ರಾಜಕೀಯ

ಬಳಕೆಯಲ್ಲಿರುವ ಹಳೇ ವಿಶ್ವವಿದ್ಯಾಲಯವನ್ನೇ ಉದ್ಘಾಟಿಸಿದ ಪ್ರಧಾನಿ ಮೋದಿ: ಕಾಂಗ್ರೆಸ್ ಟೀಕೆ

Manjula VN

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಈಗಾಗಾಲೇ ಭಾಗಶಃ ಕಾರ್ಯ‌ನಿರ್ವಹಣೆ ಮಾಡುತ್ತಿರುವ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (ಬೇಸ್)ನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮತ್ತೊಮ್ಮೆ ಉದ್ಘಾಟನೆ ಮಾಡಿದ್ದಾರೆಂದು ಕಾಂಗ್ರೆಸ್ ಟೀಕಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ವಿಶ್ವಕಂಡ ಅಪ್ರತಿಮ ಆರ್ಥಿಕ ತಜ್ಞ ಡಾ. ಬಿ.ಆರ್. ಅಂಬೇಡ್ಕರ್ ಅವರ 125ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರ ನೆನಪಿಗೆ ಅರ್ಥಪೂರ್ಣವಾದ ಸ್ಮಾರಕರೂಪದಲ್ಲಿ ಯೋಜನೆಯೊಂದನ್ನು ರೂಪಿಸಬೇಕೆಂಬ ನಮ್ಮ ಸರ್ಕಾರದ ಕನಸು ನನಸಾಗಿ ರೂಪುಗೊಂಡದ್ದು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಿಮಿಕ್ಸ್.

ಐದು ವರ್ಷಗಳ ಹಿಂದೆ (4-10-2017)ರಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಬೆಂಗಳೂರಿಗೆ ಬಂದು ನಮ್ಮ ಸರ್ಕಾರದ ಹೆಮ್ಮೆಯ ಯೋಜನೆಯಾದ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಉದ್ಘಾಟಿಸಿದ್ದು ನಾನು ಮುಖ್ಯಮಂತ್ರಿಯಾಗಿದ್ದ ಕಾಲದ ಮಧುರ ಮತ್ತು ಸಾರ್ಥಕ ನೆನಪು.

ಬೇಸ್ ಕಟ್ಟಡದ ಶಂಕುಸ್ಥಾಪನೆ ಮಾಡಿದ್ದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ. ಈ ಕಟ್ಟಡವನ್ನು 6 ತಿಂಗಳಲ್ಲಿ ಪೂರ್ಣಗೊಳಿಸಿದ್ದು ನಮ್ಮ ಸರ್ಕಾರದ ಹೆಮ್ಮೆಯ ಸಾಧನೆ. ಜ್ಞಾನಭಾರತಿ ಕ್ಯಾಂಪಸ್ ನಲ್ಲಿಯೇ ಇದ್ದ ಕಟ್ಟಡದಲ್ಲಿಯೇ 2017ರ ಜೂನ್ ನಲ್ಲಿ ಅರ್ಥಶಾಸ್ತ್ರ ತರಗತಿಗಳು ಪ್ರಾರಂಭವಾಗಿತ್ತು.

ಪ್ರಧಾನಿ ಮೋದಿಯವರು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಿಮಿಕ್ಸ್ ನ ನೂತನ ಆವರಣವನ್ನು ಉದ್ಘಾಟಿಸುತ್ತಿದ್ದುು, ಈ ಸಮಾರಂಭಕ್ಕೆ ಶುಭ ಹಾರೈಸುವೆ ಎಂದು ಹೇಳಿದ್ದಾರೆ.

ಈಗಾಗಲೇ 3 ಬ್ಯಾಚ್‌ಗಳ ಪದವೀಧರರು ಪದವಿ ಪಡೆದಿರುವ ಅರೆ-ಕಾರ್ಯಕಾರಿ ಕ್ಯಾಂಪಸ್‌ ಅನ್ನು ಪ್ರಧಾನಿ ಏಕೆ ಉದ್ಘಾಟಿಸುತ್ತಿದ್ದಾರೆ" ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಕಟ್ಟಡ ಉದ್ಘಾಟನೆ ಕುರಿತು ಇನ್ನೂ ಕೆಲವರು, ವಿದ್ಯಾರ್ಥಿಗಳು ಈಗಾಗಲೇ ತರಗತಿಗಳಿಗೆ ಹಾಜರಾಗುತ್ತಿರುವಾಗ ಇದು ಹೊಚ್ಚ ಹೊಸ ಕಟ್ಟಡ ಎಂದು ಅಧಿಕಾರಿಗಳು ಪ್ರಧಾನಿ ಮೋದಿಯವರನ್ನು ಹೇಗೆ ದಾರಿ ತಪ್ಪಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.

SCROLL FOR NEXT