ರಾಜಕೀಯ

ನನಗೆ ಶಕ್ತಿ ಇದೆ, ತಾಕತ್ತು ಇದೆ ಅನಿಸಿದ್ರೆ ಜವಾಬ್ದಾರಿ ಕೊಡ್ತಾರೆ: ಬಿ.ವೈ. ವಿಜಯೇಂದ್ರ

Srinivasamurthy VN

ಬೆಂಗಳೂರು: ನನಗೆ ಶಕ್ತಿ ಇದೆ, ತಾಕತ್ತು ಇದೆ.. ಕೆಲಸ ಮಾಡುವ ಸಾಮರ್ಥ್ಯವಿದೆ ಎಂದು ಬಿಜೆಪಿ ಹೈಕಮಾಂಡ್ ಗೆ ಅನ್ನಿಸಿದರೆ ಅವರೇ ಜವಾಬ್ದಾರಿ ನೀಡುತ್ತಾರೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ಹೇಳಿದ್ದಾರೆ.

ಅಪ್ಪನಿಂದ ಶಿಕಾರಿಪುರ ಕ್ಷೇತ್ರ ಪಡೆದಿರುವ ಬಿ.ವೈ. ವಿಜಯೇಂದ್ರರಿಗೆ ಹೈಕಮಾಂಡ್ ಟಿಕೆಟ್ ಕೊಡುತ್ತಾ ಎಂಬ ಪ್ರಶ್ನೆಗಳೆದ್ದಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಕುಟುಂಬ ರಾಜಕಾರಣದ ಬಗ್ಗೆ ನಾನು ಒಪ್ಪಲ್ಲ. ನಮ್ಮ ಪಕ್ಷವೂ ಕೂಡ ಈ ಬಗ್ಗೆ ಒಪ್ಪಲ್ಲ. ಬಿಜೆಪಿಯಲ್ಲಿ ಹಲವು ವರ್ಷದಿಂದ ನಾನೂ ದುಡಿಯುತಿದ್ದೇನೆ. ನಿವೃತ್ತಿ ನಂತರವೂ ಸಕ್ರಿಯ ರಾಜಕಾರಣದಲ್ಲಿ ಇರ್ತೇನೆ ಅಂತ ನಿನ್ನೆ ಯಡಿಯೂರಪ್ಪನವರು ಹೇಳಿದ್ದಾರೆ. ನಾನು ಉಪಾಧ್ಯಕ್ಷನಾಗಿ ಅವರ ಮಾತಿಗೆ ಬದ್ಧ. ಪಕ್ಷದ ಸೂಚನೆ ಏನಿದೆಯೋ ಅದರಂತೆ ನಡೆಯುತ್ತೇನೆ. ನನ್ನ ಬಗ್ಗೆ ನಾನು ಪ್ರಚಾರ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಎಂದರು.

ಮೈಸೂರಿನಲ್ಲಿ ನಿಲ್ಲುವುದೋ ಅಥವಾ ಶಿಕಾರಿಪುರದಲ್ಲಿ ನಿಲ್ಲುವುದೋ ಅನ್ನೋ ಪ್ರಶ್ನೆ ಬಗ್ಗೆ  ಅನೇಕ ಚರ್ಚೆಗಳು ಆಗ್ತಿವೆ. ವೈಯಕ್ತಿಕ ಹಿತದೃಷ್ಟಿಯಿಂದ ಯಡಿಯೂರಪ್ಪನವರು ಈಗ ನಿರ್ಧಾರ ತೆಗೆದುಕೊಂಡಿದ್ದಾರೆ. ನಾನು ಶಿಕಾರಿಪುರದಲ್ಲಿ ನಿಲ್ಲುತ್ತೇನೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಹಳೆ ಮೈಸೂರು ಭಾಗದಲ್ಲಿ ಸಂಘಟನೆ ಮಾಡಬೇಕು ಅಂತ ಹೈಕಮಾಂಡ್ ಬಯಸಿದೆ. ನಾನು ಪಕ್ಷ ಸಂಘಟನೆ ಮಾಡಲು ಸಿದ್ಧನಿದ್ದೇನೆ. ಯಡಿಯೂರಪ್ಪ ಅವರಾಗಿರಬಹುದು, ಬೇರೆಯವರೇ ಆಗಿರಬಹುದು. ತಮ್ಮ ಮಕ್ಕಳು ಪರಿಶ್ರಮದಿಂದ ಮೇಲೆ ಬರಬೇಕು ಅಂತ ಬಯಸುತ್ತಾರೆ. ವಿಜಯೇಂದ್ರಗೆ ಶಕ್ತಿ ಇದೆ, ತಾಕತ್ ಇದೆ ಅನ್ನೋದು ಅವರಿಗೆ ಅನಿಸಿದ್ರೆ ಜವಾಬ್ದಾರಿ ಕೊಡ್ತಾರೆ ಎಂದು ವಿಜಯೇಂದ್ರ, ವಿರೋಧಿಗಳಿಗೆ ನೇರವಾಗಿ ಸವಾಲು ಹಾಕಿದರು.

ಪಿಎಸ್ಐ ಹಗರಣದಲ್ಲಿ ವಿಜಯೇಂದ್ರ ಹೆಸರಿದೆ ಅನ್ನೋ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರು ಹಿರಿಯರಿದ್ದಾರೆ. ಪಿಎಸ್ಐ ಹಗರಣ ಕಾಂಗ್ರೆಸ್‌ನವರ ಮನೆ ಬಾಗಿಲಿಗೆ ಬರಲಿದೆ. ಈ ರೀತಿಯ ಕಪೋಲ‌ ಕಲ್ಪಿತ ಆರೋಪಗಳು ಸರಿಯಲ್ಲ. ನಾನು ಹಗರಣದಲ್ಲಿ ಇರೋದು ಸಾಬೀತಾದರೆ ಮುಂದಿನ ಚುನಾವಣೆಗೆ ನಿಲ್ಲಲ್ಲ ಎನ್ನುವ ಮೂಲಕ ಪಿಎಸ್ಐ ಹಗರಣದಲ್ಲಿ ತಾನಿಲ್ಲ ಎಂದು ನೇರವಾಗಿ ಹೇಳಿದರು.
 

SCROLL FOR NEXT