ರಾಜಕೀಯ

ಬಿಜೆಪಿಯವರಿಗೇನು ಗೊತ್ತು ನನ್ನ ಹುಟ್ಟಿದ ದಿನ, ನನ್ನ ಡೇಟ್ ಆಫ್ ಬರ್ತ್ ನನ್ನಪ್ಪ-ಅವ್ವನಿಗೆ ಗೊತ್ತು: ಸಿದ್ದರಾಮಯ್ಯ

Sumana Upadhyaya

ಚಿಕ್ಕಬಳ್ಳಾಪುರ: ಸಿದ್ದರಾಮಯ್ಯನವರಿಗೆ 75 ವರ್ಷ ಆಗಿಲ್ಲ, ರಾಜಕೀಯಕ್ಕೆ ಬೇಕಾಗಿ ಸಿದ್ದರಾಮೋತ್ಸವವನ್ನು ಆಚರಿಸಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ, ಅವರಿಗೇನು ಗೊತ್ತು ನನ್ನ ಡೇಟ್ ಆಫ್ ಬರ್ತ್, ನನ್ನ ಹುಟ್ಟಿದ ದಿನ ನನ್ನ ಅವ್ವನಿಗೆ, ನಮ್ಮ ಅಪ್ಪನಿಗೆ ಗೊತ್ತು ಎಂದು ಪ್ರತಿಕ್ರಿಯಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿಂದು ಮಾತನಾಡಿದ ಅವರು, ಸಿದ್ದರಾಮೋತ್ಸವ ಇಷ್ಟೊಂದು ಯಶಸ್ವಿಯಾಯಿತಲ್ಲ, ಆ ಕಾರಣಕ್ಕೆ ಹೊಟ್ಟೆ ಉರಿಯಿಂದ ಬಿಜೆಪಿಯವರು ಹೀಗೆ ಹೇಳುತ್ತಿದ್ದಾರೆ. ಬಿಜೆಪಿಯವರಿಗೆ ಹೇಳಲು ಯಾವುದೇ ವಿಚಾರಗಳಿಲ್ಲ, ಅವರ ಮಾತುಗಳಿಗೆ ಕಿಮ್ಮತ್ತಿಲ್ಲ ಎಂದು ಟೀಕಿಸಿದರು.

ಮೊನ್ನೆ ಆಗಸ್ಟ್ 3ರಂದು ಮಾಜಿ ಸಿಎಂ ಸಿದ್ದರಾಮಯ್ಯನವರ 75ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ದಾವಣಗೆರೆಯಲ್ಲಿ ಅದ್ದೂರಿಯಾಗಿ ಸಿದ್ದರಾಮೋತ್ಸವ ಏರ್ಪಡಿಸಲಾಗಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ಭಾಗಿಯಾಗಿದ್ದರು. ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಉತ್ಸವಕ್ಕೆ ಆಗಮಿಸಿದ್ದರು. ಈ ಕಾರ್ಯಕ್ರಮ ಯಶಸ್ಸು ಕಂಡಿತ್ತು.

ಮೇಲ್ನೋಟಕ್ಕೆ ಇದು ಸಿದ್ದರಾಮಯ್ಯನವರ ಹುಟ್ಟುಹಬ್ಬ ಕಾರ್ಯಕ್ರಮ ಎಂದು ಹೇಳಲಾಗುತ್ತಿದ್ದರೂ ರಾಜಕೀಯ ಕಾರ್ಯಕ್ರಮ, ಮುಂದಿನ ವರ್ಷದ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ವೇದಿಕೆ ಸಜ್ಜುಮಾಡಿಕೊಂಡ ಕಾರ್ಯಕ್ರಮವಿದು ಎಂದು ವಿಶ್ಲೇಷಿಸಲಾಗುತ್ತಿದೆ.

SCROLL FOR NEXT