ರಾಜಕೀಯ

ಊಟ ತನ್ನಿಚ್ಛೆ, ನೋಟ ಪರರಿಚ್ಛೆ? ಭಕ್ತಿ ಶುದ್ಧವಾಗಿರಬೇಕು: ಮಾಂಸಹಾರಿಗಳ ಓಟು ಬೇಡ ಎಂದು ಹೇಳುವ ತಾಕತ್ತು ಬಿಜೆಪಿಗಿದೆಯೇ?

Shilpa D

ಬೆಂಗಳೂರು: ಸಿದ್ದರಾಮಯ್ಯ ಕಂಡರೆ ಬಿಜೆಪಿಯವರಿಗೆ ನವರಂಧ್ರಗಳಲ್ಲೂ ನಡುಕ ಶುರುವಾಗಿದೆ. ಹಾಗಾಗಿ ಅವರು ಏನು ತಿನ್ನುತ್ತಾರೆ, ಏನು ಉಡುತ್ತಾರೆ ಎಂದು ವಿವಾದ ಸೃಷ್ಟಿಸಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ವಾಗ್ದಾಳಿ  ನಡೆಸಿದ್ದಾರೆ.

ಈ ಸಂಬಂಧ ಟ್ವಿಟ್ಟರ್ ನಲ್ಲಿ ಹರಿಹಾಯ್ದಿರುವ ಅವರು, ಮಾಂಸಹಾರ ತಿನ್ನುವುದು ತಪ್ಪಾದರೆ, ಮಾಂಸಹಾರಿಗಳು‌ ನಮ್ಮ ಪಕ್ಷಕ್ಕೆ ಓಟು ಹಾಕುವುದು ಬೇಡ ಎಂದು ಬಿಜೆಪಿಯವರು ಹೇಳಲಿ. ಹೀಗೆ ಹೇಳುವ ತಾಕತ್ತು ಬಿಜೆಪಿಯವರಿಗಿದೆಯೇ’ ಎಂದು ಅವರು ಪ್ರಶ್ನಿಸಿದ್ದಾರೆ.

ಮಾಂಸಹಾರ ಸೇವನೆಗೆ ಸಂಬಂಧಿಸಿದಂತೆ ಬಿಜೆಪಿಯವರು ಕೀಳು ರಾಜಕಾರಣ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಆಗಲಿ ಅಥವಾ ಇನ್ಯಾರೇ ಆಗಿರಲಿ ಏನನ್ನು ತಿನ್ನಬೇಕು? ಏನನ್ನು ತಿನ್ನಬಾರದು ಎಂದು ಬಿಜೆಪಿಯವರು ನಿರ್ಧರಿಸಬೇಕೇ? ನಮ್ಮ ಆಹಾರ, ನಮ್ಮ ಹಕ್ಕು. ಇದನ್ನು ಕೇಳಲು ಬಿಜೆಪಿಯವರಿಗೆ ಅಧಿಕಾರ ಕೊಟ್ಟವರು ಯಾರು? ಊಟ ತನ್ನಿಚ್ಛೆ, ನೋಟ ಪರರಿಚ್ಛೆ ಅಲ್ಲವೇ? ಭಕ್ತಿ ಶುದ್ಧವಾಗಿರಬೇಕು’ ಎಂದು ಗುಂಡೂರಾವ್ ಪ್ರತಿಪಾದಿಸಿದ್ದಾರೆ.

ಬೇಡರ ಕಣ್ಣಪ್ಪ ಶಿವಲಿಂಗಕ್ಕೆ ಮಾಂಸದ ನೈವೇದ್ಯ ಇಟ್ಟ. ಶಿವ ಕಣ್ಣಪ್ಪನಿಗೆ ಒಲಿಯಲಿಲ್ಲವೇ? ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ, ಇದೇ ಅಂತರಂಗ-ಶುದ್ಧಿ, ಇದೇ ಬಹಿರಂಗ-ಶುದ್ಧಿ, ಇದೇ ಕೂಡಲಸಂಗಮನೊಲಿಸುವ ಪರಿ! ಎಂದಿದ್ದಾರೆ ಬಸವಣ್ಣ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಚಿಕ್ಕಮಗಳೂರು, ಕೊಡಗು ಮತ್ತು ಹಾಸನದ ಸಕಲೇಶಪುರದಲ್ಲಿ‌‌ ಮದುವೆಯ ದಿನವೇ ಮಾಂಸಹಾರ ಮಾಡುತ್ತಾರೆ. ಅದು ಅವರ ಆಹಾರ ಪದ್ದತಿ. ಇನ್ನು ಮಲೆನಾಡಿನ ಕೆಲವು ಕಡೆ ಎಲ್ಲಾ ಹಬ್ಬಗಳಿಗೂ ಮಾಂಸಹಾರ ಮಾಡುತ್ತಾರೆ. ಸಿ.ಟಿ. ರವಿ ಮತ್ತು ಪ್ರತಾಪ ಸಿಂಹ ಮಲೆನಾಡಿನವರು. ಗಣೇಶನ ಹಬ್ಬದ ದಿವಸ ಅವರ ಭಾಗದಲ್ಲಿ ಮಾಂಸಹಾರ ಮಾಡುವುದನ್ನು ಅವರು ನಿರಾಕರಿಸುತ್ತಾರೆಯೇ’ ಎಂದು ಗುಂಡೂ ರಾವ್ ಪ್ರಶ್ನಿಸಿದ್ದಾರೆ.

SCROLL FOR NEXT