ರಾಜಕೀಯ

ರಾಜ್ಯ ವಿಧಾನಸಭಾ ಚುನಾವಣೆ: ಬಿಜೆಪಿ, ಜೆಡಿಎಸ್ ಯಾತ್ರೆಯಿಂದ ಕಾಂಗ್ರೆಸ್ ಮೇಲೆ ಪರಿಣಾಮ!

Manjula VN

ಬೆಂಗಳೂರು: 2023 ರ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಯ ಜನಸಂಕಲ್ಪ ಯಾತ್ರೆ ಮತ್ತು ಜೆಡಿಎಸ್‌ನ ಪಂಚರತ್ನ ಯಾತ್ರೆಯು ಹಳೆಯ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ನ ಮತದಾರರ ನೆಲೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ತನ್ನ ನಾಯಕರನ್ನು ಓಲೈಸುವ ಮೂಲಕ ಕಾಂಗ್ರೆಸ್ ಅನ್ನು ಕೆಣಕಲು ಪ್ರಯತ್ನಿಸುತ್ತಿದೆ, ಆದರೆ ಜೆಡಿಎಸ್ ಈ ಪ್ರದೇಶದಲ್ಲಿ ತನ್ನದೇ ಆದ ಮತದಾರರ ನೆಲೆಯನ್ನು ಕ್ರೋಢೀಕರಿಸುತ್ತಿದೆ, ಪಂಚರತ್ನ ಯಾತ್ರೆಗೆ ಜನರಿಂದ ದೊರೆತಿರುವ ಪ್ರತಿಕ್ರಿಯೆ ಇದಕ್ಕೆ ಸ್ಪಷ್ಟತೆಗಳನ್ನು ನೀಡುತ್ತಿದೆ.

ಮಂಡ್ಯ ಸಂಸದೆ ಸುಮಲತಾ ಬೆಂಬಲಿಗರಾಗಿರುವ ಇಂಡವಾಳು ಸಚ್ಚಿದಾನಂದ ಅವರನ್ನು ಶ್ರೀರಂಗಪಟ್ಟಣದಿಂದ ಬಿಜೆಪಿ ಕಣಕ್ಕಿಳಿಸಿದರೆ ಅದು ಕಾಂಗ್ರೆಸ್ ಭವಿಷ್ಯಕ್ಕೆ ಸಮಸ್ಯೆಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ.

ತುಮಕೂರು ಜಿಲ್ಲೆಯ ಕುಣಿಗಲ್‌ನಲ್ಲಿ ಇತ್ತೀಚೆಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಕಾಂಗ್ರೆಸ್‌ನ ಮಾಜಿ ಸಂಸದ ಎಸ್‌ಪಿ ಮುದ್ದಹನುಮೇಗೌಡ ಅವರು ಕಾಂಗ್ರೆಸ್‌ ಶಾಸಕ ಡಾ.ರಂಗನಾಥ್‌ ಅವರ ಅವಕಾಶವನ್ನು ಕಸಿದುಕೊಳ್ಳುವ ಸಾಧ್ಯತೆಗಳಿದ್ದು, ಇದರಿಂದ ಜೆಡಿಎಸ್ ಅಭ್ಯರ್ಥಿಗೆ ಸಹಾಯವಾಗುವ ಸಾಧ್ಯತೆಗಳಿವೆ ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ ಅವರ ಕ್ಷೇತ್ರವಾಗಿರುವ ಕೊರಟಗೆರೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಯಶಸ್ವಿ ರ್ಯಾಲಿಗಳನ್ನು ನಡೆಸಿದ್ದು, ಈ ಕ್ಷೇತ್ರಗಳಲ್ಲಿನ ಜನರು ಬಿಜೆಪಿ ಪರ ಒಲವು ತೋರಿಸುತ್ತಿದ್ದಾರೆಂದು ತಿಳಿದುಬಂದಿದೆ.

"ಜೆಡಿಎಸ್ ತನ್ನ ಸಾಂಪ್ರದಾಯಿಕ ಭದ್ರಕೋಟೆಯಾದ ಹಳೇ ಮೈಸೂರು ಭಾಗದಲ್ಲಿ ತನ್ನ ಸ್ಥಾನವನ್ನು ಹೆಚ್ಚಿಸಿಕೊಂಡರೆ, ಅದು ಪರೋಕ್ಷವಾಗಿ ಬಿಜೆಪಿಗೆ ತನ್ನ ಮತ ಹಂಚಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ" ಎಂದು ಕಾಂಗ್ರೆಸ್ ನಾಯಕರೊಬ್ಬರು ಟೀಕಿಸಿದ್ದಾರೆ.

ಈ ನಡುವೆ ರ್ಯಾಲಿಗಳಲ್ಲಿ ಬಿಜೆಪಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಚಿತ್ರವನ್ನು ಬಳಸಿಕೊಳ್ಳುತ್ತಿದ್ದು, ಚುನಾವಣೆಗೆ ಯಡಿಯೂರಪ್ಪ ಅವರ ವರ್ಚಸ್ಸನ್ನು ಬಳಸಿಕೊಳ್ಳಳು  ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.

2023ರ ಜನವರಿ ಮಧ್ಯದ ವೇಳೆಗೆ ಕಾಂಗ್ರೆಸ್ ತನ್ನ ರ್ಯಾಲಿಗಳನ್ನು ಆರಂಭಿಸುವ ಸಾಧ್ಯತೆಗಳಿವೆ. ಜೆಡಿಎಸ್ ಇತ್ತೀಚೆಗಷ್ಟೇ 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು, ಹಿರಿಯ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ಚುನಾವಣೆಗೆ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

ಪ್ರಚಾರದಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಬೆಳಗಾವಿ ಅಧಿವೇಶನದಿಂದಲೂ ದೂರ ಉಳಿದಿದ್ದಾರೆ. ಜನವರಿಯಿಂದ ಉತ್ತರ ಕರ್ನಾಟಕದ ಕಡೆ ಗಮನ ಹರಿಸಲಿದ್ದಾರೆ ಎಂದು ಜೆಡಿಎಸ್ ಮುಖಂಡರೊಬ್ಬರು ಮಾಹಿತಿ ನೀಡಿದ್ದಾರೆ.

SCROLL FOR NEXT