ರಾಜಕೀಯ

ಸರ್ಕಾರದ 2ನೇ ವರ್ಷದ ವಾರ್ಷಿಕೋತ್ಸವದಲ್ಲಿ ಬಿಎಸ್‌ವೈ ಕಳಿಸಲಾಗಿತ್ತು, 1ನೇ ವಾರ್ಷಿಕೋತ್ಸವದಲ್ಲಿ ಬೊಮ್ಮಾಯಿ!

Ramyashree GN

ಬೆಂಗಳೂರು: ರಾಜ್ಯದಲ್ಲಿ ಸದ್ಯ ಮುಖ್ಯಮಂತ್ರಿ ಬದಲಾಗಲಿದ್ದಾರೆ ಎಂಬ ಸುದ್ದಿಯ ಸುತ್ತಲೇ ಇದೀಗ ಎಲ್ಲರ ಗಮನ ನೆಟ್ಟಿದೆ. ವಿಧಾನಸಭೆ ಚುನಾವಣೆಗೆ 8 ತಿಂಗಳಷ್ಟೇ ಬಾಕಿ ಇರುವಾಗ ಬಿಜೆಪಿ ನಾಯಕರೊಬ್ಬರು ಆಗಸ್ಟ್ 15ರೊಳಗೆ ಎಲ್ಲವೂ ಬದಲಾಗಬಹುದು ಎಂದಿರುವುದು ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಸಂಬಂಧ ರಾಜ್ಯ ಕಾಂಗ್ರೆಸ್ ಕೂಡ ನಿರಂತರವಾಗಿ ಟ್ವೀಟ್ ಮಾಡುವ ಮೂಲಕ ಮುಖ್ಯಮಂತ್ರಿ ಬದಲಾವಣೆ ಕುರಿತು ವ್ಯಂಗ್ಯವಾಡಿದೆ.

'ಸರ್ಕಾರದ ಎರಡನೇ ವರ್ಷದ ವಾರ್ಷಿಕೋತ್ಸವ ಸಂಭ್ರಮದ ಸಂದರ್ಭದಲ್ಲೇ ಬಿ.ಎಸ್. ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿ ಕಳುಹಿಸಲಾಗಿತ್ತು. ಇದೀಗ ಬಸವರಾಜ ಬೊಮ್ಮಾಯಿ ಅವರನ್ನು 1ನೇ ವಾರ್ಷಿಕೋತ್ಸವದ ಹೊತ್ತಲ್ಲಿ ಕೆಳಗಿಳಿಸುವ ವೇದಿಕೆ ಸಜ್ಜಾಗುತ್ತಿದೆ. 1 ವರ್ಷದಲ್ಲಿ 12 ಬಾರಿ ದೆಹಲಿ ಪ್ರವಾಸ ಕೈಗೊಂಡರೂ #PuppetCM ಗೆ ಸಂಪುಟ ಸಂಕಟ ಬಗೆಹರಿಸಲಾಗದ್ದೇ ಇದಕ್ಕೆ ಸಾಕ್ಷಿ! ಎಂದು ಕಾಂಗ್ರೆಸ್ ಟೀಕಿಸಿದೆ.

ಮತ್ತೊಂದು ಟ್ವೀಟ್‌ನಲ್ಲಿ, ಬಿಜೆಪಿ ಹೈಕಮಾಂಡಿಗೆ ಕರ್ನಾಟಕದ ಸಿಎಂಗಳೆಂದರೆ #PuppetCM ಇದ್ದಹಾಗೆ, ಅಡಿಸಿಯೂ ನೋಡುತ್ತಾರೆ, ಬೀಳಿಸಿಯೂ ನೋಡುತ್ತಾರೆ! ಬಿ.ಎಸ್. ಯಡಿಯೂರಪ್ಪ ಅವರಂತಹ ನಾಯಕರನ್ನೇ ಹೇಳದೆ ಕೇಳದೆ ಮನೆಗೆ ಕಳಿಸಿರುವಾಗ ಬೊಂಬೆ ಬಸವರಾಜ ಬೊಮ್ಮಾಯಿ ಅವರು ಅವರು ಯಾವ ಲೆಕ್ಕ! ಎಂದು ಹೇಳಿದೆ.

ಮುಂದುವರಿದು, 'ಸಂತೋಷ ಕೂಟ'ಕ್ಕೆ ಸಂತೋಷಪಡಿಸುವ ಬೊಮ್ಮಾಯಿಯವರ ಪ್ರಯತ್ನ ವಿಫಲವಾಗಿದೆ. ಹಗರಣ ಮತ್ತು ವೈಫಲ್ಯಗಳ ಕೊಡ ತುಂಬಿದೆ. ಆರ್. ಅಶೋಕ್ ಅವರೇ, ಬಿಎಸ್‌ವೈ ಅವರು ಪುತ್ರನಿಗೆ ಟಿಕೆಟ್ ಘೋಷಿಸಿ ಹೈಕಮಾಂಡ್ ಬೆದರಿಕೆಗೆ ಯೂಟರ್ನ್ ಹೊಡೆದರು. ಹೀಗಿರುವಾಗ ತಮ್ಮ ಅಭಿಪ್ರಾಯಕ್ಕೆ ಬೆಲೆ ಇದೆಯೇ? ನಿಮಗಿಂತ ಜೂನಿಯರ್ ಅಶ್ವಥ್ ನಾರಾಯಣರಿಗೆ ಇರುವ ಪ್ರಾಮುಖ್ಯತೆ ನಿಮಗೆ ಇಲ್ಲದಾಗುತ್ತಿತ್ತೇ? ಅಂದಹಾಗೆ ಸಿಎಂ ಎಂಬ ಮಾವಿನ ಹಣ್ಣಿಗಾಗಿ ಮರದ ಕೆಳಗೆ ತಾವೂ ಕಾದು ಕುಳಿತಿದೀರಿ ಅಲ್ಲವೇ ಎಂದು ಪ್ರಶ್ನಿಸಿದೆ.

SCROLL FOR NEXT