ರಾಜಕೀಯ

ಗತಿಸಿ ಹೋದವರನ್ನು ಬಲಿಪಶು ಮಾಡುವ ಹುನ್ನಾರವೇ? ಖರ್ಗೆ ಅವರೇ, ಅಪಾಯದ ತೂಗುಗತ್ತಿ ನಿಮ್ಮ ತಲೆ ಮೇಲಿದೆ!

Shilpa D

ಬೆಂಗಳೂರು: ನ್ಯಾಷನಲ್‌ ಹೆರಾಲ್ಡ್‌ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಇ.ಡಿ ವಿಚಾರಣೆ ವಿರೋಧಿಸಿ ಕರ್ನಾಟಕ ಸೇರಿ ದೇಶದಾದ್ಯಂತ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಬಿಜೆಪಿ ಕಿಡಿಕಾರಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ತನ್ನ ಕುಟುಂಬಕ್ಕೆ ನಿಷ್ಠರಾಗಿದ್ದವರನ್ನೂ ರಾಹುಲ್ ಗಾಂಧಿ ತೇಜೋವಧೆ ಮಾಡುತ್ತಿದ್ದಾರೆ. ಸತ್ತವರ ತಲೆಗೆ ಹಗರಣ ಕಟ್ಟುವ ಹುನ್ನಾರ ನಡೆಯುತ್ತಿದೆ. ನಾನು ಕೂಡಾ ರಾಹುಲ್ ಗಾಂಧಿ ಎಂದು ಬೊಬ್ಬಿರಿಯುವ ನಕಲಿ ವೀರರೇ ನಿಮಗಿದೋ ಎಚ್ಚರಿಕೆ. ಖರ್ಗೆ ಅವರೇ, ಅಪಾಯದ ತೂಗುಗತ್ತಿ ನಿಮ್ಮ ತಲೆ ಮೇಲಿದೆ.

ಕೋತಿ ತಿಂದು ಮೇಕೆ ಮೂತಿಗೆ ಒರೆಸಿದ ಕತೆಯಂತೆ ನ್ಯಾಷನಲ್ ಹಗರಣ ಸಾಗುತ್ತಿದೆ. ರಾಹುಲ್ ಗಾಂಧಿ‌ ನೇತೃತ್ವದ ಯಂಗ್ ಇಂಡಿಯಾ ಸಂಸ್ಥೆ ಮಾಡಿದ ಭ್ರಷ್ಟಾಚಾರವನ್ನು ಮರಣ ಹೊಂದಿದ ವೋರಾ ತಲೆಗೆ ಕಟ್ಟುತ್ತಿರುವುದೇಕೆ? ಇಡಿ ವಿಚಾರಣೆ ಸಂದರ್ಭದಲ್ಲಿ ನ್ಯಾಷನಲ್ ಹೆರಾಲ್ಡ್ ಅವ್ಯವಹಾರವನ್ನೆಲ್ಲಾ ಮೋತಿಲಾಲ್ ವೋರಾ ತಲೆಗೆ ಕಟ್ಟಲಾಗಿದೆ ಎಂದು ಮಾಧ್ಯಮಗಳು ಸುದ್ದಿ ಮಾಡುತ್ತಿವೆ.

ಹಗರಣಕ್ಕೆ ವೋರಾ ಕಾರಣ ಎಂಬರ್ಥದಲ್ಲಿ ರಾಹುಲ್ ಗಾಂಧಿ ಹೇಳಿಕೆ ನೀಡಿರುವುದು ಪಲಾಯನವಾದ. ಗತಿಸಿ ಹೋದವರನ್ನು ಬಲಿಪಶು ಮಾಡುವ ಹುನ್ನಾರವೇ? ನಕಲಿ ಗಾಂಧಿ ಕುಟುಂಬ ತೆರಿಗೆ ವಂಚನೆ, ಅಕ್ರಮ ಹಣ ವರ್ಗಾವಣೆ ಆರೋಪಕ್ಕಾಗಿ ವಿಚಾರಣೆ ಎದುರಿಸುತ್ತಿದೆ. ಆದರೆ ಈ ಕುಟುಂಬದ ಭಜನಾ ಮಂಡಳಿ ದೇಶಾದ್ಯಂತ ಪ್ರತಿಭಟನೆ ಮಾಡುತ್ತಿದೆ. ಗಾಂಧಿ ಹೆಸರಿಟ್ಟುಕೊಂಡ ಮಾತ್ರಕ್ಕೆ ಅವರೆಲ್ಲಾ ಗಾಂಧಿಗಳೇ? ನಕಲಿ ಗಾಂಧಿಗಳನ್ನು ವಿಚಾರಿಸಬಾರದೇಕೆ? ಎಂದು ಪ್ರಶ್ನಿಸಿದೆ.

ಮಹಾತ್ಮ ಗಾಂಧಿ ನೇತೃತ್ವದ ಕಾಂಗ್ರೆಸ್ ಹೋರಾಟ Vs ನಕಲಿ ಗಾಂಧಿ ನೇತೃತ್ವದ ಕಾಂಗ್ರೆಸ್ ಹೋರಾಟ, ಗಾಂಧೀಜಿ ದೇಶಕ್ಕಾಗಿ ದಂಡಿ ಸತ್ಯಾಗ್ರಹ, ಉಪ್ಪಿನ ಸತ್ಯಾಗ್ರಹ ಮುಂತಾದ ಚಳುವಳಿ ನಡೆಸಿದರು. ಆದರೆ ಕಾಂಗ್ರೆಸ್ ನಕಲಿ ಗಾಂಧಿ ಕುಟುಂಬಕ್ಕಾಗಿ ಪ್ರತಿಭಟಿಸುತ್ತಿದೆ. ನಕಲಿ ಗಾಂಧಿಗಳು ಕಾನೂನಿಗಿಂತಲೂ ಮೇಲ್ಪಟ್ಟವರೇ? ಎಂದು ಬಿಜೆಪಿ ಟೀಕಿಸಿದೆ.

SCROLL FOR NEXT