ ಇದ್ದಂತೆ. ಸುಳ್ಳಿನ ಕಂತೆಗಳನ್ನು ಸೃಷ್ಟಿ ಮಾಡಿ ಮುಗ್ಧ ಜನರ ತಲೆಗೆ ತುಂಬುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುತ್ತಾರೆ, ಆದರೆ ಮಂತ್ರಿಮಂಡಲದಲ್ಲಿ ಒಬ್ಬನೇ ಒಬ್ಬ ಕ್ರಿಶ್ಚಿಯನ್, ಮುಸ್ಲಿಂ ಸಚಿವನಿಗೆ ಅವಕಾಶ ನೀಡಿಲ್ಲ' ಎಂದು ದೂರಿದ್ದಾರೆ.

'ಅನ್ನಭಾಗ್ಯ ಯೋಜನೆ ಜಾರಿಗೊಳಿಸಿ, ಬಡವರಿಗೆ ಉಚಿತವಾಗಿ ತಲಾ 7 ಕೆ.ಜಿ ಅಕ್ಕಿ ನೀಡಿದ್ದು ನಮ್ಮ ಸರ್ಕಾರ. ಈ ಯೋಜನೆಯನ್ನು ಮುಂದುವರಿಸಿಕೊಂಡು ಹೋಗಲು ಬಿಜೆಪಿ ಸರ್ಕಾರಕ್ಕೆ ಮನಸಿಲ್ಲ. ತಿನ್ನುವ ಅನ್ನದಲ್ಲೂ ರಾಜಕೀಯ ಮಾಡುತ್ತಾರೆ. ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಬಡವರಿಗೆ ಉಚಿತವಾಗಿ 10 ಕೆ.ಜಿ ಅಕ್ಕಿ ನೀಡುತ್ತೇವೆ.

'ಬಿಜೆಪಿಯವರು ಹಿಂಬಾಗಿಲ ಮೂಲಕ ಮಾತ್ರ ಅಧಿಕಾರಕ್ಕೆ ಬರಬಲ್ಲರು. ಅವರಿಗೆ ಸ್ವಂತ ಶಕ್ತಿ ಇಲ್ಲ. ಹಣ, ಅಧಿಕಾರದ ಆಮಿಷವೊಡ್ಡಿ ಶಾಸಕರನ್ನು ಖರೀದಿಸಿ ಸರ್ಕಾರ ಮಾಡಿದರೂ ಬಿ.ಎಸ್.ಯಡಿಯೂರಪ್ಪ ಅವರನ್ನೇ ಕಿತ್ತು ಬಿಸಾಕಿದರು. ಇದಕ್ಕೇ ಹೇಳುವುದು 'ಮಾಡಿದ್ದುಣ್ಣೋ ಮಹರಾಯ' ಎಂದು' ಕಿಡಿಕಾರಿದ್ದಾರೆ.

'ಆರ್‌ಎಸ್‌ಎಸ್‌ನವರು ತಮ್ಮನ್ನು ತಾವು ದೇಶಭಕ್ತರು ಅಂತ ಕರೆದುಕೊಳ್ಳುತ್ತಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ಕೊಟ್ಟ ಒಬ್ಬನೇ ಒಬ್ಬ ಆರ್‌ಎಸ್‌ಎಸ್‌ನ ನಾಯಕನ ಹೆಸರನ್ನು ಬಿಜೆಪಿ ನಾಯಕರು ಹೇಳಲಿ ನೋಡೋಣ. ಇಷ್ಟೇ ಅವರ ದೇಶಭಕ್ತಿ. ಮಹಾತ್ಮ ಗಾಂಧಿ, ಬಿ.ಆರ್.ಅಂಬೇಡ್ಕರ್, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಕಂಡರೆ ಬಿಜೆಪಿಯವರಿಗೆ ಮೊದಲು ಆಗುತ್ತಿರಲಿಲ್ಲ, ಅವರ ಭಾವಚಿತ್ರವನ್ನೂ ತಮ್ಮ ಕಚೇರಿಗಳಲ್ಲಿ ಹಾಕುತ್ತಿರಲಿಲ್ಲ. ಈಗ ಇದ್ದಕ್ಕಿದ್ದಂತೆ ಅವರನ್ನು ಪ್ರೀತಿಸುವ ಹಾಗೆ ನಾಟಕವಾಡಲು ಆರಂಭಿಸಿದ್ದಾರೆ' ಎಂದು ಆರೋಪಿಸಿದ್ದಾರೆ.

'ಈ ದೇಶದಲ್ಲಿ ಪ್ರತಿಯೊಬ್ಬರಿಗೂ ಎಲ್ಲಿಯವರೆಗೆ ಬಟ್ಟೆ ಮತ್ತು ಹೊಟ್ಟೆತುಂಬಾ ಅನ್ನ ಸಿಗುವುದಿಲ್ಲವೋ ಅಲ್ಲಿಯವರೆಗೆ ನಾನು ಅರೆಬೆತ್ತಲಾಗಿಯೇ ಇರುತ್ತೇನೆ ಎಂದು ಗಾಂಧೀಜಿ ಅವರು ಹೇಳಿದ್ದರು. ನಾವು ಆರಂಭಿಸಿದ್ದ ಇಂದಿರಾ ಕ್ಯಾಂಟೀನ್ ಅನ್ನು ಬಂದ್ ಮಾಡಿ ಬಿಜೆಪಿ ಸರ್ಕಾರ ಬಡವರು ತಿನ್ನುವ ಅನ್ನಕ್ಕೆ ಕಲ್ಲು ಹಾಕಿದೆ. ಗಾಂಧೀಜಿಯವರನ್ನು ಗೌರವಿಸುವುದು ಎಂದರೆ ಅವರ ಭಾವಚಿತ್ರಕ್ಕೆ ಪೂಜೆ ಮಾಡುವುದಲ್ಲ. ಅವರ ಚಿಂತನೆಗಳ ಪಾಲನೆ ಹಾಗೂ ಅವರ ಕನಸಿನ ಭಾರತವನ್ನು ನಿರ್ಮಾಣ ಮಾಡಲು ಶ್ರಮಿಸುವುದು ಎಂಬುದನ್ನು ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕು' ಎಂದು ತಿಳಿಸಿದ್ದಾರೆ.

SCROLL FOR NEXT