ರಾಜಕೀಯ

2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿ ಸ್ಪರ್ಧೆ: ಅಮಿತ್ ಶಾ

Lingaraj Badiger

ಬೆಂಗಳೂರು: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಹೇಳಿದ್ದಾರೆ.

ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಜೆಪಿಯ ಬೂತ್ ಅಧ್ಯಕ್ಷರು ಮತ್ತು ಬೂತ್ ಮಟ್ಟದ ಏಜೆಂಟರ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ, , 2023 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

ಕರ್ನಾಟಕದಲ್ಲಿ ತ್ರಿಕೋನ ಸ್ಪರ್ಧೆ ಇದೆ ಎಂದು ಪತ್ರಕರ್ತರು ಹೇಳುತ್ತಿದ್ದಾರೆ. ಆದರೆ ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆ ಇಲ್ಲ. ಈ  ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಏಕೆಂದರೆ ಜೆಡಿಎಸ್‌ಗೆ ಮತ ಹಾಕುವುದು ಎಂದರೆ ಕಾಂಗ್ರೆಸ್‌ಗೆ ಮತ ಹಾಕಿದಂತೆ. ಹಾಗಾಗಿ ಇದು ನೇರ ಹೋರಾಟ ಅಲ್ಲವೇ?" ಎಂದು ಶಾ ಪ್ರಶ್ನಿಸಿದರು.
        
ಜೆಡಿಎಸ್ ಪಕ್ಷದೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತಿದೆ ಎಂಬ ವದಂತಿ ಹಬ್ಬಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, “ನಾವು ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಕರ್ನಾಟಕದ ಕಾರ್ಯಕರ್ತರು ಮತ್ತು ಜನರಿಗೆ ಹೇಳಲು ಬಂದಿದ್ದೇನೆ. ಬಿಜೆಪಿ ಏಕಾಂಗಿಯಾಗಿ ಹೋರಾಡಿ ಮತ್ತೆ ಸರ್ಕಾರ ರಚಿಸುತ್ತದೆ ಎಂದರು.        
"ರಾಜ್ಯದಲ್ಲಿ ಒಂದು ಕಡೆ ಬಿಜೆಪಿಯ ರೂಪದಲ್ಲಿ ದೇಶಭಕ್ತರ ಸಂಘಟನೆ ಇದೆ, ಇನ್ನೊಂದು ಕಡೆ ಕಾಂಗ್ರೆಸ್ ನೇತೃತ್ವದಲ್ಲಿ ತುಕಡೇ-ತುಕ್ಡೆ ಗ್ಯಾಂಗ್ ಇದೆ. ಕರ್ನಾಟಕದ ಜನತೆ ದೇಶಭಕ್ತರೊಂದಿಗಿದ್ದಾರೋ ಅಥವಾ ಈ ದೇಶವನ್ನು ವಿಭಜಿಸಲು ಬಯಸುವ ಜನರನ್ನು ಬೆಂಬಲಿಸುವವರ ಜೊತೆಯಲ್ಲಿದ್ದಾರೋ ಎಂಬುದನ್ನು ಈಗ ನಿರ್ಧರಿಸಲಿ ” ಎಂದು ಕೇಂದ್ರ ಸಚಿವರು ಹೇಳಿದರು. 

SCROLL FOR NEXT