ರಾಜಕೀಯ

ಕಾಂಗ್ರೆಸ್ ಶಾಸಕನಿಗೆ ಗದರಿದ ಸಚಿವ: ವಿಪಕ್ಷಗಳ ಆಕ್ರೋಶ, ಧರಣಿಗೆ ಕಲಾಪ ಬಲಿ

Manjula VN

ಬೆಳಗಾವಿ: ಶಾಸಕನಿಗೆ ಗದರಿದ ಆಡಳಿತಾರೂಢ ಪಕ್ಷದ ಸಚಿವರು ಗದರಿದ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸದನದ ಬಾವಿಗಿಳಿದು ತೀವ್ರ ಪ್ರತಿಭಟನೆ ನಡೆಸಿದರು. ಈ ಧರಣಿ ಎರಡು ಬಾರಿ ಸದನ ಮುಂದೂಡಿಕೆಯಾಗುವಂತೆ ಮಾಡಿ ಸರಿ ಸುಮಾರು ಅರ್ಧ ದಿನದ ಕಲಾಪವನ್ನು ಬಲಿ ಪಡೆದುಕೊಂಡಿತು.

ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಸಿದ್ದು ಸವದಿ ಪ್ರಶ್ನೆಗೆ ಶ್ರಾರಾಮುಲು ನೀಡಿದ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪ್ರತಿಪಕ್ಷಗಳ ಸದಸ್ಯರು ಬಾವಿಗಿಳಿದು ಪ್ರತಿಭಟಿಸಿದರು.

ಈ ವೇಳೆ ಪ್ರತ್ಯೇಕ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದ ಸ್ಪೀಕರ್ ಭರವಸೆಗೆ ಓಗೊಟ್ಟು ಉಳಿದ ಎಳ್ಲಾ ಸದಸ್ಯರು ತಮ್ಮ ಸ್ಥಾನಗಳಿಗೆ ತೆರಳಿದರೂ ಕಾಂಗ್ರೆಸ್ ಸದಸ್ಯ ರಂಗನಾಥ್ ಮಾತ್ರ ತೆರಳಲಿಲ್ಲ.

ಇದರಿಂದ ಕೆರಳಿದ ಸಚಿವ ಗೋವಿಂದ ಕಾರಜೋಳ, ಎಲ್ಲರೂ ಹೋಗಿದ್ರೆ ನಿಂದೇನು ಸ್ಪೆಷಲ್, ಹೊರಗ್ ನಡಿ ನೀ ಮೊದಲು, ಏಯ್, ನಡೀ ಹೊರಗೆ ಎಂದು ಏರು ಧ್ವನಿಯಲ್ಲಿ ಏಕ ವಚನದಲ್ಲೇ ಗದರಿದರು. ಇದಕ್ಕೆ ಪ್ರತ್ಯುತ್ತ ನೀಡಲು ಮುಂದಾದ ರಂಗನಾಥ್ ವಿರುದ್ಧ ಅಕ್ರೋಶಭರಿತ ಮುಖ ಭಾವದೊಂದಿಗೆ ಮುಗಿಬಿದ್ದ ಕಾರಜೋಳ, ಮುರ್ಖನಂತೆ ಮಾತನಾಡ್ತಿದಿಯ, ನಾಲಿಗೆ ಬಿಗಿ ಹಿಡಿದು ಮಾತನಾಡು. ಹುಡುಗಾಟಿಕೆ ಮಾಡುತ್ತಿದ್ದೀಯಾ. ಮೊದಲು ನಿನ್ನ ಸದನದಿಂದ ಹೊರಗೆ ಹಾಕಬೇಕು ಎಂದು ಹರಿಹಾಯ್ದರು.

ಇದು ಉಳಿದ ಕಾಂಗ್ರೆಸ್ ಸದಸ್ಯರನ್ನು ಕ್ರುದ್ಧಗೊಳಿಸಿತು. ಹೀಗಾಗಿ ಮತ್ತೆ ಎಲ್ಲರೂ ಸದನದ ಬಾವಿಗಿಳಿದು, ಸದಸ್ಯರೊಬ್ಬರಿಗೆ ಅಗೌರವ ಸೂಚಿಸಿದ ಕಾರಜೋಳ ಅವರು ಕ್ಷಮೆಯಾಚಿಸಬೇಕು. ಜೊತೆಗೆ ಬಸ್ಸು ಕೊರತೆ ವಿಚಾರವಾಗಿ ಅರ್ಧ ಗಂಟೆ ವಿಶೇಷ ಚರ್ಚೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು.

