ರಾಜಕೀಯ

ಬಿಜೆಪಿಯಲ್ಲಿ ಮಹತ್ವದ ಹುದ್ದೆ ಸಿಕ್ಕಿದ ಬಿ ಎಸ್ ಯಡಿಯೂರಪ್ಪಗೆ ಅಭಿನಂದನೆಗಳ ಮಹಾಪೂರ: ಇಂದು ಸಂಜೆ ತಿರುಪತಿಗೆ

Sumana Upadhyaya

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಬಿಜೆಪಿ ಮಾಜಿ ಮುಖ್ಯಮಂತ್ರಿ, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕಮಲವನ್ನು ಅರಳಿಸಿದ, ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡ ಬಿ ಎಸ್ ಯಡಿಯೂರಪ್ಪ ಅವರಿಗೆ ಬಿಜೆಪಿಯ ಕೇಂದ್ರ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿಯ ಸದಸ್ಯ ಸ್ಥಾನದ ಕೇಂದ್ರ ನಾಯಕನ ದೊಡ್ಡ ಜವಾಬ್ದಾರಿಯನ್ನು ಹೈಕಮಾಂಡ್ ನೀಡಿದೆ.

ರಾಜ್ಯದ ಬಿಜೆಪಿ ನಾಯಕರಿಗೆ ಹಾಗೂ ಸ್ವತಃ ಬಿ ಎಸ್ ಯಡಿಯೂರಪ್ಪನವರಿಗೆ ಇದು ಅಚ್ಚರಿಯ ಬೆಳವಣಿಗೆಯಾಗಿರಬಹುದು. ಹೈಕಮಾಂಡ್ ನ ಈ ನಿರ್ಧಾರ ಹಿಂದೆ ಅಳೆದು ತೂಗಿ ಹಲವು ಲೆಕ್ಕಾಚಾರಗಳಿರಬಹುದು. ಇದು ಮುಂದಿನ ದಿನಗಳಲ್ಲಿ ವಿಧಾನಸಭೆ ಚುನಾವಣೆಗೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ನೋಡಬೇಕಿದೆ.

ಅಂತೂ ನಿನ್ನೆ ಮಧ್ಯಾಹ್ನ ಈ ವಿಷಯ ಘೋಷಣೆಯಾಗುತ್ತಿದ್ದಂತೆ ಯಡಿಯೂರಪ್ಪನವರಿಗೆ ಬಿಜೆಪಿಯ ಕೇಂದ್ರ ನಾಯಕರಿಂದ ಹಿಡಿದು ರಾಜ್ಯ ಬಿಜೆಪಿ ನಾಯಕರು, ಶಾಸಕರು, ಪಕ್ಷದ ಕಾರ್ಯಕರ್ತರು ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಸಂಪುಟ ಸಹೋದ್ಯೋಗಿಗಳ ಜೊತೆಗೆ ನಿನ್ನೆ ಬೆಂಗಳೂರಿನ ಕುಮಾರಕೃಪಾದಲ್ಲಿರುವ ಬಿಎಸ್ ವೈ ನಿವಾಸ ಕಾವೇರಿಗೆ ತೆರಳಿ ಅಭಿನಂದನೆ ಸಲ್ಲಿಸಿದ್ದಾರೆ. ಇಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಬಿ ಎಸ್ ವೈಯನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲಿದ್ದಾರೆ.

ಇಂದು ಸಂಜೆ ಬಿಎಸ್ ವೈ ತಿರುಪತಿಗೆ: ಹೈಕಮಾಂಡ್ ತಮಗೆ ಹೊಸ ಜವಾಬ್ದಾರಿ ನೀಡುತ್ತಿದ್ದಂತೆ ಹೊಸ ಹುಮ್ಮಸ್ಸು, ಹುರುಪು ಯಡಿಯೂರಪ್ಪ ಅವರಿಗೆ ಬಂದಿದ್ದು ಈ ಹೊತ್ತಿನಲ್ಲಿ ದೇವರ ಆಶೀರ್ವಾದ ಪಡೆಯಲೆಂದು ಇಂದು ಸಂಜೆ ತಿರುಪತಿಯ ತಿಮ್ಮಪ್ಪನ ದರ್ಶನ ಮಾಡಲಿದ್ದಾರೆ.

ಸಿಎಂ ಬೊಮ್ಮಾಯಿ ತಮಿಳು ನಾಡು ಪ್ರವಾಸದಲ್ಲಿದ್ದು, ಅವರು ಮಧ್ಯಾಹ್ನ ವಾಪಸ್ಸಾದ ಮೇಲೆ ಸಿಎಂ ಬೊಮ್ಮಾಯಿ, ಸಚಿವ ಅಶೋಕ್ ಜೊತೆ ಬಿ ಎಸ್ ಯಡಿಯೂರಪ್ಪ ಇಂದು ಸಾಯಂಕಾಲ ತಿರುಪತಿಗೆ ಪ್ರವಾಸ ಕೈಗೊಳ್ಳಲಿದ್ದಾರೆ.

ಅಭಿನಂದನೆಗಳ ಮಹಾಪೂರ: ನಿನ್ನೆ ಮಧ್ಯಾಹ್ನದಿಂದ ಬಿಎಸ್ ವೈ ನಿವಾಸ ಬೆಂಬಲಿಗರು, ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರಿಂದ ತುಂಬಿತುಳುಕುತ್ತಿದೆ. ಬಿಜೆಪಿ ನಾಯಕರು, ಶಾಸಕರು, ಕಾರ್ಯಕರ್ತರು ಅವರನ್ನು ಭೇಟಿ ಮಾಡಿ ಅಭಿನಂದನೆ, ಶುಭಾಶಯಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.

ಬೂಕನಕೆರೆಯಲ್ಲಿ ಸನ್ಮಾನ: ಬಿಎಸ್ ವೈಗೆ ಬಿಜೆಪಿ ಸಂಸದೀಯ ಮಂಡಳಿ, ಚುನಾವಣಾ ಸಮಿತಿಯಲ್ಲಿ ಸ್ಥಾನ ನೀಡಿದ್ದಕ್ಕೆ ಅವರ ಹುಟ್ಟೂರು ಮಂಡ್ಯ ಜಿಲ್ಲೆಯ ಬೂಕನಕೆರೆಯಲ್ಲಿ ಬೆಂಬಲಿಗರು ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದಾರೆ. ಬಿಎಸ್ ವೈಗೆ ಸನ್ಮಾನ ನೀಡಲು ರಾಜ್ಯ ಬಿಜೆಪಿ ಘಟಕ ಯೋಜನೆ ಹಮ್ಮಿಕೊಂಡಿದೆ. ಆಗಸ್ಟ್ 28ರಂದು ಬಿಎಸ್ ವೈ ಸ್ವಗ್ರಾಮ ಬೂಕನಕೆರೆಯಲ್ಲಿ ಸಮಾವೇಶ ಮಾಡಿ ಸನ್ಮಾನ ಮಾಡಲು ಯೋಜನೆ ಹಮ್ಮಿಕೊಂಡಿದೆ.

ಮಂಡಳಿಯಿಂದ ಗಡ್ಕರಿ, ಚೌಹಾಣ್ ಗೆ ಕೊಕ್: ಇನ್ನು ಬಿಜೆಪಿಯ ಸಂಸದೀಯ ಮಂಡಳಿಯಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಮಧ್ಯ ಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕೈಬಿಡಲಾಗಿದೆ. 

SCROLL FOR NEXT