ಇದೇ ಸಮಯಕ್ಕೆ ಸದನದ ಒಳಗೆ ಬಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ಸದಸ್ಯರೊಂದಿಗೆ ಸೇರಿ ಕಾರಜೋಳ ವಿರುದ್ಧ ಹರಿಹಾಯ್ದರು.

ಇದರಿಂತ ಪ್ರೇರಿತರಾದ ಧರಣಿ ನಿರಂತ ಕಾಂಗ್ರೆಸ್ ಸದಸ್ಯರು ಕಾರಜೋಳ ಅವರು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

ಪ್ರತಿಯಾಗಿ ಕರಜೋಳ ಪರ ನಿಂತ ಬಿಜೆಪಿ ಸದಸ್ಯರು ಧರಣಿ ನಿರತರೊಂದಿಗೆ ವಾಕ್ಸಮರಕ್ಕೆ ಇಳಿದರು. ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ರೌಡಿ ಸರ್ಕಾರಕ್ಕೆ ಧಿಕ್ಕಾರ, ಕಳ್ಳ ಕಾಂಗ್ರೆಸ್'ಗೆ ಧಿಕ್ಕಾರ ಎಂಬ ಘೋಷಣೆ, ಪ್ರತಿ  ಘೋಷಣೆ ತೀವ್ರಗೊಂಡು ಯಾರು ಏನು ಹೇಳುತ್ತಿದ್ದಾರೆ ಎಂಬುದು ಕೇಳದಂತಹ ಸ್ಥಿತಿ ನಿರ್ಮಾಣಗೊಂಡಿತು. ಇದರಿಂದ ಸ್ಪೀಕರ್ ಎರಡು ಬಾರಿ ಕಲಾಪವನ್ನು ಮುಂದೂಡಿದರು.

ಬಳಿಕ ಅಂತಿಮವಾಗಿ ಮಧ್ಯಾಹ್ನ ಸ್ಪೀಕರ್ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಗೋವಿಂದ ಕಾರಜೋಳ, ಜೆಸಿ ಮಾಧುಸ್ವಾಮಿ ಅವರು ಸಂಧಾನಸಭೆ ನಡೆಸಿ ವಿವಾದವನ್ನು ಮುಂದುವರೆಸದಿರಲು ನಿರ್ಧರಿಸಿದರು.

ಪರಿಣಾಮ ಭೋಜನ ವಿರಾಮದ ಬಳಿಕ ಸೇರಿದ ಕಲಾಪದಲ್ಲಿ ಮಾತನಾಡಿ ಸಿದ್ದರಾಮಯ್ಯ, ಕಾರಜೋಳ ಅವರು ವಿಷಾದ ವ್ಯಕ್ತಪಡಿಸದಿದ್ದರೂೂ, ಕಲಾಪದ ಸಮಯ ಹಾಳಾಗಬಾರದು ಎಂಬ ಕಾರಣಕ್ಕೆ ಇದನ್ನು ಕೈಬಿಡುತ್ತಿದ್ದೇವೆ. ಆದರೆ, ಸ್ಪೀಕರ್ ಒಪ್ಪಿಗೆಯಂತೆ ಬಸ್ಸು ವಿಚಾರವನ್ನು ಪ್ರತ್ಯೇಕ ಚರ್ಚೆಗೆ ನೀಡಬೇಕು. ರಂಗನಾಥ್ ಹಾಗೂ ಅಂಜಲಿ ನಿಂಬಾಳ್ಕರ್ ಅವರ ಬಗ್ಗೆ ಆಡಿರುವ ಮಾತುಗಳನ್ನು ಕಡದಿಂದ ತೆಗೆಯಬೇಕು ಎಂಬ ಷರತ್ತಿಗೆ ಒಪ್ಪಿಗೆ ಸೂಚಿಸಿರುವುದರಿಂದ ಧರಣಿ ಕೈಬಿಡುತ್ತಿದ್ದೇವೆಂದು ಸುದೀರ್ಘ ಗದ್ದಲಕ್ಕೆ ತೆರೆ ಎಳೆದರು.

SCROLL FOR NEXT